ಬೆಂಗಳೂರು: ರೈತ ಕಾಯ್ದೆಗಳ ವಿರುದ್ಧ ಪ್ರತಿಭಟನೆ ವೇಳೆ ಏಕಾಏಕಿ ಭುಗಿಲೆದ್ದ “ಟೂಲ್ಕಿಟ್’ ವಿವಾದ ಮತ್ತೊಮ್ಮೆ ಚರ್ಚೆಯ ವಸ್ತುವಾಗಿದೆ.
ಕಾಂಗ್ರೆಸ್ ಕೊರೊನಾ ಸಂಕಷ್ಟದ ಪರಿಸ್ಥಿತಿಯನ್ನು ಪ್ರಧಾನಮಂಂತ್ರಿ ಮೋದಿಯವರ ವರ್ಚಸ್ಸಿಗೆ ಮಸಿ ಬಳಿಯಲು ಬಳಸಲಾಗುತ್ತಿದೆ ಎಂದು ಬಿಜೆಪಿ ಆರೋಪಿಸಿದ್ದು, ಇದಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್, ಅಂತಹ ಟೂಲ್ಕಿಟ್ ಇಲ್ಲ. ಅದು ಕೇವಲ ಬಿಜೆಪಿಯ ಕಪೋಲಕಲ್ಪಿತ ಪ್ರಚಾರ ಎಂದಿದೆ.
ಟೂಲ್ಕಿಟ್ ಆರೋಪದ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡರಾದ ಜೆ.ಪಿ. ನಡ್ಡಾ, ಸಂಭೀತ್ ಪಾತ್ರಾ ವಿರುದ್ಧ ಪೊಲೀಸರಿಗೆ ದೂರು ನೀಡಲು ಕಾಂಗ್ರೆಸ್ ನಿರ್ಧರಿಸಿದೆ.
ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಅವರು, ಕಾಂಗ್ರೆಸ್ ಪಕ್ಷವು ಕೋವಿಡ್ ಪರಿಸ್ಥಿತಿಯನ್ನು ಕೆಟ್ಟದಾಗಿ ನಿರ್ವಹಿಸಲಾಗಿದೆ ಎಂದು ಅಪಪ್ರಚಾರ ಮಾಡುತ್ತಿದೆ ಎಂದು ಆರೋಪಿಸಿದ್ದರು. ಜೊತೆಗೆ ಕೊರೊನಾವೈರಸ್ನ ಹೊಸ ರೂಪಾಂತರವನ್ನು ʼಮೋದಿ ತಳಿʼ ಎನ್ನುವಂತೆ ಕಾರ್ಯಕರ್ತರಿಗೆ ಸೂಚನೆ ನೀಡಲಾಗಿದೆ ಎಂದೂ ಹೇಳಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ಇದು ಸುಳ್ಳು. ಪಾತ್ರ ವಿರುದ್ಧ ಎಫ್ಐಆರ್ ದಾಖಲಿಸಲಾಗುವುದು ಎಂದು ಹೇಳಿದೆ.
ಬಿಜೆಪಿಯು ಕೋವಿಡ್-19 ಕಳಪೆ ನಿರ್ವಹಣೆಯ ಬಗ್ಗೆ ಸುಳ್ಳು ಟೂಲ್ಕಿಟ್ ಪ್ರಚಾರ ಮಾಡುತ್ತಿದೆ ಮತ್ತು ಎಐಸಿಸಿ ಸಂಶೋಧನಾ ಇಲಾಖೆ ವಿರುದ್ಧ ಆರೋಪಿಸುತ್ತಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತು ಬಿಜೆಪಿ ವಕ್ತಾರ ಸಂಬಿತ್ ಪಾತ್ರ ವಿರುದ್ಧ ಎಫ್ಐಆರ್ ದಾಖಲಿಸುತ್ತೇವೆ. ದೇಶವು ಕೋವಿಡ್ನಿಂದಾಗಿ ತತ್ತರಿಸುತ್ತಿರುವ ಹೊತ್ತಿನಲ್ಲಿ, ಪರಿಹಾರ ಕಾರ್ಯಾಚರಣೆ ನಡೆಸುವ ಬದಲು ಬಿಜೆಪಿಯು ನಾಚಿಕೆಯಿಲ್ಲದೆ ಸುಳ್ಳು ಪತ್ರಗಳನ್ನು ಸೃಷ್ಟಿಸುತ್ತಿದೆʼ ಎಂದು ಕಾಂಗ್ರೆಸ್ ವಕ್ತಾರ ಮತ್ತು ಎಐಸಿಸಿ ಸಂಶೋಧನಾ ವಿಭಾಗದ ರಾಜೀವ್ ಗೌಡ ತಿಳಿಸಿದ್ದಾರೆ.
ಕೊರೋನಾ ಪರಿಸ್ಥಿತಿ ನಿರ್ವಹಿಸಲು ವಿಫಲಗೊಂಡಿರುವ ಸರ್ಕಾರ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಟೂಲ್ ಕಿಟ್ ನಾಟಕವಾಡುತ್ತಿದೆ. ಬಿಜೆಪಿಯವರು ಸೃಷ್ಟಿಸಿರುವ ಈ ನಕಲಿ ಟೂಲ್ ಕಿಟ್ ನ್ನು ನೋಡಿದರೆ ಯಾರಾದರೂ ನಗುತ್ತಾರೆ. ಶೀಘ್ರದಲ್ಲೇ ಇದರ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಲಾಗುತ್ತದೆ ಎಂದು ಹೇಳಿದ್ದಾರೆ.
Advertisement