ಪರಿಷತ್ತಿನಲ್ಲಿ ಉತ್ತರ ಕರ್ನಾಟಕ ಸಮಸ್ಯೆ ಬಗ್ಗೆ ಸಮಗ್ರ ಚರ್ಚೆಯಾಗಿದೆ: ಸಭಾಪತಿ
ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ವಿಧಾನ ಪರಿಷತ್ ಕಲಾಪ ಯಶಸ್ವಿಯಾಗಿದೆ ನಡೆದಿದೆ. ಸಾಕಷ್ಟು ವಿಷಯಗಳ ಚರ್ಚೆಯಾಗಿದ್ದು, ನಿರೀಕ್ಷಿತ ಗುರಿ ತಲುಪಿದೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದ್ದಾರೆ.
Published: 24th December 2021 04:20 PM | Last Updated: 24th December 2021 07:30 PM | A+A A-

ಸಭಾಪತಿ ಬಸವರಾಜ ಹೊರಟ್ಟಿ
ಬೆಳಗಾವಿ: ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ವಿಧಾನ ಪರಿಷತ್ ಕಲಾಪ ಯಶಸ್ವಿಯಾಗಿದೆ ನಡೆದಿದೆ. ಸಾಕಷ್ಟು ವಿಷಯಗಳ ಚರ್ಚೆಯಾಗಿದ್ದು, ನಿರೀಕ್ಷಿತ ಗುರಿ ತಲುಪಿದೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿಯ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಚರ್ಚಿಸಲು ಸದನದಲ್ಲಿ ಸಮಯ ಮೀಸಲಿಟ್ಟಿದ್ದೆವು. ಪ್ರಮುಖವಾಗಿ ಉತ್ತರ ಕರ್ನಾಟಕ- ಕಲ್ಯಾಣ ಕರ್ನಾಟಕ ಸೇರಿದಂತೆ ಇತರ ಹಲವು ವಿಚಾರಗಳ ಬಗ್ಗೆ ಚರ್ಚೆಯಾಗಿದೆ. ಎಲ್ಲ ಸದಸ್ಯರು ಸಹಕಾರ ನೀಡಿದ್ದಾರೆ. ಉತ್ತರ ಕರ್ನಾಟಕ ಬಗ್ಗೆ ದಕ್ಷಿಣ ಕರ್ನಾಟಕದವರು ಹೆಚ್ಚಾಗಿ ಚರ್ಚೆ ನಡೆಸಿದ್ದಾರೆ. ಉತ್ತರ ಕರ್ನಾಟಕದ ನೀರಾವರಿ ಸೇರಿದಂತೆ ಇನ್ನಿತರ ಸಮಸ್ಯೆಗಳನ್ನು ಶೀಘ್ರ ಪರಿಹರಿಸುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ ಎಂದು ವಿವರಿಸಿದರು.
ಕೊರೋನಾ ಕಾರಣದಿಂದ ಈ ಬಾರಿಯೂ ಉತ್ತರ ಕರ್ನಾಟಕದಲ್ಲಿ ಅಧಿವೇಶನ ನಡೆಯುತ್ತಾ ಎಂಬುದರ ಬಗ್ಗೆ ಚರ್ಚೆಯಾಗಿತ್ತು. ಆದರೆ, ಉತ್ತರ ಕರ್ನಾಟಕ ಭಾಗದ ಮುಖ್ಯಮಂತ್ರಿ, ಸಭಾಪತಿ, ಸಭಾಧ್ಯಕ್ಷರು ಇರುವುದರಿಂದ ಇಲ್ಲಿಯೇ ಅಧಿವೇಶನ ಮಾಡಲೇಬೇಕೆಂದು ನಿರ್ಧರಿಸಿ, ಚಳಿಗಾಲದ ಅಧಿವೇಶನ ಮಾಡಿದ್ದೇವೆ ಎಂದರು.
ಜಂಟಿ ಅಧಿವೇಶನ ಅಥವಾ ಹೆಚ್ಚು ದಿನವಾದರೂ ನಡೆಸಬೇಕು ಅಂತಾ ಮುಖ್ಯಮಂತ್ರಿ ಬಳಿ ಪ್ರಸ್ತಾಪಿಸಲಾಗಿದೆ. ಶಾಸಕರ ಭವನ ಹಾಗೂ ಸಚಿವಾಲಯ ಕಚೇರಿಯಾಗಬೇಕು ಎಂದು ಮುಖ್ಯಮಂತ್ರಿ ಬಳಿ ಪ್ರಸ್ತಾಪಿಸಲಾಗಿದೆ. ವಿಧಾನಪರಿಷತ್ತಿನಲ್ಲಿ ಈ ಬಾರಿ 73 ಸದಸ್ಯರು ಪಾಲ್ಗೊಂಡಿದ್ದರು. ಪರಿಷತ್ ಇರಬೇಕೋ ಅಥವಾ ಬೇಡವೋ ಎನ್ನುವ ಸಾಧಕ-ಬಾಧಕದ ಬಗ್ಗೆ ಚರ್ಚಿಸಬೇಕಾಗಿದೆ. ದೇಶಕ್ಕೆ ನಮ್ಮ ಪರಿಷತ್ ಮಾದರಿಬೇಕು ಎಂದರು.