ರಾಜ್ಯಕ್ಕೆ ಈ ವಾರ ಅರುಣ್ ಸಿಂಗ್ ಆಗಮನ, ಮೊದಲು ಸಚಿವರು-ಶಾಸಕರ ಜೊತೆ ಮಾತುಕತೆ, ಸಭೆ!

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ವಾರಗಳಿಂದ ನಡೆಯುತ್ತಿರುವ ರಾಜಕೀಯ ಪ್ರಹಸನಕ್ಕೆ ತೆರೆ ಎಳೆಯುವ ಪ್ರಯತ್ನ ನಡೆಯುತ್ತಿದೆ. ಈ ವಾರದಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ.
ರಾಜ್ಯ ಬಿಜೆಪಿ ಉಸ್ತುವಾರಿ, ರಾಜ್ಯಸಭಾ ಸದಸ್ಯ ಅರುಣ್ ಸಿಂಗ್
ರಾಜ್ಯ ಬಿಜೆಪಿ ಉಸ್ತುವಾರಿ, ರಾಜ್ಯಸಭಾ ಸದಸ್ಯ ಅರುಣ್ ಸಿಂಗ್

ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ವಾರಗಳಿಂದ ನಡೆಯುತ್ತಿರುವ ರಾಜಕೀಯ ಪ್ರಹಸನಕ್ಕೆ ತೆರೆ ಎಳೆಯುವ ಪ್ರಯತ್ನ ನಡೆಯುತ್ತಿದೆ. ಈ ವಾರದಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ.

ನಿನ್ನೆ ಮಾಧ್ಯಮಗಳ ಮುಂದೆ ದೆಹಲಿಯಲ್ಲಿ ಮಾತನಾಡಿದ್ದ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ನಾಡಿದ್ದು ಬುಧವಾರ ಬೆಂಗಳೂರಿಗೆ ಹೋಗಿ ಅಲ್ಲಿ ಎರಡು-ಮೂರು ದಿನಗಳ ಕಾಲ ಉಳಿದು ಸಂಬಂಧಪಟ್ಟವರಲ್ಲಿ ಮಾತನಾಡಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ.

ಈ ಮಧ್ಯೆ, ಶಾಸಕ ಅರವಿಂದ ಬೆಲ್ಲದ್ ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ಅವರನ್ನು ಭೇಟಿ ಮಾಡಿದ್ದು, ಅರುಣ್ ಸಿಂಗ್ ಅವರು ಶಾಸಕರನ್ನು ಭೇಟಿ ಮಾಡಿದರೆ ಸಮಸ್ಯೆ ಬಗೆಹರಿಸುವ ಬಗ್ಗೆ ಮತ್ತು ಎಲ್ಲರಿಗೂ ನ್ಯಾಯ ಒದಗಿಸುವ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ ಎನ್ನಲಾಗುತ್ತಿದೆ. 

ಕಳೆದ ವಾರ ಮಾತನಾಡುತ್ತಾ ಅರುಣ್ ಸಿಂಗ್ ನಾಯಕತ್ವ ಬದಲಾವಣೆಯನ್ನು ನಿರಾಕರಿಸಿದ್ದರು. ಪಕ್ಷದ ಶಾಸಕರು ಮತ್ತು ನಾಯಕರ ಜೊತೆ ಮಾತನಾಡುವ ಮೊದಲೇ ಅವರು ನಾಯಕತ್ವ ಬದಲಾವಣೆ ಬಗ್ಗೆ ನಿರಾಕರಿಸಿರುವುದು ಅರವಿಂದ ಬೆಲ್ಲದ್ ಇದರಿಂದ ಅಸಮಾಧಾನಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಯಡಿಯೂರಪ್ಪನವರ ನಾಯಕತ್ವದಲ್ಲಿ ಬದಲಾವಣೆಯೇ ಇಲ್ಲ, ಮುಂದಿನ ಎರಡು ವರ್ಷಗಳ ಕಾಲ ಅವರೇ ಮುಂದುವರಿಯಲಿದ್ದಾರೆ ಎಂದು ಅರುಣ್ ಸಿಂಗ್ ಹೇಳಿದ್ದಾರೆ.

ಈ ವಾರದ ಮಧ್ಯ ಭಾಗದಲ್ಲಿ ರಾಜ್ಯಕ್ಕೆ ಬರುವ ಅರುಣ್ ಸಿಂಗ್ ಇಲ್ಲಿ ಎರಡು-ಮೂರು ದಿನಗಳ ಕಾಲ ಇರುತ್ತಾರೆ. ಸಭೆಗಳನ್ನು ನಡೆಸಿ ಪರಿಸ್ಥಿತಿ ಪರಾಮರ್ಶಿಸಲಿದ್ದಾರೆ. ಈ ಬಗ್ಗೆ ಪತ್ರಕರ್ತರು ಸಿಎಂ ಯಡಿಯೂರಪ್ಪರನ್ನು ಕೇಳಿದಾಗ, ಅರುಣ್ ಸಿಂಗ್ ಅವರನ್ನು ಸ್ವಾಗತಿಸುತ್ತೇವೆ, ಇಲ್ಲಿ ಬಂದು ಅವರು ಕೇಳುವ ಮಾಡುವ ಸಭೆಗಳಿಗೆ ಸಹಕಾರ ನೀಡುತ್ತೇವೆ ಎಂದಿದ್ದರು.

ಪಕ್ಷದಲ್ಲಿ ಶಾಸಕರಿಗೆ ತಮ್ಮ ಅಭಿಪ್ರಾಯ, ಸಲಹೆ, ಸಮಸ್ಯೆಗಳನ್ನು ಹೇಳಿಕೊಳ್ಳಲು ಸೂಕ್ತ ವೇದಿಕೆ ಕಲ್ಪಿಸಬೇಕು, ಸಾರ್ವಜನಿಕವಾಗಿ ಹೇಳಿಕೆ ನೀಡಲು ಹಲವರಿಗೆ ಬೆಂಬಲವಿಲ್ಲ ಎಂದು ಇತ್ತೀಚೆಗೆ ವಿಧಾನಸಭೆಯ ಮುಖ್ಯ ಸಚೇತಕ ಸುನಿಲ್ ಕುಮಾರ್ ಟ್ವೀಟ್ ಮಾಡಿದ್ದರು, ಈ ಎಲ್ಲಾ ಕಾರಣಗಳಿಂದ ಅರುಣ್ ಸಿಂಗ್ ಅವರ ಈ ವಾರದ ರಾಜ್ಯ ಭೇಟಿ ರಾಜ್ಯ ರಾಜಕೀಯದಲ್ಲಿ ಮಹತ್ವ ಪಡೆದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com