ನಾಯಕತ್ವ ಬದಲಾವಣೆ ಚರ್ಚೆ: 'ಭಿನ್ನ'ರ ಬಾಯಿಗೆ ಬೀಗ ಹಾಕಲು ಶೀಘ್ರವೇ ಬಿಜೆಪಿ ಸಮನ್ವಯ ಸಮಿತಿ ಸಭೆ

ಬಿಜೆಪಿಯಲ್ಲಿ  ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆ ನಡೆಯುತ್ತಿರುವಾಗಲೇ ಲಾಕ್ ಡೌನ್ ನಂತರ ಸಮನ್ವಯ ಸಮಿತಿ ಸಭೆ ನಡೆಸಲು ತೀರ್ಮಾನಿಸಲಾಗಿದೆ.
ನಳಿನ್ ಕುಮಾರ್ ಕಟೀಲ್
ನಳಿನ್ ಕುಮಾರ್ ಕಟೀಲ್

ಬೆಂಗಳೂರು: ಬಿಜೆಪಿಯಲ್ಲಿ  ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆ ನಡೆಯುತ್ತಿರುವಾಗಲೇ ಲಾಕ್ ಡೌನ್ ನಂತರ ಸಮನ್ವಯ ಸಮಿತಿ ಸಭೆ ನಡೆಸಲು ತೀರ್ಮಾನಿಸಲಾಗಿದೆ.

ಜೂನ್ 14 ರ ನಂತರ ಬಿಜೆಪಿ ಸಮನ್ವಯ ಸಮಿತಿ ಸಭೆ ಸೇರಲಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಅವರು, ಸೋಮವಾರ ಲಾಕ್ ಡೌನ್ ತೆರವು ಸಾಧ್ಯತೆಯಿದ್ದು ಮುಂದಿನ ದಿನಗಳಲ್ಲಿ ಬಿಜೆಪಿ ಸಮನ್ವಯ ಸಮಿತಿ ಸಭೆ ಸೇರಲಿದೆ ಎಂದು ತಿಳಿಸಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ವಿರುದ್ಧ ಹಲವು ನಾಯಕರ ಟೀಕೆ ಸೇರಿದಂತೆ ಕೆಲ ಬೆಳವಣಿಗೆಗಳ ನಂತರ  10 ದಿನಗಳ ಹಿಂದೆ ಸಮನ್ವಯ ಸಮಿತಿ ರಚಿಸಲು ಪಕ್ಷ ನಿರ್ಧರಿಸಿತು. ಸಮಿತಿಯಲ್ಲಿ ಹಿರಿಯ ನಾಯಕರುಗಳಾದ ಜಗದೀಶ್ ಶೆಟ್ಟರ್, ಸದಾನಂದಗೌಡ, ಪ್ರಹ್ಲಾದ್ ಜೋಶಿ, ಕೆಎಸ್ ಈಶ್ವರಪ್ಪ ಮತ್ತಿತರರು ಇರಲಿದ್ದಾರೆ ಎಂದು ಕಟೀಲ್ ತಿಳಿಸಿದ್ದಾರೆ.

ಸಮನ್ವಯ ಸಮಿತಿ ಸಭೆ ಸೇರಿದಾಗ ಅದು ಪಕ್ಷದೊಳಗಿನ ಗಂಭೀರ ಭಿನ್ನಾಭಿಪ್ರಾಯಗಳನ್ನು ನಿವಾರಿಸುತ್ತದೆ, ಎದ್ದಿರುವ ಸಮಸ್ಯೆಗಳನ್ನು ಬಗೆಹರಿಸುತ್ತದೆ ಮತ್ತು ಪಕ್ಷದ ಚಿತ್ರಣವನ್ನು ಎತ್ತಿ ಹಿಡಿಯುತ್ತದೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ರವಿ ಕುಮಾರ್ ತಿಳಿಸಿದ್ದಾರೆ.

ಸಿಎಂ ಯಡಿಯೂರಪ್ಪ, ನಳಿನ್ ಕುಮಾರ್ ಕಟೀಲ್, ಪಕ್ಷದ ಪ್ರಧಾನ ಕಾರ್ಯದರ್ಶಿಗಳು ರವಿ ಕುಮಾರ್, ಎಂಎಲ್ ಸಿ ಅಶ್ವತ್ಥ ನಾರಾಯಣ್, ಸಿದ್ದರಾಜ್ ಮತ್ತು ಅರುಣ್ ಕುಮಾರ್, ಸಚಿವರುಗಳಾದ ಡಿ.ಸಿ.ಎಂ ಸಿ.ಎನ್.ಅಶ್ವತ್ಥ್ ನಾರಾಯಣ್, ಆರ್ ಅಶೋಕ ಮತ್ತು ಅರವಿಂದ ಲಿಂಬಾವಳಿ  ಸಮನ್ವಯ ಸಮಿತಿಯ ಭಾಗವಾಗಲಿದ್ದಾರೆ, ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಜೊತೆಗೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕೂಡ ಸಮಿತಿಯಲ್ಲಿರಲಿದ್ದಾರೆ.

ಪಕ್ಷವನ್ನು ಬಲಪಡಿಸಲು ಅಧಿಕೃತ ಪ್ರವಾಸದಲ್ಲಿರುವ ರವಿ ಅವರು ಬೆಂಗಳೂರಿನಲ್ಲಿದ್ದರೆ ಸಭೆಯಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದ್ದಾರೆ. ಪಕ್ಷದ ಕಾರ್ಯಚಟುವಟಿಕೆಯನ್ನು ಸುಗಮಗೊಳಿಸಲು ಸಮಿತಿಯನ್ನು ರಚಿಸುವಂತೆ ಕೇಂದ್ರ ನಾಯಕತ್ವವು ಪಕ್ಷಕ್ಕೆ ನಿರ್ದೇಶನ ನೀಡಿದೆ ಎಂದು ವರದಿಯಾಗಿದೆ.

ಸಿಎಂ ಅವರ ರಾಜಕೀಯ ಕಾರ್ಯದರ್ಶಿ ಎಂ ಪಿ ರೇಣುಕಾಚಾರ್ಯ ಅವರು ಪ್ರಸ್ತಾಪಿಸಿದ ಸಹಿ ಅಭಿಯಾನದಂತಹ ಸಮಸ್ಯೆಗಳನ್ನು ಬಗೆಹರಿಸುವ ಸಾಧ್ಯತೆಯಿದೆ. ಸಭೆ ಜೂನ್ 16 ಅಥವಾ 17 ರಂದು ನಡೆಯಬಹುದು ಎಂದು ಹೇಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com