ಬೆಳಗಾವಿಯಲ್ಲಿ ಗೆದ್ದರೂ ಬಿಜೆಪಿಯನ್ನು ಚಿಂತೆಗೆ ಹಚ್ಚಿದ ಮತಗಳ ಅಂತರ, ಮಸ್ಕಿಯಲ್ಲಿ ತಲೆಕೆಳಗಾದ ಲೆಕ್ಕಾಚಾರ!

ಮೂರು ಕ್ಷೇತ್ರಗಳ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿರುವುದು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಕೊಂಚ ನಿರಾಳವನ್ನು ನೀಡಿದ್ದರೂ ಬೆಳಗಾವಿಯಲ್ಲಿ ಅಲ್ಪಮಟ್ಟದ ಮತಗಳ ಅಂತರದಿಂದ ಸಾಧಿಸಿರುವ ಗೆಲುವು ರಾಜ್ಯ ಬಿಜೆಪಿ ಚಿಂತೆಗೀಡಾಗುವಂತೆ ಮಾಡಿದೆ. 
ಕುಟುಂಬದೊಂದಿಗೆ ಮಂಗಳಾ ಅಂಗಡಿ
ಕುಟುಂಬದೊಂದಿಗೆ ಮಂಗಳಾ ಅಂಗಡಿ

ಬೆಂಗಳೂರು: ಮೂರು ಕ್ಷೇತ್ರಗಳ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿರುವುದು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಕೊಂಚ ನಿರಾಳವನ್ನು ನೀಡಿದ್ದರೂ ಬೆಳಗಾವಿಯಲ್ಲಿ ಅಲ್ಪಮಟ್ಟದ ಮತಗಳ ಅಂತರದಿಂದ ಸಾಧಿಸಿರುವ ಗೆಲುವು ರಾಜ್ಯ ಬಿಜೆಪಿ ಚಿಂತೆಗೀಡಾಗುವಂತೆ ಮಾಡಿದೆ. 

ಇನ್ನು ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದ ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಸ್ವತಃ ಉಪಚುನಾವಮೆಯ ಮಾಸ್ಟರ್ ಎಂದೇ ಕರೆಯಲ್ಪಡುವ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರ ಬಿವೈ ವಿಜಯೇಂದ್ರ ಉಸ್ತುವಾರಿಯಾಗಿದ್ದರೂ ಗೆಲುವು ಸಾಧ್ಯವಾಗಲಿಲ್ಲ. 

ಬೆಳಗಾವಿ ಲೋಕಸಭಾ ಕ್ಷೇತ್ರ ಮತ್ತು ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಕ್ಕೆ ಹೋಲಿಸಿದರೆ ಮಸ್ಕಿ ಕ್ಷೇತ್ರದಲ್ಲಿ ಹೆಚ್ಚಿನ ಮತದಾನ ಪ್ರಮಾಣ ನಡೆದಿತ್ತು. ಇದಲ್ಲದೆ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಈ ಕ್ಷೇತ್ರದ ಅಭಿವೃದ್ಧಿಗಾಗಿ ನೂರಾರು ಕೋಟಿಗಳನ್ನೂ ಮಂಜೂರು ಮಾಡಿತ್ತು. ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಮೂರು ದಿನಗಳ ಕಾಲ ಕ್ಷೇತ್ರದಲ್ಲಿಯೇ ವಾಸ್ತವ್ಯ ಹೂಡಿ ಪ್ರಚಾರವನ್ನೂ ಮಾಡಿದ್ದರು. ಯಡಿಯೂರಪ್ಪ ಅವರ ಜೊತೆಗೆ ಲಿಂಗಾಯತ ಸಮುದಾಯ ಕೂಡ ಪ್ರಚಾರದ ವೇಳೆ ಸಾಥ್ ನೀಡಿತ್ತು. 

ಅಭ್ಯರ್ಥಿಯಾಗಿದ್ದ ಪ್ರತಾಪ್ ಗೌಡ ಪಾಟೀಲ್ ಅವರು ಬಿಜೆಪಿ ಸರ್ಕಾರದ ಅಸ್ತಿತ್ವಕ್ಕಾಗಿ ಕಾಂಗ್ರೆಸ್ ತೊರೆದು ಬಂದಿದ್ದರು. ಇಷ್ಟೆಲ್ಲಾ ಇದ್ದರೂ ಪಕ್ಷ ಸೋಲು ಬಿಜೆಪಿಯ ಲೆಕ್ಕಾಚಾರ ತಲೆಕೆಳಗಾಗುವಂತೆ ಮಾಡಿದೆ. ಮಸ್ಕಿಯಲ್ಲಿ ಬಿಜೆಪಿ ಹೀನಾಯ ಸೋಲು ಕಂಡಿದೆ. 

ಇನ್ನು ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿನ ಗೆಲುವು ತಾಂತ್ರಿಕವಾಗಿ ಅಷ್ಟೇ. ವಾಸ್ತವದಲ್ಲಿ ಆ ಜಿಲ್ಲೆ ಅಥವಾ ಕ್ಷೇತ್ರದಲ್ಲಿ ಪಕ್ಷದ ಹಿಡಿತ ಗಮನಿಸಿದರೆ ಈಗ ಅಭ್ಯರ್ಥಿ ಗಳಿಸಿರುವ ಮತಗಳು ಏನೂ ಅಲ್ಲ. 

ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಅಭ್ಯರ್ಥಿಯಾಗಿದ್ದ ದಿ.ಸುರೇಶ್ ಅಂಗಡಿಯವರು 3.91 ಲಕ್ಷಗಳ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು. ಸತತ ನಾಲ್ಕು ಬಾರಿ ಜಯಗಳಿಸಿದ್ದ ಪಕ್ಷದ ಭದ್ರಕೋಟೆ ಅದು. ಆದರೆ, ಈ ಬಾರಿ ಅವರ ಪತ್ನಿ ಮಂಗಳಾ ಅಂಗಡಿ ಅವರ ಗೆಲುವಿನ ಮತಗಳ ಅಂತರ ಕೇವಲ 5,240 ಮಾತ್ರ. ಸೋಲಿನಂಚಿಗೆ ತಲುಪಿ ಗೆಲುವು ಸಾಧಿಸಿದ್ದಾರೆ. 

ಬೆಳಗಾವಿಯಲ್ಲಿ ಬಿಜೆಪಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಆರಂಭಿಸಿದ್ದ ಜನಪ್ರಿಯ ಕಾರ್ಯಕ್ರಮಗಳೇ ಬಿಜೆಪಿಯ ಗೆಲುವಿಗೆ ಕಾರಣ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com