ಬೆಂಗಳೂರು: ಸದನದಲ್ಲಿ ಗಂಭೀರ ಚರ್ಚೆಗಳ ನಡುವೆ ಆಗಾಗ ಹಾಸ್ಯ ಪ್ರಸಂಗಗಳು, ಹಾಸ್ಯ ಸನ್ನಿವೇಶಗಳು ನಡೆಯುವುದುಂಟು.
ಇಂದು ವಿಧಾನಸಭೆಯಲ್ಲಿಯೂ ಈ ರೀತಿಯ ಪ್ರಸಂಗ ನಡೆದುಹೋಯಿತು. ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಕಾಲೇಜು ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್ ಪ್ರಕರಣದ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯನವರು ಗಂಭೀರವಾಗಿ ಚರ್ಚೆ ಮಾಡುತ್ತಿರುವಾಗ ಅವರ ಪಂಚೆ ಕಳಚಿ ಹೋಯಿತು.
ಆಗ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಎದ್ದು ಬಂದು ಮೆತ್ತಗೆ ಕಿವಿಯಲ್ಲಿ ನಿಮ್ಮ ಪಂಚೆ ಕಳಚಿಕೊಂಡಿದೆ ಎಂದು ಎಚ್ಚರಿಸಿದರು. ಆಗ ಸಿದ್ದರಾಮಯ್ಯನವರು, ನಗುನಗುತ್ತಾ ಪಂಚೆ ಬಿಚ್ಚಿ ಹೋಗಿದೆ, ಸರಿ ಮಾಡಿಕೊಳ್ಳುತ್ತೇನೆ, ಈಶ್ವರಪ್ಪ ಪಂಚೆ ಬಿಚ್ಚಿ ಹೋಗಿದೆ ಎಂದು ಹೇಳಿ ಕುಳಿತುಕೊಂಡು ಸರಿಪಡಿಸಿಕೊಂಡರು.
ಯಾರಿಗೂ ಗೊತ್ತಾಗುವುದು ಬೇಡ ಅಂತ ಅಧ್ಯಕ್ಷರು ಬಂದು ನಿಮ್ಮ ಕಿವಿಯಲ್ಲಿ ಮೆತ್ತಗೆ ಹೇಳಿದರೆ ನೀವು ಅದನ್ನು ಊರೆಗೆಲ್ಲಾ ಹೇಳಿಕೊಂಡು ಬಂದಿರಿ, ಅವರ ಶ್ರಮ ವ್ಯರ್ಥವಾಯಿತು. ನೋಡಿ ಈಶ್ವರಪ್ಪನವರು ಕಾಯ್ತಿರ್ತಾರೆ ಎಂದು ಕಾಂಗ್ರೆಸ್ ನಾಯಕ ರಮೇಶ್ ಕುಮಾರ್ ಎದ್ದುನಿಂತು ತಮಾಷೆ ಮಾಡಿದರು.
ಆಗ ಸಿದ್ದರಾಮಯ್ಯನವರು, ಇತ್ತೀಚೆಗೆ ಹೊಟ್ಟೆ ಸ್ವಲ್ಪ ದಪ್ಪ ಆಗಿದೆ, ಕಳಚಿಕೊಳ್ಳುತ್ತದೆ. ಮೊದಲು ಪಂಚೆ ಕಟ್ಟಿದರೆ ಬಿಚ್ಚಿಕೊಳ್ಳುತ್ತಿರಲಿಲ್ಲ, ಈಗ ಕೊರೋನಾ ಬಂದ ಬಳಿಕ ನಾಲ್ಕೈದು ಕೆಜಿ ಹೆಚ್ಚು ತೂಕ ಬಂದಿದೆ. ಹಾಗಾಗಿ ಪಂಚೆ ಬಿಚ್ಚಿಕೊಳ್ಳುತ್ತದೆ, ಅದಕ್ಕೆ ಯಾವಾಗಲೂ ಜುಬ್ಬಾ ಹಾಕಿಕೊಳ್ಳೋದು. ಬಹಳಷ್ಟು ಮಂದಿ ಲುಂಗಿನೂ ಹಾಕಲ್ಲ, ಧೋತಿನೂ ಉಟ್ಟುಕೊಳ್ಳುವುದಿಲ್ಲ, ಪ್ಯಾಂಟೂ ಹಾಕೊಳ್ಳುವುದಿಲ್ಲ, ನಿಲುವಂಗಿ ಹಾಕಿಕೊಳ್ಳುತ್ತಾರೆ ಎಂದು ಪಂಚೆ ಬಿಚ್ಚಿಕೊಂಡಿದ್ದಕ್ಕೆ ನಗುತ್ತಾ ಸಿದ್ದರಾಮಯ್ಯ ಉತ್ತರಿಸಿದರು.
ಆಗ ಈಶ್ವರಪ್ಪನವರು ನಿಮ್ಮ ಜುಬ್ಬಾ ಉದ್ದವಾಗಿದೆ, ಹಾಗಾಗಿ ಪಂಚೆ ಕಳಚಿಕೊಂಡರೆ ಸಮಸ್ಯೆಯಾಗಲ್ಲ ಬಿಡಿ ಎಂದರು.
Advertisement