ಬೆಂಗಳೂರು: ಭಾರತದ ಅತಿದೊಡ್ಡ ಬಿಟ್ಕಾಯಿನ್ ಹಗರಣವನ್ನು ಕರ್ನಾಟಕ ಬಿಜೆಪಿ ಸರ್ಕಾರವು ನ್ಯಾಯಯುತ ತನಿಖೆ ನಡೆಸುವ ಬದಲು “ಆಪರೇಷನ್ ಬಿಟ್ಕಾಯಿನ್ ಹಗರಣವನ್ನು ಮುಚ್ಚಿಹಾಕಲು” ಯತ್ನಿಸುತ್ತಿದೆ. ಹಗರಣದ ತನಿಖೆಯನ್ನು ಕೈಬಿಡಲು ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಹೇಳುವ ಮೂಲಕ ತನಿಖೆಯನ್ನು ಕೈಬಿಡಲು ಪ್ರಯತ್ನಿಸುತ್ತಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸಿಂಗ್ ಸುರ್ಜೆವಾಲಾ ಗಂಭೀರ ಆರೋಪ ಮಾಡಿದ್ದರು.
ಸುರ್ಜೆವಾಲಾ ಆರೋಪಕ್ಕೆ ಪ್ರತಿಕ್ರಿಯಿಸಿರುವ ಸಿಎಂ ಬೊಮ್ಮಾಯಿ ಬೆಂಗಳೂರಿನಲ್ಲಿಂದು ಮಾತನಾಡಿ, ಹಗರಣದ ಬಗ್ಗೆ ತನಿಖೆ ನಡೆಯುತ್ತಿದೆ ಕಾಂಗ್ರೆಸ್ ನವರು ಹಗರಣ ಆಗಿದೆ ಎಂದು ಯಾವ ಆಧಾರವನ್ನಿಟ್ಟುಕೊಂಡು ಆರೋಪ ಮಾಡುತ್ತಿದ್ದಾರೆ, ಆಧಾರವಿದ್ದರೆ ಬಹಿರಂಗಪಡಿಸಲಿ, ಪ್ರಕರಣದಲ್ಲಿ ಯಾರೇ ಎಷ್ಟೇ ಪ್ರಭಾವಿಗಳಿದ್ದರೂ ರಕ್ಷಿಸುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ. ಅಲ್ಲದೆ ಸುರ್ಜೆವಾಲಾ ಅವರ 6 ಪ್ರಶ್ನೆಗಳಿಗೆ ಪ್ರತ್ಯುತ್ತರ ನೀಡಿದ್ದಾರೆ.
ಬಿಟ್ ಕಾಯಿನ್ ಬಗ್ಗೆ 2016ರಿಂದಲೇ ಕೇಸು ಇದೆ, ಆಗ ರಾಜ್ಯದಲ್ಲಿದ್ದುದು ಕಾಂಗ್ರೆಸ್ ಸರ್ಕಾರ, ಅವರೇಕೆ ಆಗ ಕ್ರಮ ಕೈಗೊಳ್ಳಲಿಲ್ಲ, ಪುರಾವೆಗಳನ್ನು ಇಟ್ಟುಕೊಂಡು ಕಾಂಗ್ರೆಸ್ ನವರು ಮಾತನಾಡಬೇಕು, 2018ರಲ್ಲಿ ಶ್ರೀಕಿಯನ್ನು ಬಂಧಿಸಿ ಏಕೆ ಬಿಟ್ಟಿರಿ, ಇಬ್ಬರು ಇದ್ದಾರೆ ಪ್ರಕರಣದಲ್ಲಿ ಎಂದು ಹೇಳುತ್ತಿದ್ದಾರೆ, ಅವರು ಯಾರು, ಬಹಿರಂಗಪಡಿಸಿ ಎಂದು ಸವಾಲೆಸೆದರು.
ಕಾಂಗ್ರೆಸ್ ನವರು ಸಾವಿರ ಸುಳ್ಳುಗಳನ್ನು ಹೇಳಿ ಸತ್ಯ ಮಾಡಲು ಪ್ರಯತ್ನಿಸುತ್ತಿದ್ದಾರೆ. ಶ್ರೀಕಿ ಬಂಧಿಸಿದ್ದಾಗಲೇ ತನಿಖೆ ಮಾಡಬೇಕಿತ್ತು. ಪ್ರಕರಣ ದೊಡ್ಡದಾದಾಗ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ. ಹಗರಣ ಬಗ್ಗೆ ನಮ್ಮ ಸರ್ಕಾರ ತನಿಖೆ ನಡೆಸುತ್ತಿದೆ.ಇದನ್ನು ಬಯಲಿಗೆಳೆದಿದ್ದೇ ಬಿಜೆಪಿ ಸರ್ಕಾರ. ಕಾಂಗ್ರೆಸ್ ನವರು ದಾಖಲೆಯಿದ್ದರೆ ನಮಗೆ ಅಥವಾ ಇಡಿಗೆ ಕೊಡಲಿ, ಸುಮ್ಮನೆ ಆರೋಪ ಮಾಡುವುದಲ್ಲ, ಪುರಾವೆಗಳಿದ್ದರೆ ನೀಡಲಿ, ಇದರಲ್ಲಿ ಯಾರನ್ನೂ ಬಿಡುವುದಿಲ್ಲ, ಎಷ್ಟೇ ಪ್ರಭಾವಿಗಳಿದ್ದರೂ ತನಿಖೆಯನ್ನು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಮಾಡಲಾಗುತ್ತಿದೆ ಎಂದರು.
2020ರಲ್ಲಿ ಶ್ರೀಕಿಯನ್ನು ನಾವು ಬಂಧಿಸಿದ್ದು ಡ್ರಗ್ ಕೇಸಿನಲ್ಲಿ, ಆಮೇಲೆ ತನಿಖೆ ಮಾಡಿದಾಗ ಬಿಟ್ ಕಾಯಿನ್ ಹ್ಯಾಕಿಂಗ್ ಕೇಸು ಬಯಲಿಗೆ ಬಂತು. ಹಗರಣ ದೊಡ್ಡದು ಮಾಡಲು ಬಿಟ್ಟವರು ಕಾಂಗ್ರೆಸ್ ನವರೇ, ಈಗ ನಮ್ಮ ಮೇಲೆ ವೃಥಾ ಆರೋಪ ಮಾಡುತ್ತಿದ್ದಾರೆ, ಟ್ವಿಟ್ಟರ್ ಹ್ಯಾಂಡಲ್ ಆಧಾರದ ಮೇಲೆ ಕಾಂಗ್ರೆಸ್ ನಾಯಕ ಸುರ್ಜೆವಾಲಾ ಆರೋಪ ಮಾಡುವುದಾದರೆ ಅವರಿಗೆ ಶೋಭೆ ತರುವದ್ದದ್ದಲ್ಲ, ಇದು ಸಾಕ್ಷಿಯಾಗುವುದಿಲ್ಲ ಎಂದು ಕೂಡ ಹೇಳಿದರು.
ದಾಖಲೆಯಿದ್ದರೆ ಪೊಲೀಸರಿಗೆ ಅಥವಾ ಇಡಿಗೆ ನೀಡಲಿ: ಕಾಂಗ್ರೆಸ್ ನಾಯಕರಲ್ಲಿ ಹ್ಯಾಕಿಂಗ್ ಬಗ್ಗೆ ಕೇಸು ಬಗ್ಗೆ ಸಾಕ್ಷ್ಯಾಧಾರಗಳಿದ್ದರೆ ನಮ್ಮ ಪೊಲೀಸರಿಗೆ ಅಥವಾ ಜಾರಿ ನಿರ್ದೇಶನಾಲಯಕ್ಕೆ ನೀಡಲಿ, ನಾವು ನಿಷ್ಪಕ್ಷಪಾತವಾಗಿ ತನಿಖೆ ನಡೆಸುತ್ತೇವೆ. ಶ್ರೀಕಿ ಬಿಟ್ ಕಾಯಿನ್ ಅಕೌಂಟ್ ತನ್ನದು ಎಂದು ಹೇಳಿ ಎಕ್ಸ್ ಚೇಂಜ್ ಅಕೌಂಟ್ ತೋರಿಸಿದ್ದಾನೆ. ಹೀಗಾಗಿ ಸಿಕ್ಕಿರುವ ಹಣದ ಬಗ್ಗೆ ಗೊಂದಲವಾಗಿದೆಯಷ್ಟೆ ಎಂದು ಸಿಎಂ ಬೊಮ್ಮಾಯಿ ಮಾಧ್ಯಮಗಳ ಮುಂದೆ ಇಂದು ಉತ್ತರಿಸಿದ್ದಾರೆ.
ನಾವು ನ್ಯಾಯಯುತವಾಗಿ ತನಿಖೆ ಮಾಡಿಸುತ್ತಿದ್ದೇವೆ. ನಾವು ಆರೋಪಿಯನ್ನು ಹಿಡಿದು ಅದನ್ನು ಇಡಿ ಮತ್ತು ಸಿಬಿಐಗೆ ಶಿಫಾರಸು ಮಾಡಿದ್ದೇವೆ. ಸಿಬಿಐ ಮತ್ತು ಇಂಟರ್ಪೋಲ್ಗೆ ನೀಡಿದ್ದೇವೆ. ಇಡಿ ತನಿಖೆ ನಡೆಯುತ್ತಿದೆ. ನಾವು ಸಿಬಿಐಗೆ ಬೇಕಾದ ಮಾಹಿತಿ ನೀಡಿದ್ದೇವೆ. ಪ್ರಕರಣದಲ್ಲಿ ಭಾಗಿಯಾಗಿರುವ ಯಾರನ್ನೂ ನಾವು ಬಿಡುವುದಿಲ್ಲ ಎಂದು ಪುನರುಚ್ಛರಿಸಿದ್ದಾರೆ.
ಇನ್ನು ಕೇಸರಿ ಪಡೆ ಟ್ವಿಟ್ಟರ್ ನಲ್ಲಿ ಕಾಂಗ್ರೆಸ್ ನಾಯಕರಿಗೆ ಸುದೀರ್ಘ ಕೌಂಟರ್ ನೀಡಿದೆ.
Advertisement