ಮೈಸೂರು: ಮುಂದಿನ ಚುನಾವಣೆಯಲ್ಲಿ ಪಕ್ಷೇತ್ರವಾಗಿ ಸ್ಪರ್ಧಿಸುವ ಬಗ್ಗೆ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ಜಿ.ಟಿ.ದೇವೇಗೌಡ ಅವರು ಒಲವು ಹೊಂದಿದ್ದು, ಈ ಸಂಬಂಧ ಸುಳಿವು ಬಿಟ್ಟುಕೊಟ್ಟಿದ್ದಾರೆ.
ಸುದ್ದಿಗಾರರೊಂದಿಗೆ ನಿನ್ನೆ ಮಾತನಾಡಿರುವ ಅವರು, 2 ವರ್ಷಗಳಿಂದ ಜೆಡಿಎಸ್ ಪಕ್ಷದ ಸಭೆಗಳಲ್ಲಿ ಪಾಲ್ಗೊಂಡಿಲ್ಲ. ಮುಂದೆ ಬಿಜೆಪಿ ಅಥವಾ ಕಾಂಗ್ರೆಸ್ ಸೇರಬೇಕೋ? ಜೆಡಿಎಸ್ನಲ್ಲೇ ಇರಬೇಕೋ ಎಂಬುದರ ಬಗ್ಗೆ ತೀರ್ಮಾನ ಮಾಡಿಲ್ಲ. ಪಕ್ಷೇತರವಾಗಿ ನಿಂತರೂ ಅಚ್ಚರಿ ಪಡಬೇಕಿಲ್ಲ ಎಂದು ಹೇಳಿದ್ದಾರೆ.
ನಾನು ಮತ್ತು ನನ್ನ ಮಗ ಜಿ.ಡಿ.ಹರೀಶ್ ಗೌಡ ಇಂಡಿಪೆಂಡೆಂಟ್ ಆಗಿ ನಿಂತರೂ ಗೆಲ್ಲುತ್ತೇವೆ. ಚಾಮುಂಡೇಶ್ವರಿ, ಹುಣಸೂರು, ಕೆ.ಆರ್.ನಗರ ಎಲ್ಲಿ ನಿಂತರೂ ಗೆಲ್ಲುತ್ತೇವೆ. ಜನರ ಪ್ರೀತಿ, ವಿಶ್ವಾಸದಿಂದ ಧೈರ್ಯ ಬಂದಿದೆ. ಸ್ವತಂತ್ರವಾಗಿ ನಿಲ್ಲುವ ಮಾರ್ಗ ಇದ್ದೇ ಇದೆ.
ಜನ ಕೂಡ ನಮಗೆ ಪಕ್ಷ ಬೇಡ, ಜಿಟಿ ದೇವೇಗೌಡ ಬೇಕು ಎಂದು ಹೇಳುತ್ತಿದ್ದಾರೆ. ಇನ್ನೂ ಎರಡು ವರ್ಷ ಸಮಯಾವಕಾಶವಿದೆ. ಸನ್ನಿವೇಶ ನೋಡಿ ಸೂಕ್ತ ತೀರ್ಮಾನ ಕೈಗೊಳ್ಳುವುದಾಗಿ ಅವರು ಹೇಳಿದ್ದಾರೆ.
ಇದೇ ವೇಳೆ ಮುಂದಿನ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಯಲ್ಲಿ ನಮ್ಮ ಬೆಂಬಲಿಗರನ್ನು ಪಕ್ಷೇತ್ರವಾಗಿ ಕಣಕ್ಕಿಳಿಸುವ ಚಿಂತನೆ ಇದೆ. ಈ ಬಗ್ಗೆ ಅಭಿಪ್ರಾಯ ಸಂಗ್ರಹಿಸಲು ಮುಂದಿನ ವಾರದಿಂದ ಕ್ಷೇತ್ರ ಪರ್ಯಟನ ಮಾಡುತ್ತೇನೆಂದಿದ್ದಾರೆ.
ಮಾಜಿ ಪ್ರಧಾನಮಂತ್ರಿ ಹೆಚ್.ಡಿ.ದೇವೇಗೌಡ ಅವರು ಹಲವು ದಿನಗಳ ಬಳಿಕ ನನ್ನ ಜೊತೆ ಫೋನ್ ನಲ್ಲಿ ಮಾತನಾಡಿದ್ದಾರೆ. ಬರುವ 2023ಕ್ಕೆ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ತಿಳಿಸಿದ್ದಾರೆ. 33 ಎಂಎಲ್ಎಗಳು ನಮ್ಮಲ್ಲಿ ಇದ್ದೀರಿ, ಯಾವುದೇ ಕಾರಣಕ್ಕೂ ಪಕ್ಷ ಬಿಡಬೇಡಿ ಎಂದು ದೇವೇಗೌಡ ಅವರು ಹೇಳಿರುವುದಾಗಿ ತಿಳಿಸಿದ್ದಾರೆ.
Advertisement