'ಜಾತ್ಯಾತೀತ ಬಂಧ': ಬೊಮ್ಮಾಯಿ ಸಂಪುಟ ರಚನೆಗೆ ದೇವೇಗೌಡರ ಟಚ್; ಜೆಡಿಎಸ್ ವಿರೋಧಿಗಳು ಕ್ಯಾಬಿನೆಟ್ ನಿಂದ ಹೊರಕ್ಕೆ?

ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಚಿವ ಸಂಪುಟಕ್ಕೆ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರ ಸಂಬಂಧವಿದೆಯೇ? ಹೀಗೊಂದು ಪ್ರಶ್ನೆ ಸದ್ಯ ರಾಜ್ಯ ರಾಜಕೀಯ ವಲಯದಲ್ಲಿ ಚರ್ಚೆ ಮೂಡಿಸಿದೆ.
ದೇವೇಗೌಡ-ಬೊಮ್ಮಾಯಿ ಭೇಟಿ (ಸಂಗ್ರಹ ಚಿತ್ರ)
ದೇವೇಗೌಡ-ಬೊಮ್ಮಾಯಿ ಭೇಟಿ (ಸಂಗ್ರಹ ಚಿತ್ರ)

ಬೆಂಗಳೂರು: ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಚಿವ ಸಂಪುಟಕ್ಕೆ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರ ಸಂಬಂಧವಿದೆಯೇ? ಹೀಗೊಂದು ಪ್ರಶ್ನೆ ಸದ್ಯ ರಾಜ್ಯ ರಾಜಕೀಯ ವಲಯದಲ್ಲಿ ಚರ್ಚೆ ಮೂಡಿಸಿದೆ.

ಒಕ್ಕಲಿಗ ಶಾಸಕರಿಗೆ ಬೊಮ್ಮಾಯಿ ಸಂಪುಟದಲ್ಲಿ ಸ್ಥಾನ ನೀಡುವ ಮೂಲಕ ಜೆಡಿಎಸ್-ಬಿಜೆಪಿ ತಾತ್ವಿಕ ಒಪ್ಪಂದಕ್ಕೆ ಮುಂದಾಗಿವೆ. ಈ ಮೂಲಕ ಜೆಡಿಎಸ್ ಗೆ ಕಂಟಕರಾಗಿರುವ ಶಾಸಕರನ್ನು ಸಂಪುಟದಿಂದ ಹೊರಗಿಡಲಾಗಿದೆ.

ಹಾಸನ ಬಿಜೆಪಿ ಶಾಸಕ ಪ್ರೀತಂಗೌಡ ಜೆಡಿಎಸ್ ಗೆ ಪ್ರಬಲ ಸ್ಪರ್ಧಿಯಾಗಿದ್ದಾರೆ, ಹೀಗಾಗಿ ಅವರನ್ನು ಮಹತ್ವದ ಹುದ್ದೆಗಳಿಂದ ದೂರ ಇಡಲಾಗಿದೆ. ಶಿರಾ ಮತ್ತು ಕೆಆರ್ ಪೇಟೆ ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದ್ದರು.

ಇದಕ್ಕೆ ತಾಜಾ ನಿದರ್ಶನವೆಂದರೆ, ರಾಮನಗರದಲ್ಲಿ ಜೆಡಿಎಸ್ ಗೆ ಪ್ರಬಲ ವಿರೋಧಿಯಾಗಿರುವ ಎಂಎಲ್ ಸಿ ಸಿಪಿ ಯೋಗೇಶ್ವರ್ ಅವರನ್ನು ಸಂಪುಟದಿಂದ ಹೊರಗಿಡಲಾಗಿದೆ. ಕುರುಬ ನಾಯಕ ಎಂಟಿಬಿ ನಾಗರಾಜ್ ಅವರಿಗೆ ಒಕ್ಕಲಿಗ ಭದ್ರಕೋಟೆಯಾದ ಬೆಂಗಳೂರು ಗ್ರಾಮಾಂತರದ ಉಸ್ತುವಾರಿ ನೀಡಲಾಗಿದೆ. ಮೈಸೂರು ಮತ್ತು ಇತರ ಒಕ್ಕಲಿಗ ಪ್ರಾಬಲ್ಯವಿರುವ ಹಾಗೂ ಜೆಡಿಎಸ್ ಗೆ ಶತ್ರುಗಳಾಗಿರುವವರ ಮೇಲೆ ಹಿಡಿತ ಸಾಧಿಸಲು ಮುಂದಾಗಿದೆ.

ಜೆಡಿಎಸ್ ಸರ್ವೋಚ್ಚ ನಾಯಕ ಎಚ್.ಡಿ ದೇವೇಗೌಡ ಅವರನ್ನು ಗಮನದಲ್ಲಿರಿಸಿಕೊಂಡಿರುವ ಬಿಜೆಪಿಗೆ ಸದ್ಯ ಶತೃತ್ವ ಬೇಕಿಲ್ಲ, ಹೀಗಾಗಿ ಜೆಡಿಎಸ್ ಮತ್ತು ಬಿಜೆಪಿ ನಡುವೆ ಹಿಂಬಾಗಿಲ ಮಾತುಕತೆಗಳು ನಡೆದಿವೆ.

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆಗಳು ನಡೆಯುತ್ತಿರುವ ವೇಳೆ ಜೆಡಿಎಸ್ ಶಾಸಕ ಬಂಡೆಪ್ಪ ಕಾಶೆಂಪೂರ್ ಮತ್ತು ಸಂಸದ ಪ್ರಜ್ವಲ್ ರೇವಣ್ಣ ಸುಮಾರು ನಾಲ್ಕೈದು ದಿನಗಳ ಕಾಲ ದೆಹಲಿಯಲ್ಲಿ ಬೀಡು ಬಿಟ್ಟಿದ್ದರು. ಆದಾದ ನಂತರ ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ ಸಿಎಂ ಬಸವರಾಜ ಬೊಮ್ಮಾಯಿ  ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರನ್ನು ಭೇಟಿ ಮಾಡಿದ್ದರು.  ಇನ್ನೂ ಸಚಿವ ಸಂಪುಟ ರಚನೆಗೂ ಮುನ್ನ ದೇವೇಗೌಡ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿದ್ದರು.

ಒಕ್ಕಲಿಗ ಭದ್ರಕೋಟೆ ಬಿಜೆಪಿಯ ಬಹುದೊಡ್ಡ ವೀಕ್ ನೆಸ್, 2008 ರಲ್ಲಿ ಬಿಜೆಪಿ 110 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತು, 2018 ರಲ್ಲಿ 104, ಆದರೆ ಜೆಡಿಎಸ್ ಭದ್ರಕೋಟೆಯನ್ನು ಬೇಧಿಸಲು ಸಾಧ್ಯವಾಗಲಿಲ್ಲ, 2019 ರಲ್ಲಿ ಮೋದಿ ಅಲೆಯಿದ್ದಾಗಲು ಬಿಜೆಪಿಗೆ, ಮಂಡ್ಯ, ಹಾಸನ ಮತ್ತು ಬೆಂಗಳೂರು ಗ್ರಾಮಾಂತರಗಳಲ್ಲಿ ಗೆಲುವು ಸಾಧಿಸಲು ಸಾಧ್ಯವಾಗಿರಲಿಲ್ಲ,   ಬಿಜೆಪಿ ತನ್ನ ನೆಲೆಯನ್ನು ಉಳಿಸಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ನಿರ್ಧರಿಸಿದೆ, ಇದರಿಂದ ಕಾಂಗ್ರೆಸ್ ಅನ್ನು ಹಿಡಿತದಲ್ಲಿಟ್ಟುಕೊಳ್ಳಬಹುದು ಎಂಬ ಆಶಯದೊಂದಿಗೆ ಜೆಡಿಎಸ್ ಜೊತೆ ಉತ್ತಮ ಬಾಂಧವ್ಯ ಹೊಂದಲು ಮುಂದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com