ಬೆಂಗಳೂರು: ಬಿಎಸ್ ಯಡಿಯೂರಪ್ಪನವರ ನಾಯಕತ್ವ ಒಪ್ಪಿಕೊಂಡು ನಾವು ಬಿಜೆಪಿಗೆ ಬಂದಿದ್ದೇವು. ಆದರೆ ಯಡಿಯೂರಪ್ಪನವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನಿರೀಕ್ಷಿಸಿರಲಿಲ್ಲ ಎಂದು ಮಾಜಿ ಸಚಿವ ಎಂಟಿಬಿ ನಾಗರಾಜ್ ಅವರು ಮಂಗಳವಾರ ಹೇಳಿದ್ದಾರೆ.
ಮಾಜಿ ಸಚಿವ ಎಂಟಿಬಿ ನಾಗರಾಜ್ ಅವರು ಇಂದು ಹಂಗಾಮಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ, ಮುಂದಿನ ಪಕ್ಷದ ಬೆಳವಣಿಗೆ ಮತ್ತು ಸಂಪುಟದ ಬಗ್ಗೆ ಚರ್ಚಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಎಂಟಿಬಿ, ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಯಾರೇ ಸಿಎಂ ಆದರೂ ತೊಂದರೆಯಿಲ್ಲ. ಪಕ್ಷ ಮತ್ತು ನಾಡಿಗೆ ಕೆಲಸ ಮಾಡುವ ವ್ಯಕ್ತಿ ರಾಜ್ಯದ ಸಿಎಂ ಆಗಬೇಕು. ಸಂಪುಟದಿಂದ ಯಾರನ್ನು ಕೈಬಿಡುತ್ತಾರೆ ಮುಂದುವರೆಸುತ್ತಾರೆನ್ನುವುದಿನ್ನೂ ತೀರ್ಮಾನವಾಗಿಲ್ಲ ಎಂದರು.
ಪ್ರಧಾನಿ ನರೇಂದ್ರ ಮೋದಿ ಆಡಳಿತ ವೈಖರಿ, ಅಭಿವೃದ್ಧಿ ಮೆಚ್ಚಿ ಪಕ್ಷಕ್ಕೆ ಬಂದಿದ್ದೇವೆ. ಪಕ್ಷ ಸೇರುವಾಗ ಸಿಎಂ ಬದಲಾವಣೆ ನಿರೀಕ್ಷೆ ಇರಲಿಲ್ಲ. ಈಗ ಮಧ್ಯದಲ್ಲಿ ಬದಲಾವಣೆ ಆಗಿದೆ. ಯಡಿಯೂರಪ್ಪ ಅನೇಕ ಏಳು ಬೀಳುಗಳನ್ನ ಕಂಡವರು. ಮೇಲ್ಮನೆ ಸದಸ್ಯ ಹೆಚ್ ವಿಶ್ವನಾಥ್ ತಮ್ಮ ವೈಯಕ್ತಿಕ ಅಭಿಪ್ರಾಯ ತಿಳಿಸಿದ್ದಾರೆ. ಪಕ್ಷದ ಅನೇಕ ಆಗು ಹೋಗುಗಳ ಬಗ್ಗೆ ನಾನು ಚರ್ಚೆ ಮಾಡುವುದಿಲ್ಲ. ಸಚಿವ ಸ್ಥಾನದಿಂದ ಕೈಬಿಡುವ ಬಗ್ಗೆ ನನಗೆ ಯಾವುದೇ ಆತಂಕ ಇಲ್ಲ. ಸಚಿವನಾಗಿ ಮಾಡಿದರೂ ಸರಿ, ಮಾಡದಿದ್ದರೂ ಯಾವುದೇ ಬೇಸರ ಇಲ್ಲ ಎಂದರು.
Advertisement
Advertisement