'ತನ್ನದೇ ಶಾಸಕರ ಮನೆ ಸುಟ್ಟವರು ಅಮಾಯಕರೆಂದು ಬಿಂಬಿಸುವವರು ಮಾನವೀಯ ಕಳಕಳಿ ಇರುವವರೇ?'

ಮಾನವೀಯ ಕಳಕಳಿ ಇದ್ದವರು ವೋಟಿಗಾಗಿ ಕೊಲೆಗಡುಕರನ್ನು ಬೆಂಬಲಿಸುವ ಹೀನ ರಾಜಕಾರಣ ಮಾಡುವುದಿಲ್ಲ. ತನ್ನದೇ ಶಾಸಕರ ಮನೆ ಸುಟ್ಟವರು ಅಮಾಯಕರೆಂದು ಬಿಂಬಿಸುವವರು ಮಾನವೀಯ ಕಳಕಳಿ ಇರುವವರೇ?
ಸಿಟಿ ರವಿ
ಸಿಟಿ ರವಿ

ಬೆಂಗಳೂರು: ಬಿಜೆಪಿಗೆ ನ್ಯಾಯಾಂಗದ ಗೌರವದ ಬಗ್ಗೆ ಯಾರೂ ಪಾಠ ಹೇಳಿಕೊಡಬೇಕಾಗಿಲ್ಲ, ನ್ಯಾಯಾಂಗದ ಬಗ್ಗೆ ನಮಗೆ ಸದಾ ಗೌರವವಿದೆ ಎನ್ನುವ ಮೂಲಕ ಬಿಜೆಪಿ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಸಿ.ಟಿ.ರವಿ ಅವರು ಕಾಂಗ್ರೆಸ್‌ ನಾಯಕರಿಗೆ ತಿರುಗೇಟು ನೀಡಿದ್ದಾರೆ.

ದುರಹಂಕಾರಿ ಯಾರು ಸಿದ್ದರಾಮಯ್ಯನವರೇ? ಅವರವರ ಹಾವಭಾವಗಳು ದುರಹಂಕಾರಿ ಯಾರೆಂದು ಹೇಳುತ್ತವೆ, ಅಧಿಕಾರದ ಮದದಿಂದ ಮೆರೆದವರು ಯಾರೆಂದು ರಾಜ್ಯಕ್ಕೆ ಗೊತ್ತಿದೆ. ಮಾನವೀಯ ಕಳಕಳಿ ಇದ್ದವರು ವೋಟಿಗಾಗಿ ಕೊಲೆಗಡುಕರನ್ನು ಬೆಂಬಲಿಸುವ ಹೀನ ರಾಜಕಾರಣ ಮಾಡುವುದಿಲ್ಲ. ತನ್ನದೇ ಶಾಸಕರ ಮನೆ ಸುಟ್ಟವರು ಅಮಾಯಕರೆಂದು ಬಿಂಬಿಸುವವರು ಮಾನವೀಯ ಕಳಕಳಿ ಇರುವವರೇ?

ಸರಣಿ ಟ್ವೀಟ್‌ಗಳನ್ನು ಮಾಡಿರುವ ಅವರು, ಯಾವ ಪಕ್ಷ ನ್ಯಾಯಾಲಯದ ತೀರ್ಪಿನ ವಿರುದ್ಧ ತುರ್ತು ಪರಿಸ್ಥಿತಿ ಹೇರಿ ಸ್ವಾತಂತ್ರ್ಯಹರಣ ಮಾಡಿತ್ತೋ, ಅದೇ ಪಕ್ಷ ಇಂದು ಏಕಾಏಕಿ ನ್ಯಾಯಾಲಯದ ಬಗ್ಗೆ ಗೌರವ ವ್ಯಕ್ತಪಡಿಸುತ್ತಿದೆ ಎಂದು  ಕುಟುಕಿದ್ದಾರೆ.

ಮುಂದುವರಿದು, ಯಾವ ಪಕ್ಷವು ನ್ಯಾಯಾಲಯಗಳು ಮೋದಿಯ ಆಲಯಗಳಾಗಿವೆ ಎಂದು ಆರೋಪಿಸಿ ಸಿಎಎ, ರಾಮ ಮಂದಿರ ತೀರ್ಪಿನ ವಿರುದ್ಧ ಅಪಪ್ರಚಾರ ಮಾಡಿತ್ತೋ, ಅದು ಈಗ ನ್ಯಾಯಾಲಯಗಳ ಪರವಾಗಿ ಗೌರವ ವ್ಯಕ್ತಪಡಿಸುತ್ತಿರುವುದು ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತಾಗಿದೆ. ಮಾನ್ಯ ಸಿದ್ದರಾಮಯ್ಯನವರೇ ಮತ್ತು ದಿನೇಶ್‌ ಗುಂಡೂರಾವ್‌ ಅವರೇ ಏನಂತಿರಾ? ಎಂದು ಪ್ರಶ್ನಿಸಿದ್ದಾರೆ.

ಮತ್ತೊಂದು ಟ್ವೀಟ್‌ನಲ್ಲಿ, ಅಷ್ಟಕ್ಕೂ ನಾನು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾದರೂ ಏನು? ನ್ಯಾಯಾಧೀಶರೇನು ಸರ್ವಜ್ಞರಲ್ಲ. ಅವರೂ ತಾಂತ್ರಿಕ ಸಮಿತಿಯ ಸಲಹೆಯ ಮೇರೆಗೆ ನಿರ್ದೇಶನ ನೀಡುತ್ತಾರೆ ಎಂದಿದ್ದೇನೆ. ಸರ್ವೋಚ್ಚ ನ್ಯಾಯಾಲಯವೂ ಇದನ್ನೇ ಹೇಳಿದೆ. ಇದರಲ್ಲಿ ತಪ್ಪೇನಿದೆ? ಮೊಸರಲ್ಲಿ ಕಲ್ಲು ಹುಡುಕುವ ಮನೋಭಾವದವರು ಎಲ್ಲದರಲ್ಲೂ ತಪ್ಪು ಹುಡುಕುತ್ತಾರೆ ಎಂದು ಕಾಂಗ್ರೆಸ್‌ ನಾಯಕರ ವಿರುದ್ಧ ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com