ಧಾರವಾಡ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಅರವಿಂದ್ ಬೆಲ್ಲದ್ ರಾಜೀನಾಮೆ?: ಬಿಜೆಪಿಯಲ್ಲಿ ಭಿನ್ನಾಭಿಪ್ರಾಯ

ಹುಬ್ಬಳ್ಳಿ-ಧಾರವಾಡ ಪಶ್ಚಿಮ ಭಾಗದ ಶಾಸಕ ಅರವಿಂದ್ ಬೆಲ್ಲದ್ ಧಾರವಾಡ ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂಬ ವದಂತಿ ದಟ್ಟವಾಗಿ ಕೇಳಿಬರುತ್ತಿದೆ. ತಾಂತ್ರಿಕ ಕಾರಣಗಳಿಂದ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ಹೇಳಲಾಗುತ್ತಿದ್ದರೂ ಕೂಡ ಈ ಬಗ್ಗೆ ಹಲವು ಊಹಾಪೋಹಗಳು ಕೇಳಿಬರುತ್ತಿದೆ.
ಅರವಿಂದ್ ಬೆಲ್ಲದ್
ಅರವಿಂದ್ ಬೆಲ್ಲದ್

ಧಾರವಾಡ: ಹುಬ್ಬಳ್ಳಿ-ಧಾರವಾಡ ಪಶ್ಚಿಮ ಭಾಗದ ಶಾಸಕ ಅರವಿಂದ್ ಬೆಲ್ಲದ್ ಧಾರವಾಡ ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂಬ ವದಂತಿ ದಟ್ಟವಾಗಿ ಕೇಳಿಬರುತ್ತಿದೆ. ತಾಂತ್ರಿಕ ಕಾರಣಗಳಿಂದ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ಹೇಳಲಾಗುತ್ತಿದ್ದರೂ ಕೂಡ ಈ ಬಗ್ಗೆ ಹಲವು ಊಹಾಪೋಹಗಳು ಕೇಳಿಬರುತ್ತಿದೆ.

ಇತ್ತೀಚಿನ ವಿಧಾನಪರಿಷತ್ ಚುನಾವಣೆಯಲ್ಲಿ ಪಕ್ಷದ ಕಳಪೆ ಸಾಧನೆಯಿಂದ ಬೇಸತ್ತು ಬೆಲ್ಲದ್ ರಾಜೀನಾಮೆ ನೀಡಲಿದ್ದಾರೆ ಎಂದು ಪಕ್ಷದ ಆಂತರಿಕ ಮೂಲಗಳು ಹೇಳುತ್ತವೆ. ಆದರೆ ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ. ಬೆಲ್ಲದ್ ಅವರು ಪಕ್ಷದ ಬಗ್ಗೆ ಹೊಂದಿದ್ದ ನಿಲುವನ್ನು ಬದಲಿಸಿಕೊಂಡಿದ್ದು ಸ್ಥಳೀಯ ನಾಯಕರಿಂದ ದೂರ ಸರಿದಿದ್ದಾರೆ ಎಂದು ಹೇಳಲಾಗುತ್ತಿದೆ.

ಸ್ಥಳೀಯ ನಾಯಕರ ಮಧ್ಯೆ ಹೊಂದಾಣಿಕೆ ಕೊರತೆಯಿಂದ ಬೆಲ್ಲದ್ ರಾಜೀನಾಮೆ ನಿರ್ಧಾರ ತೆಗೆದುಕೊಂಡಿದ್ದಾರೆ. ಪಕ್ಷದಲ್ಲಿ ಸಂಪುಟ ವಿಸ್ತರಣೆ ನಂತರ ಅವರು ನಿಷ್ಕ್ರಿಯವಾಗಿದ್ದಾರೆ, ಇದೆಲ್ಲಾ ಇಂತಹ ಊಹಾಪೋಹಗಳಿಗೆ ಕಾರಣ ಎಂದು ಪಕ್ಷದ ಮೂಲಗಳು ಹೇಳುತ್ತವೆ.

ಬಿ ಎಸ್ ಯಡಿಯೂರಪ್ಪನವರು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದ ನಂತರ ಅರವಿಂದ್ ಬೆಲ್ಲದ್ ಹೆಸರು ಕೇಳಿಬರುತ್ತಿತ್ತು.ಆದರೆ ರಾಜಕೀಯ ಪರಿಸ್ಥಿತಿಯಲ್ಲಿ ಅವರಿಗೆ ಸಿಎಂ ಸ್ಥಾನ ಒಲಿಯಲಿಲ್ಲ, ಇದು ಪಕ್ಷದಲ್ಲಿ ಅವರ ದಿಕ್ಕನ್ನು ಬದಲಿಸಿತು. ಪಕ್ಷದಲ್ಲಿಯೇ ಹಲವರು ಅವರನ್ನು ವಿರೋಧಿಸಿದರು. ಹಿಂದೆ ಒಲವು ವ್ಯಕ್ತಪಡಿಸಿದವರೆಲ್ಲರೂ ನಂತರ ಅವರನ್ನು ದೂಷಿಸಲಾರಂಭಿಸಿದ್ದರು. ಇದೆಲ್ಲಾ ಬೆಲ್ಲದ್ ಅವರ ಇಂದಿನ ನಿರ್ಧಾರಕ್ಕೆ ಕಾರಣ ಎಂದು ಮೂಲಗಳು ಹೇಳುತ್ತವೆ.

ಆದರೆ, ಬೆಲ್ಲದ್ ಅವರ ನಿಕಟವರ್ತಿಗಳು ಅವರ ರಾಜೀನಾಮೆ ಸುದ್ದಿಯನ್ನು ನಿರಾಕರಿಸುತ್ತಾರೆ. ಬೆಲ್ಲದ್ ಅವರು ಧಾರವಾಡದಲ್ಲಿ ಪ್ರಬಲ ಲಿಂಗಾಯತ ಮುಖಂಡ. ಪಕ್ಷಕ್ಕೆ ಈ ಬೆಳವಣಿಗೆ ಬಗ್ಗೆ ಅರಿವಿದೆ. ಬೆಲ್ಲದ್ ಅವರನ್ನು ನಿರ್ಲಕ್ಷಿಸುವುದು ಸಾಧ್ಯವಿಲ್ಲ ಎಂದು ಧಾರವಾಡದ ಬಿಜೆಪಿ ನಾಯಕರೊಬ್ಬರು ಹೇಳುತ್ತಾರೆ.

ಕೆಲವರು ಇಂತಹ ವದಂತಿಗಳನ್ನು ಹಬ್ಬಿಸುವುದರಲ್ಲಿ ನಿರತರಾಗಿದ್ದಾರೆ. ಬೆಲ್ಲದ್ ಅವರು ಪಕ್ಷದಲ್ಲಿ ಸ್ಥಿರತೆಯನ್ನು ತರುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಅವರ ಮಾನಹಾನಿ ಮಾಡುವ ಉದ್ದೇಶದಿಂದ ಇಂತಹ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ ಎಂದು ಅವರು ಹೇಳಿದರು. ಆದರೆ, ಬೆಲ್ಲದ್ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಯಾವುದೇ ಪ್ರತಿಕ್ರಿಯೆ ನೀಡಿಲ್ಲ, ಬೆಳವಣಿಗೆಗಳನ್ನು ಗಮನಿಸುತ್ತಿರುವುದಾಗಿ ಮಾತ್ರ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com