ದಕ್ಷಿಣ ಕನ್ನಡ: ಆರೋಗ್ಯ ಸಚಿವ ಹರ್ಷವರ್ದನ್ ಅವರು ಕೇಂದ್ರ ಸಚಿವ ಸಂಪುಟದಿಂದ ಹೊರ ಬಿದ್ದಿದ್ದು, ಕೋವಿಡ್ ಸಮಯದಲ್ಲಿ ಸರ್ಕಾರ ಸರಿಯಾಗಿ ನಿರ್ವಹಣೆ ಮಾಡಿಲ್ಲ ಎಂಬುದಕ್ಕೆ ಇದು ಬಹು ದೊಡ್ಡ ಸಾಕ್ಷಿಯಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಶಿರಶಿಯಲ್ಲಿ ಮಾತನಾಡಿದ ಅವರು, ಇದು ಕೇವಲ ಹರ್ಷವರ್ಧನ್ ಅವರೊಬ್ಬರ ಜವಾಬ್ದಾರಿ ಅಲ್ಲ, ಕೇಂದ್ರ ಹಾಗೂ ರಾಜ್ಯ ಸರ್ಕಾರ ಎರಡೂ ಈ ಜವಾಬ್ದಾರಿ ಹೊರಬೇಕು. ಜನರಿಗೆ ಆಗಿರುವ ನೋವಿಗೆ ಸ್ಪಂದಿಸಬೇಕು ಎಂದರು.
ನಮ್ಮ ರಾಜ್ಯದಲ್ಲಿ ಕೊರೋನಾ ಸಮಯದಲ್ಲಿ ಜನ ಬಹಳ ನೋವು ಅನುಭವಿಸಿದ್ದಾರೆ. ಅದರ ನಡುವೆ ರಾಜ್ಯ ಹಾಗೂ ಕೇಂದ್ರದಲ್ಲಿ ಬೆಲೆ ಏರಿಕೆಯಿಂದ ಎಲ್ಲರಿಗೂ ವಿಪರೀತ ತೊಂದರೆಯಾಗುತ್ತಿದೆ. ಸರ್ಕಾರದ ಅಧಿಕೃತ ಮಾಹಿತಿ ಪ್ರಕಾರ ಈ ಜಿಲ್ಲೆಯಲ್ಲಿ 711 ಜನ ಸತ್ತಿದ್ದಾರೆ. 51,902 ಜನ ಆಸ್ಪತ್ರೆ ಸೇರಿದ್ದಾರೆ. ಇನ್ನು ಹಲವರು ಮನೆಯಲ್ಲೇ ಮೃತಪಟ್ಟಿದ್ದಾರೆ. ಹೀಗಾಗಿ ಇವರ ಮಾಹಿತಿ ಸಂಗ್ರಹಿಸಲು, ಕೋವಿಡ್ ಸಂತ್ರಸ್ತರಿಗೆ ಸರ್ಕಾರದಿಂದ ಪರಿಹಾರ ದೊರೆಯುವಂತೆ ಮಾಡಲು ನಮ್ಮ ಕಾರ್ಯಕರ್ತರು
ಪ್ರಯತ್ನಿಸುತ್ತಾರೆ. ಈ ಮಧ್ಯೆ 3 ಲಕ್ಷಕ್ಕೂ ಹೆಚ್ಚು ಜನ ಸತ್ತಿದ್ದು, ಸರ್ಕಾರ ಕೇವಲ 30 ಸಾವಿರ ಎಂದು ಅಂಕಿ-ಅಂಶದಲ್ಲಿ ತೋರಿಸುತ್ತಿದೆ. ಕೋವಿಡ್ ನಿಂದ ಸತ್ತ ಎಲ್ಲರಿಗೂ ಹೈಕೋರ್ಟ್ ನಿಗದಿ ಮಾಡುವ ಪರಿಹಾರ ಸಿಗುವಂತಾಗಬೇಕು.
ಸರ್ಕಾರದ ಎಲ್ಲ ಅಧಿಕಾರಿಗಳು ಮನೆ, ಮನೆಗೂ ಹೋಗಬೇಕು, ಕೋವಿಡ್ ಸಂದರ್ಭದಲ್ಲಿ ರೈತರು, ಕಾರ್ಮಿಕರು, ಸಂಪ್ರಾದಾಯಿಕ ವೃತ್ತಿದಾರರಿಗೆ ಆಗಿರುವ ನಷ್ಟದ ಬಗ್ಗೆ ಮಾಹಿತಿ ಕಲೆ ಹಾಕಬೇಕು. ನಾವು ನಮ್ಮ ಕೆಲಸ ಮಾಡುತ್ತೇವೆ. ಸರ್ಕಾರ ಕೂಡ ಅಧಿಕಾರಿಗಳ ಮೂಲಕ ಈ ಬಗ್ಗೆ ಮಾಹಿತಿ ಕಲೆ ಹಾಕಬೇಕು ಎಂದರು.
Advertisement