ಇಂದು ಬೆಳಗ್ಗೆ 11 ಗಂಟೆಗೆ ಪ್ರಧಾನಿ ಮೋದಿ ಭೇಟಿಗೆ ಸಮಯ ನಿಗದಿ: ಬಿಟ್ ಕಾಯಿನ್ ದಂಧೆ ವಿವಾದ ಮಧ್ಯೆ ಸಿಎಂ ಬೊಮ್ಮಾಯಿಗೆ ಸ್ಪಷ್ಟ ಸಂದೇಶ? 

ಬಿಟ್ ಕಾಯಿನ್ ಹಗರಣ ಬಗ್ಗೆ ರಾಜ್ಯದಲ್ಲಿ ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ನಡುವೆ ಆರೋಪ ತಾರಕಕ್ಕೇರಿದೆ. ರಾಜಕೀಯದಲ್ಲಿ ಹಲವು ಊಹಾಪೋಹಗಳು ಎದ್ದಿವೆ. ಎಷ್ಟರ ಮಟ್ಟಿಗೆ ಎಂದರೆ ಬಿಟ್ ಕಾಯಿನ್ ಹಗರಣದಿಂದ ಮುಖ್ಯಮಂತ್ರಿಯೇ ಪದವಿ ಕಳೆದುಕೊಳ್ಳುತ್ತಾರೆ ಎಂಬುದಾಗಿ ಕಾಂಗ್ರೆಸ್ ನಾಯಕರು ಹೇಳಿಕೆ ನೀಡುತ್ತಿದ್ದಾರೆ. 
ಪ್ರಧಾನಿ ನರೇಂದ್ರ ಮೋದಿ-ಸಿಎಂ ಬಸವರಾಜ ಬೊಮ್ಮಾಯಿ
ಪ್ರಧಾನಿ ನರೇಂದ್ರ ಮೋದಿ-ಸಿಎಂ ಬಸವರಾಜ ಬೊಮ್ಮಾಯಿ
Updated on

ನವದೆಹಲಿ: ಬಿಟ್ ಕಾಯಿನ್ ಹಗರಣ ಬಗ್ಗೆ ರಾಜ್ಯದಲ್ಲಿ ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ನಡುವೆ ಆರೋಪ ತಾರಕಕ್ಕೇರಿದೆ. ರಾಜಕೀಯದಲ್ಲಿ ಹಲವು ಊಹಾಪೋಹಗಳು ಎದ್ದಿವೆ. ಎಷ್ಟರ ಮಟ್ಟಿಗೆ ಎಂದರೆ ಬಿಟ್ ಕಾಯಿನ್ ಹಗರಣದಿಂದ ಮುಖ್ಯಮಂತ್ರಿಯೇ ಪದವಿ ಕಳೆದುಕೊಳ್ಳುತ್ತಾರೆ ಎಂಬುದಾಗಿ ಕಾಂಗ್ರೆಸ್ ನಾಯಕರು ಹೇಳಿಕೆ ನೀಡುತ್ತಿದ್ದಾರೆ. 

ದಿನೇ ದಿನೇ ಬಿಟ್ ಕಾಯಿನ್ ವಿವಾದ ಬಿಜೆಪಿ ಕೊರಳಿಗೆ ಸುತ್ತಿಕೊಳ್ಳುತ್ತಿರುವ ನಡುವೆಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೆಹಲಿ ಪ್ರವಾಸ ಕೈಗೊಂಡಿದ್ದಾರೆ. ಇಂದು ಬೆಳಗ್ಗೆ 11 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡುವ ಕಾರ್ಯಕ್ರಮ ನಿಗದಿಯಾಗಿದೆ. ಅದರಲ್ಲಿ ಬಿಟ್ ಕಾಯಿನ್ ವಿವಾದ ಕುರಿತಂತೆ ಸಿಎಂ ಪ್ರಧಾನಿ ಬಳಿ ಚರ್ಚೆ ಮಾಡಲಿದ್ದಾರೆಯೇ ಅದರಿಂದ ಮುಂದಿನ ದಿನಗಳಲ್ಲಿ ರಾಜ್ಯ ರಾಜಕೀಯ ಭವಿಷ್ಯ ಏನಾಗಲಿದೆ ಎಂಬ ಕುತೂಹಲ ಕೆರಳಿದೆ. 

ನಿನ್ನೆ ದೆಹಲಿಗೆ ತೆರಳುವ ಮುನ್ನ ಬೆಂಗಳೂರಿನಲ್ಲಿ ಮಾತನಾಡಿದ್ದ ಸಿಎಂ ಬಸವರಾಜ ಬೊಮ್ಮಾಯಿ,  ಕೇಂದ್ರ ಸಚಿವರನ್ನು ಭೇಟಿ ಆಗಲಿದ್ದೇನೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸಮಯವನ್ನೂ ಕೇಳಿದ್ದೇನೆ, ನಾಳೆ ಸಮಯ ಸಿಗುವ ನಿರೀಕ್ಷೆ ಇದೆ  ಎಂದಿದ್ದರು.

ಕೇಂದ್ರ ಸಚಿವರನ್ನ ಭೇಟಿಯಾಗಿ ರಾಜ್ಯದ ಯೋಜನೆಗಳ ಬಗ್ಗೆ ಚರ್ಚಿಸುತ್ತೇನೆ ಮತ್ತು ವಿಶೇಷವಾಗಿ ನಮ್ಮ ಅಂತಾರಾಜ್ಯ ಜಲವಿವಾದ ಕುರಿತು ವಕೀಲರ ಜೊತೆಯಲ್ಲಿಯೂ ಚರ್ಚೆ ಮಾಡಲಿದ್ದೇನೆ. ಕೃಷ್ಣ ಮತ್ತು ಕಾವೇರಿ ನದಿ ಎರಡು ವಿಚಾರದಲ್ಲಿ ಸುಪ್ರೀಂಕೋರ್ಟ್​​ನಲ್ಲಿರುವ ಪ್ರಕರಣಗಳ ಪ್ರಗತಿ ಪರಿಶೀಲಿಸಿ ಚರ್ಚೆ ನಡೆಸುತ್ತೇನೆ. ಜೊತೆಗೆ ಖಾಸಗಿ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುತ್ತಿದ್ದು, ನಾಳೆ ಸಂಜೆ ಬೆಂಗಳೂರಿಗೆ ವಾಪಸಾಗಲಿದ್ದೇನೆ ಎಂದಿದ್ದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರ ಸಮಯವನ್ನು ಕೇಳಿದ್ದೇನೆ, ಸಮಯಾವಕಾಶ ಸಿಕ್ಕರೆ ಎಲ್ಲರನ್ನೂ ಭೇಟಿಯಾಗುತ್ತೇನೆ. ಸಂಪುಟ ವಿಸ್ತರಣೆಯಂತಹ ವಿಷಯವನ್ನು ಹೈಕಮಾಂಡ್ ಜೊತೆ ಚರ್ಚಿಸುವ ಉದ್ದೇಶ ಇರಿಸಿಕೊಂಡಿಲ್ಲ, ಆದರೆ ಅಲ್ಲಿ ಏನು ಚರ್ಚೆಯಾಗುತ್ತದೆಯೋ ಗೊತ್ತಿಲ್ಲ ಎಂದಿದ್ದರು.

ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿಯಾದ ನಂತರ ಹಿಂದೆ ನಾಲ್ಕು ಬಾರಿ ದೆಹಲಿಗೆ ಹೋಗಿ ಹೈಕಮಾಂಡ್ ಮತ್ತು ವಿವಿಧ ಕೇಂದ್ರ ಸಚಿವರನ್ನು ಭೇಟಿ ಮಾಡಿ ಬಂದಿದ್ದರು. ಆದರೆ ಈ ಬಾರಿ ಮಾತ್ರ ಪರಿಸ್ಥಿತಿ ಹಾಗಿಲ್ಲ. ಪ್ರಧಾನಿಯವರೇ 11 ಗಂಟೆಗೆ ಭೇಟಿಗೆ ಸಮಯ ನಿಗದಿ ಮಾಡಿದ್ದಾರೆ. ಅದರಲ್ಲಿ ಪ್ರಧಾನಿಯವರು ಮುಖ್ಯಮಂತ್ರಿಗೆ ಮತ್ತು ರಾಜ್ಯದ ಬಿಜೆಪಿ ನಾಯಕರಿಗೆ ಏನು ಸಂದೇಶ ನೀಡುತ್ತಾರೆ, ಸಿಎಂ ಬದಲಾವಣೆಯಾಗುತ್ತಾರೆಯೇ, ಬೊಮ್ಮಾಯಿಯವರ ಭವಿಷ್ಯ ನಿರ್ಧಾರವಾಗಲಿದೆಯೇ ಎಂಬ ಕುತೂಹಲ ಕೆರಳಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com