ಸಿಎಂಗೆ ನೀಡಿದ ಪತ್ರದಲ್ಲಿ ಸಚಿವ ಸ್ಥಾನದ ಬೇಡಿಕೆ ಇಟ್ಟಿಲ್ಲ: ಶಾಸಕ ಎಸ್ಎ. ರಾಮದಾಸ್

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ನೀಡಿದ ಪತ್ರದಲ್ಲಿ ಸಚಿವ ಸ್ಥಾನ ಕೈತಪ್ಪಿದ್ದರ ಅಥವಾ ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಿರುವುದರ ಕುರಿತು ಯಾವುದೇ ಮಾತುಗಳನ್ನೂ ಆಡಿಲ್ಲ ಎಂದು ಶಾಸಕ ಎಸ್ಎ ರಾಮದಾಸ್ ಅವರು ಸ್ಪಷ್ಟಪಡಿಸಿದ್ದಾರೆ. 
ಶಾಸಕ ರಾಮದಾಸ್
ಶಾಸಕ ರಾಮದಾಸ್

ಮೈಸೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ನೀಡಿದ ಪತ್ರದಲ್ಲಿ ಸಚಿವ ಸ್ಥಾನ ಕೈತಪ್ಪಿದ್ದರ ಅಥವಾ ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಿರುವುದರ ಕುರಿತು ಯಾವುದೇ ಮಾತುಗಳನ್ನೂ ಆಡಿಲ್ಲ ಎಂದು ಶಾಸಕ ಎಸ್ಎ ರಾಮದಾಸ್ ಅವರು ಸ್ಪಷ್ಟಪಡಿಸಿದ್ದಾರೆ. 

ಕೆಲ ದಿನಗಳ ಹಿಂದಷ್ಟೇ ಮುಖ್ಯಮಂತ್ರಿಗಳಿಗೆ ರಾಮದಾಸ್ ಅವರು ಮುಚ್ಚಿದ ಲಕೋಟೆಯಲ್ಲಿ ಪತ್ರವೊಂದನ್ನು ಸಲ್ಲಿಸಿದ್ದರು. 

ಈ ಪತ್ರವು ಹಲವು ಊಹಾಪೋಹಗಳಿಗೆ ದಾರಿ ಮಾಡಿಕೊಟ್ಟಿದೆ. ಈ ಹಿನ್ನೆಲೆಯಲ್ಲಿ ನಿನ್ನೆ ಸ್ಪಷ್ಟನೆ ನೀಡಿರುವ ಅವರು, 6 ಪುಟಗಳ ಪತ್ರವನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಿದ್ದೇನೆ. ಪತ್ರದಲ್ಲಿ ಪಕ್ಷ ಹಾಗೂ ರಾಜ್ಯದ ಮೇಲೆ ನನಗಿರುವ ಆಸಕ್ತಿ ಹಾಗೂ ಸಲಹೆಗಳನ್ನು ನೀಡಿದ್ದೇನೆ. ಸಚಿವ ಸ್ಥಾನ ಕುರಿತು ಒಂದು ಪದವನ್ನೂ ಹೇಳಿಲ್ಲ ಎಂದು ಹೇಳಿದ್ದಾರೆ. 

ಕೆಲ ದಿನಗಳ ಹಿಂದೆ ಮೈಸೂರಿಗೆ ಮುಖ್ಯಮಂತ್ರಿಗಳು ಭೇಟಿ ನೀಡಿದ್ದು, ಈ ವೇಳೆ ಮುಖ್ಯಮಂತ್ರಿಗಳನ್ನು ರಾಮದಾಸ್ ಅವರು ಭೇಟಿ ಮಾಡಿರಲಿಲ್ಲ. ಆದರೆ, ಜಿಲ್ಲಾ ಸಚಿವ ಎಸ್'ಟಿ ಸೋಮಶೇಖರ್ ಅವರ ಕಾರ್ಯಕ್ರಮದಲ್ಲಿ ನಿನ್ನೆ ಭಾಗಿಯಾಗಿದ್ದರು. ಈ ಬೆಳವಣಿಗೆ ಊಹಾಪೋಹಗಳಿಗೆ ದಾರಿ ಮಾಡಿಕೊಟ್ಟಿತ್ತು. 

ಸಚಿವ ಸೋಮಶೇಖರ್ ಅವರು ಮಾತನಾಡಿ, ರಾಮದಾಸ್ ಅವರು ಮಾರ್ಗದರ್ಶನ ಹಾಗೂ ಸಲಹೆಗಳ ಮೇರೆಗೆ ನಾನು ಕೆಲಸ ಮಾಡುತ್ತೇನೆಂದು ಹೇಳಿದ್ದಾರೆ. 

ಇದೇ ವೇಳೆ ಬೊಮ್ಮಾಯಿಯವರು ತಮ್ಮ ಅಧಿಕಾರಾವಧಿಯನ್ನು ಪೂರ್ಣಗೊಳಿಸುವುದಿಲ್ಲ ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಸಿದ್ದರಾಮಯ್ಯ ಅವರು ಲೆಕ್ಕಾಚಾರ ತಪ್ಪಾಗಿದೆ. ಹೀಗಾಗಿಯೇ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಬೊಮ್ಮಾಯಿಯವರು ತಮ್ಮ ಅಧಿಕಾರವನ್ನು ಪೂರ್ಣಗೊಳಿಸಲಿದ್ದಾರೆ. ರಾಜ್ಯದಲ್ಲಿ ಸ್ಥಿರ ಸರ್ಕಾರ ಇರಲಿದೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com