4 ಶಾಸನ ಸಭೆಯಲ್ಲೂ ಪಾದಾರ್ಪಣೆ ಮಾಡಿದ ಗೌಡರ ಕುಟುಂಬ!
ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಅವರ ಮೊಮ್ಮಗ ಸೂರಜ್ ರೇವಣ್ಣ ಅವರು ಪರಿಷತ್ ಚುನಾವಣೆಯಲ್ಲಿ ಜಯ ಸಾಧಿಸಿದ್ದು, ಈ ಮೂಲಕ ಲೋಕಸಭೆ, ರಾಜ್ಯಸಭೆ, ವಿಧಾನಸಭೆ, ವಿಧಾನಪರಿಷತ್ ಸೇರಿ ದೇಶದ ನಾಲ್ಕೂ ಶಾಸನಸಭೆಗಳಿಗೂ ದೇವೇಗೌಡರ ಕುಟುಂಬ ಪಾದಾರ್ಪಣೆ ಮಾಡಿದಂತಾಗಿದೆ.
Published: 15th December 2021 09:30 AM | Last Updated: 15th December 2021 01:01 PM | A+A A-

ಮಂಗಳವಾರ ಹಾಸನದಲ್ಲಿ ಜೆಡಿಎಸ್ ಅಭ್ಯರ್ಥಿ ಸೂರಜ್ ರೇವಣ್ಣ ಗೆಲುವು ಸಾಧಿಸಿದ ಬಳಿಕ ಜಿಲ್ಲಾಧಿಕಾರಿ ಅವರಿಂದ ಪ್ರಮಾಣ ಪತ್ರ ಸ್ವೀಕರಿಸಿದರು. ಈ ವೇಳೆ ಸಹೋದರ ಹಾಗೂ ಸಂಸದ ಪ್ರಜ್ವಲ್ ಕೂಡ ಸೂರಜ್ ಜೊತೆಗಿದ್ದರು.
ಬೆಂಗಳೂರು: ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಅವರ ಮೊಮ್ಮಗ ಸೂರಜ್ ರೇವಣ್ಣ ಅವರು ಪರಿಷತ್ ಚುನಾವಣೆಯಲ್ಲಿ ಜಯ ಸಾಧಿಸಿದ್ದು, ಈ ಮೂಲಕ ಲೋಕಸಭೆ, ರಾಜ್ಯಸಭೆ, ವಿಧಾನಸಭೆ, ವಿಧಾನಪರಿಷತ್ ಸೇರಿ ದೇಶದ ನಾಲ್ಕೂ ಶಾಸನಸಭೆಗಳಿಗೂ ದೇವೇಗೌಡರ ಕುಟುಂಬ ಪಾದಾರ್ಪಣೆ ಮಾಡಿದಂತಾಗಿದೆ. ಬಹುಶಃ ಈ ಸಾಧನೆ ಮಾಡಿದ ಮೊದಲ ಕುಟುಂಬವೂ ಆಗಿರಬಹುದು.
ದೇವೇಗೌಡರು ಹಾಲಿ ರಾಜ್ಯಸಭಾ ಸದಸ್ಯರಾಗಿದ್ದರೆ, ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಪತ್ನಿ ಅನಿತಾ ಕುಮಾರಸ್ವಾಮಿ, ಹೆಚ್.ಡಿ.ರೇವಣ್ಣ ಹಾಲಿ ಶಾಸಕರಾಗಿದ್ದಾರೆ. ಇನ್ನು ಸೂರಜ್ ಅವರ ಸೋದರ ಪ್ರಜ್ವಲ್ ರೇವಣ್ಣ ಹಾಸನ ಲೋಕಸಭಾ ಕ್ಷೇತ್ರದ ಹಾಲಿ ಸಂಸದರಾಗಿದ್ದಾರೆ.
ಈ ಬಾರಿಯ ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಆರು ಸ್ಥಾನಗಳಿಗೆ ಸ್ಪರ್ಧಿಸಿದ್ದು, ಹೊಳೆನರಸೀಪುರ ಶಾಸಕ ಹೆಚ್ ಡಿ ರೇವಣ್ಣ ಅವರ ಪುತ್ರ ಸೂರಜ್ ರೇವಣ್ಣ (ಹಾಸನ) 2,281 ಮತಗಳನ್ನು ಪಡೆದು 1,533 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಕುಟುಂಬದಿಂದ ಪರಿಷತ್ತಿಗೆ ಪ್ರವೇಶಿಸಿದ ಮೊದಲ ಸದಸ್ಯ ಸೂರಜ್ ರೇವಣ್ಣ ಆಗಿದ್ದಾರೆ.
ಹಲವು ಬಾರಿ ಶಾಸಕರಾಗಿ ಮತ್ತು ಲೋಕಸಭಾ ಸದಸ್ಯರಾಗಿ ಸೇವೆ ಸಲ್ಲಿಸಿರುವ ಮಾಜಿ ಪ್ರಧಾನಿ ದೇವೇಗೌಡ ಅವರು, 2019 ರಲ್ಲಿ ಮೊಮ್ಮಗ ಪ್ರಜ್ವಲ್ ರೇವಣ್ಣ ಅವರಿಗೆ ತಮ್ಮ ಸ್ಥಾನವನ್ನು ಬಿಟ್ಟುಕೊಟ್ಟು ಕಳೆದ ವರ್ಷ ರಾಜ್ಯಸಭೆ ಪ್ರವೇಶಿಸಿದರು, ಆದರೆ ತುಮಕೂರಿನಲ್ಲಿ ಸೋಲು ಕಂಡಿದ್ದರು.
ದೇವೇಗೌಡ ಅವರ ಪುತ್ರರಾದ ಹೆಚ್ ಡಿ ರೇವಣ್ಣ ಮತ್ತು ಹೆಚ್ ಡಿ ಕುಮಾರಸ್ವಾಮಿ ಅವರು ವಿಧಾನಸಭೆಯ ಸದಸ್ಯರಾಗಿದ್ದಾರೆ. ಕುಮಾರಸ್ವಾಮಿ ಅವರು ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಇನ್ನು ರೇವಣ್ಣ ಅವರು ಸಮ್ಮಿಶ್ರ ಸರ್ಕಾರದಲ್ಲಿ ಎರಡು ಬಾರಿ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.
ಕುಮಾರಸ್ವಾಮಿ ಅವರ ಪತ್ನಿ ಅನಿತಾ ಅವರು 2018 ರಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಗೆದ್ದಿದ್ದರೆ, ಅವರ ಮಗ ನಿಖಿಲ್ ಕುಮಾರಸ್ವಾಮಿ 2019 ರ ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಕಂಡಿದ್ದರು.
ಇನ್ನೂ ಸೂರಜ್ ಮತ್ತು ಪ್ರಜ್ವಲ್ ಅವರ ತಾಯಿ ಭವಾನಿ ರೇವಣ್ಣ ಅವರು ಹಾಸನ ಜಿಲ್ಲಾ ಪಂಚಾಯತ್ ಸದಸ್ಯೆಯಾಗಿದ್ದಾರೆ. ಮುಂದುವರೆದಂತೆ ದೇವೇಗೌಡ ಅವರ ಕಿರಿಯ ಪುತ್ರ ಹೆಚ್.ಡಿ.ರಮೇಶ್ ಅವರ ಮಾವ ಡಿ.ಸಿ.ತಮಣ್ಣ ಅವರು, ಮದ್ದೂರು ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.
ಮಂಗಳವಾರ ಹಾಸನದಲ್ಲಿ ಜೆಡಿಎಸ್ ಅಭ್ಯರ್ಥಿ ಸೂರಜ್ ರೇವಣ್ಣ ಗೆಲುವು ಸಾಧಿಸಿದ ಬಳಿಕ ಜಿಲ್ಲಾಧಿಕಾರಿ ಅವರಿಂದ ಪ್ರಮಾಣ ಪತ್ರ ಸ್ವೀಕರಿಸಿದರು. ಈ ವೇಳೆ ಸಹೋದರ ಹಾಗೂ ಸಂಸದ ಪ್ರಜ್ವಲ್ ಕೂಡ ಸೂರಜ್ ಜೊತೆಗಿದ್ದರು.