ರಾಜ್ಯಸಭೆಯಲ್ಲಿ ವಿರೋಧ ಪಕ್ಷ ನಾಯಕರ ವರ್ತನೆ ನಾಚಿಕೆಗೇಡು: ವಿಧಾನಸಭಾ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ

ಸಂಸತ್ತಿನ ಮುಂಗಾರು ಅಧಿವೇಶನದ ವೇಳೆ ಮೇಲ್ಮನೆಯಲ್ಲಿ ವಿರೋಧ ಪಕ್ಷ ಸದಸ್ಯರ ಅನುಚಿತ ವರ್ತನೆ ಬಗ್ಗೆ ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ವಿಶ್ವೇಶ್ವರ ಹೆಗಡೆ ಕಾಗೇರಿ
ವಿಶ್ವೇಶ್ವರ ಹೆಗಡೆ ಕಾಗೇರಿ

ಬೆಂಗಳೂರು: ಸಂಸತ್ತಿನ ಮುಂಗಾರು ಅಧಿವೇಶನದ ವೇಳೆ ಮೇಲ್ಮನೆಯಲ್ಲಿ ವಿರೋಧ ಪಕ್ಷ ಸದಸ್ಯರ ಅನುಚಿತ ವರ್ತನೆ ಬಗ್ಗೆ ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ನಿನ್ನೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೆಲವು ವಿರೋಧ ಪಕ್ಷ ನಾಯಕರ ವರ್ತನೆ ಅಸಹ್ಯಕರವಾಗಿತ್ತು. ಪರಿಸ್ಥಿತಿಯನ್ನು ಹೇಗೆ ಬೇಕಾದರೂ ತೆಗೆದುಕೊಳ್ಳಬಹುದು ಎಂದು ಸದಸ್ಯರು ಭಾವಿಸಿದಂತಿದೆ. ಅರಾಜಕತೆ ಎತ್ತಿ ಕಾಣುತ್ತಿತ್ತು. ಕಳೆದ ಮಂಗಳವಾರವನ್ನು ಸಂಸತ್ತಿನ ಇತಿಹಾಸದ ಕರಾಳ ದಿನವೆಂದು ದಾಖಲಿಸಲಾಗುವುದು ಎಂದು ರಾಜ್ಯಸಭಾ ಸಭಾಪತಿಗಳು ಅತ್ಯಂತ ನೋವಿನಿಂದ ಹೇಳಿಕೊಂಡಿದ್ದರು ಎಂದಿದ್ದಾರೆ.

ಆ ಎರಡು ದಿನಗಳಲ್ಲಿ ನಡೆದ ಅತ್ಯಂತ ನಾಚಿಕೆಗೇಡಿನ, ನೋವಿನ ಮತ್ತು ಯಾತನಾಮಯ ಘಟನೆಗಳು ಪ್ರಜ್ಞಾವಂತ ಮಂದಿ ತಲೆತಗ್ಗಿಸುವಂತೆ ಮಾಡಿದೆ ಎಂದು ಕಾಗೇರಿ ಹೇಳಿದರು. ಕಾಗೇರಿಯವರ ಟೀಕೆಗಳಿಗೆ ಪ್ರತಿಕ್ರಿಯಿಸಿದ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿ, ಅಧಿವೇಶನದ ಸಂಪೂರ್ಣ ಅವಧಿಗೆ ಪೆಗಾಸಸ್ ಕುರಿತು ಚರ್ಚೆಗೆ ಸರ್ಕಾರ ಏಕೆ ಅವಕಾಶ ನೀಡಲಿಲ್ಲ? ಸರ್ಕಾರವು ತಪ್ಪಿತಸ್ಥನಾದ ಕಾರಣವೇ? ಸಭಾಪತಿ ವೆಂಕಯ್ಯ ನಾಯ್ಡು ಅವರದ್ದು ಮೊಸಳೆ ಕಣ್ಣೀರು ಎಂದು ಖರ್ಗೆ ಟೀಕಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ವಿಧಾನಸಭೆ ಸ್ಪೀಕರ್ ಒಬ್ಬರು ಮತ್ತೊಂದು ಸದನದ ಕಾರ್ಯವೈಖರಿಯ ಬಗ್ಗೆ ಮಾತನಾಡುವುದನ್ನು ಸಾಂವಿಧಾನಿಕ ಅಧಿಕಾರ ವಿಭಜನೆಯ ಪರಿಕಲ್ಪನೆಯಿಂದ ನಿರ್ಬಂಧಿಸಲಾಗಿದೆ. ಸ್ಪೀಕರ್‌ಗೆ ಇದರ ಅರಿವಿಲ್ಲವೇ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿಯವರನ್ನು ಪ್ರಶ್ನಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com