ವಲಸಿಗರಿಗೀಗ ಬೊಮ್ಮಾಯಿ ಸಂಪುಟ ಸೇರಲು 'ಸಿಡಿ' ಸಂಕಟ

ಬಿಜೆಪಿ ಹೈಕಮಾಂಡ್ ಮಟ್ಟದಲ್ಲಿ ಬಸವರಾಜ್ ಬೊಮ್ಮಾಯಿ ಅವರ ಸಂಪುಟದಲ್ಲಿ ಯಾವುದೇ ಆರೋಪ ಇರದವರನ್ನು ಸೇರಿಸಿಕೊಳ್ಳಬೆಂಕೆಂಬ ಲೆಕ್ಕಾಚಾರಗಳು ಜೋರಾಗಿ ನಡೆಯುತ್ತಿದ್ದು, ಇದರಿಂದ ಸಿಡಿ ಭಯದಲ್ಲಿರುವ ಶಾಸಕರಿಗೆ ಸಂಪುಟದಲ್ಲಿ...
ಬಿಜೆಪಿಗೆ ವಲಸೆಬಂದ ಶಾಸಕರು
ಬಿಜೆಪಿಗೆ ವಲಸೆಬಂದ ಶಾಸಕರು

ಬೆಂಗಳೂರು: ಬಿಜೆಪಿ ಹೈಕಮಾಂಡ್ ಮಟ್ಟದಲ್ಲಿ ಬಸವರಾಜ್ ಬೊಮ್ಮಾಯಿ ಅವರ ಸಂಪುಟದಲ್ಲಿ ಯಾವುದೇ ಆರೋಪ ಇರದವರನ್ನು ಸೇರಿಸಿಕೊಳ್ಳಬೆಂಕೆಂಬ ಲೆಕ್ಕಾಚಾರಗಳು ಜೋರಾಗಿ ನಡೆಯುತ್ತಿದ್ದು, ಇದರಿಂದ ಸಿಡಿ ಭಯದಲ್ಲಿರುವ ಶಾಸಕರಿಗೆ ಸಂಪುಟದಲ್ಲಿ ಅವಕಾಶ ಕೈ ತಪ್ಪುತ್ತದೆ ಎಂಬ ಆತಂಕ ಶುರುವಾಗಿದೆ. ಆದರೆ, ಅವರನ್ನು ಬಿಟ್ಟು ಸಂಪುಟ ರಚಿಸುವುದೂ ಕಷ್ಟ ಎಂಬ ಮಾತುಗಳು ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿವೆ.

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಹೊರ ಬರುತ್ತಿದ್ದಂತೆ ಯಡಿಯೂರಪ್ಪ ಸಂಪುಟದಲ್ಲಿ ಸಚಿವರಾಗಿದ್ದ ಕೆಲವು ವಲಸಿಗರು ತಮ್ಮ ವಿರುದ್ಧ ಮಾನಹಾನಿಕರ ಸುದ್ದಿಗಳನ್ನು ಪ್ರಕಟಿಸದಂತೆ ಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದರು. ಅಲ್ಲದೇ ಮೂಲ ಬಿಜೆಪಿಯ ಕೆಲವು ಸಚಿವರೂ ಹಾಗೂ ಶಾಸಕರು ಬೆರೆ ಬೇರೆ ಕಾರಣಗಳಿಗೆ ತಮ್ಮ ವಿರುದ್ಧ ಮಾನಹಾನಿಕರ ಸುದ್ದಿ ಪ್ರಕಟಿಸದಂತೆ ತಡೆಯಾಜ್ಞೆ ತಂದಿದ್ದಾರೆ.
ಈ ಬೆಳವಣಿಗೆ ಬಿಜೆಪಿಗೆ ರಾಷ್ಟ್ರಮಟ್ಟದಲ್ಲಿ ಮುಜುಗರಕ್ಕೆ ಕಾರಣವಾಗಿತ್ತು. ಆ ರೀತಿಯ ಬೆಳವಣಿಗೆ ಮುಂಬರುವ ದಿನಗಳಲ್ಲಿ ಮರುಕಳಿಸದಂತೆ ಸಿಡಿ ಆತಂಕದಲ್ಲಿರುವವರಿಗೆ ಸಂಪುಟದಲ್ಲಿ ಅವಕಾಶ ನೀಡಬಾರದು ಎಂದು ಆರ್‌ಎಸ್‌ಎಸ್ ನಾಯಕರು ಸಲಹೆ ನೀಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಸಿಡಿ ಆತಂಕದಲ್ಲಿರುವ ಶಾಸಕರನು ಸಚಿವರನ್ನಾಗಿ ಮಾಡಿದರೆ, ನಂತರ ಅವರ ವಿರುದ್ಧ ಸಿಡಿ ಬಿಡುಗಡೆಯಾದರೆ ಪಕ್ಷ ಹಾಗೂ ಸರ್ಕಾರ ಮತ್ತೆ ರಾಷ್ಟ್ರ ಮಟ್ಟದಲ್ಲಿ ಮುಜುಗರ ಅನುಭವಿಸಬೇಕಾಗುತ್ತದೆ ಎನ್ನುವ ಕಾರಣಕ್ಕೆ ಯಾವುದೇ ಆರೋಪ ಇರದವರನ್ನು ನೂತನ ಸಂಪುಟಕ್ಕೆ ಪರಿಗಣಿಸಬೇಕೆಂಬ ಲೆಕ್ಕಾಚಾರ ಬಿಜೆಪಿ ಹೈಕಮಾಂಡ್ ಹೊಂದಿದೆ ಎನ್ನಲಾಗುತ್ತಿದೆ.

ಆದರೆ, ಬಹುತೇಕ ವಲಸೇ ಶಾಸಕರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿರುವುದರಿಂದ ಅವರನ್ನು ಹೊರಗಿಟ್ಟು ಸಂಪುಟ ರಚಿಸಿದರೆ, ಸುಗಮ ಸರ್ಕಾರ ನಡೆಸುವುದು ಕಷ್ಟ ಎಂಬ ಮಾತುಗಳು ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿವೆ.

ಮಾಜಿ ಸಿಎಂ ಯಡಿಯೂರಪ್ಪ ವಲಸಿಗರಿಗೆ ನ್ಯಾಯ ಕೊಡಿಸುವ ಭರವಸೆ ನೀಡಿರುವುದರಿಂದ ಬಿಜೆಪಿ ಹೈಕಮಾಂಡ್ ಹಾಗೂ ನೂತನ ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ಸಿಡಿ ಶಾಸಕರ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದು ಬಿಸಿ ತುಪ್ಪವಾಗಿ ಪರಿಣಮಿಸಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com