Online Desk
ನವದೆಹಲಿ: ಕರ್ನಾಟಕದಲ್ಲಿ ವಿಪಕ್ಷ ಕಾಂಗ್ರೆಸ್ ಬಹುಕೋಟಿ ಬಿಟ್ ಕಾಯಿನ್ ಹಗರಣದ ಆರೋಪ ಮಾಡುತ್ತಿರುವ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ದೆಹಲಿಯಲ್ಲಿ ಕ್ರಿಪ್ಟೋ ಕರೆನ್ಸಿ ಕುರಿತು ಮಹತ್ವದ ಸಭೆ ನಡೆಸಿದ್ದಾರೆ.
ಕ್ರಿಪ್ಟೋ ಕರೆನ್ಸಿಗೆ ಭಾರತದಲ್ಲಿ ಸದ್ಯಕ್ಕೆ ಯಾವುದೇ ಮಾನ್ಯತೆ, ನಿಯಂತ್ರಣಗಳೂ ಇಲ್ಲ. ಆದ್ದರಿಂದ ಈ ರೀತಿಯ ಅನಿಯಂತ್ರಿತ ಮಾರುಕಟ್ಟೆಗಳು ಅಕ್ರಮ ಹಣ ವರ್ಗಾವಣೆ ಹಾಗೂ ಭಯೋತ್ಪಾದಕರಿಗೆ ಆರ್ಥಿಕ ನೆರವು ಸಿಗುವ ಮೂಲವಾಗುವ ಸಾಧ್ಯತೆ ಇರುವುದರಿಂದ ಈ ರೀತಿಯಾಗುವುದಕ್ಕೆ ಕಡಿವಾಣ ಕೇಂದ್ರ ಸರ್ಕಾರ ಕ್ರಿಪ್ಟೋ ಕರೆನ್ಸಿಗೆ ಒಂದಷ್ಟು ನಿಯಂತ್ರಣ ವಿಧಿಸುವ ಬಗ್ಗೆ ನ.13 ರಂದು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಚರ್ಚೆ ನಡೆದಿದೆ.
ಇದನ್ನೂ ಓದಿ: ಅಕ್ರಮಗಳ ಸರದಾರರಾದ ನೀವು ಬಿಟ್ ಕಾಯಿನ್ ಹಗರಣದಲ್ಲಿ ಪಾಲು ಪಡೆದಿರುವಿರೆ? ಎಷ್ಟು ದಿನ ಸಿದ್ದರಾಮಯ್ಯಗೆ ರಾಜಕೀಯ ದಾಳವಾಗುತ್ತೀರಿ?
ಕ್ರಿಪ್ಟೋ ಕರೆನ್ಸಿಗಳ ಮೂಲಕ ಅತಿಯಾದ ಲಾಭದ ಭರವಸೆಗಳನ್ನು ಹಾಗೂ ಪಾರದರ್ಶಕತೆ ಇಲ್ಲದ ವ್ಯವಹಾರದ ಜಾಹಿರಾತುಗಳ ಮೂಲಕ ಯುವಕರನ್ನು ದಾರಿ ತಪ್ಪಿಸುವ ಯತ್ನ ನಡೆಯುತ್ತಿದೆ ಎಂಬುದನ್ನೂ ಸಭೆ ಮನಗಂಡಿದ್ದು, ಮುಂದಿನ ದಿನಗಳಲ್ಲಿ ಕ್ರಿಪ್ಟೋ ಕರೆನ್ಸಿಗೆ ಸಂಬಂಧಿಸಿದಂತೆ ಕಠಿಣ ನಿಯಂತ್ರಕಗಳು ಜಾರಿಗೆ ಬರಲಿವೆ ಎಂಬ ಸೂಚನೆಯನ್ನು ರವಾನಿಸಿದೆ.
"ಇದು ಬೆಳವಣಿಗೆಯಾಗುತ್ತಿರುವ ತಂತ್ರಜ್ಞಾನ ಎಂಬ ವಾಸ್ತವವನ್ನು ಸರ್ಕಾರ ಗಮನಿಸಿದ್ದು, ಈ ವಿಷಯವಾಗಿ ನಿಕಟವಾಗಿ ಗಮನ ಹರಿಸಿ ಕ್ರಿಯಾತ್ಮಕ, ದಿಟ್ಟ ಕ್ರಮಗಳನ್ನು ಕೈಗೊಳ್ಳಲಾಗುವುದು, ಈ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸರ್ಕಾರ ಕೈಗೊಳ್ಳುವ ಕ್ರಮಗಳು ಪ್ರಗತಿಪರ ಹಾಗೂ ಮುಂದುವರಿದ ದೃಷ್ಟಿಯಿಂದ ಕೂಡಿರುತ್ತದೆ" ಎಂದು ಮೂಲಗಳು ಸಭೆಯಲ್ಲಿ ನಡೆದ ಚರ್ಚೆಯ ಬಗ್ಗೆ ಮಾಹಿತಿ ನೀಡಿವೆ. ಕ್ರಿಪ್ಟೋ ಕರೆನ್ಸಿಯ ಈ ವಿಷಯ ಗಡಿಯಾಚೆಗೂ ಹರಡಿಕೊಂಡಿರುವುದರಿಂದ ನಿಯಂತ್ರಣಗಳನ್ನು ರೂಪಿಸುವುದಕ್ಕೆ ಪಾಲುದಾರಿಕೆಗಳು ಮತ್ತು ಸಾಮೂಹಿಕ ತಂತ್ರಗಳು ಅಗತ್ಯ ಎಂಬ ಅಂಶಗಳನ್ನು ಪ್ರಧಾನಿ ನೇತೃತ್ವದ ಸಭೆ ಮನಗಂಡಿದೆ.
ಇದನ್ನೂ ಓದಿ: ಬಿಟ್ ಕಾಯಿನ್ ಪ್ರಕರಣ: ವಿದೇಶಿ ತನಿಖಾ ಸಂಸ್ಥೆಗಳಿಂದ ಕೋರಿಕೆ ಬಂದಿಲ್ಲ- ಕಮಲ್ ಪಂತ್ ಸ್ಪಷ್ಟನೆ
ಆರ್ ಬಿಐ ಹಾಗೂ ಹಣಕಾಸು ಸಚಿವಾಲಯ ಕ್ರಿಪ್ಟೋ ಕರೆನ್ಸಿಯ ಬಗ್ಗೆ ಸಾಕಷ್ಟು ಅಧ್ಯಯನ, ಚಟುವಟಿಕೆಗಳನ್ನು ನಡೆಸಿದ್ದು, ದೇಶ, ಜಾಗತಿಕ ಮಟ್ಟದಲ್ಲಿರುವ ತಜ್ಞರು ಹಾಗೂ ಜಾಗತಿಕ ಮಟ್ಟದಲ್ಲಿ ಕ್ರಿಪ್ಟೋ ಕರೆನ್ಸಿಗೆ ಸಂಬಂಧಿಸಿದ ಉದಾಹರಣೆಗಳು, ಅತ್ಯುತ್ತಮ ಅನುಷ್ಠಾನಗಳನ್ನು ಪರಿಗಣಿಸಿದ್ದು ಈ ಅಂಶಗಳನ್ನೂ ಸಭೆಯಲ್ಲಿ ಚರ್ಚಿಸಲಾಗಿದೆ ಎಂದೂ ಮೂಲಗಳು ತಿಳಿಸಿವೆ.
ಆರ್ ಬಿಐ ಕ್ರಿಪ್ಟೋ ಕರೆನ್ಸಿಗಳ ವಿರುದ್ಧ ತನ್ನ ಸ್ಪಷ್ಟ ನಿಲುವನ್ನು ಪ್ರಕಟಿಸಿದ್ದು, ದೇಶದ ಮ್ಯಾಕ್ರೋ ಎಕಾನಾಮಿಕ್ ಹಾಗೂ ದೇಶದ ಆರ್ಥಿಕ ಸ್ಥಿರತೆಗೆ ಇವು ಮಾರಕವಾಗಿದ್ದು, ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡುತ್ತಿರುವ ಹೂಡಿಕೆದಾರರ ಸಂಖ್ಯೆ ಹಾಗೂ ಹೇಳಲಾಗುತ್ತಿರುವ ಮಾರುಕಟ್ಟೆಯ ಮೌಲ್ಯವನ್ನೂ ಆರ್ ಬಿಐ ಶಂಕೆ ವ್ಯಕ್ತಪಡಿಸಿದೆ.
ಇದನ್ನೂ ಓದಿ: ಬಿಟ್ ಕಾಯಿನ್ ಹಗರಣ: ಬಿಜೆಪಿ, ಕಾಂಗ್ರೆಸ್ ಪರಸ್ಪರ ಕೆಸರೆರಚಾಟ
ಆರ್ ಬಿಐ ಗೌರ್ನರ್ ಶಕ್ತಿಕಾಂತ್ ದಾಸ್ ಅವರು ಕ್ರಿಪ್ಟೋ ಕರೆನ್ಸಿಗಳಿಗೆ ಅವಕಾಶ ನೀಡುವುದರ ವಿರುದ್ಧ ತಮ್ಮ ನಿಲುವನ್ನು ಮತ್ತೊಮ್ಮೆ ನ.10 ರಂದು ಸ್ಪಷ್ಟಪಡಿಸಿ, ಆರ್ ಬಿಐ ನಿಂದ ಕ್ರಿಪ್ಟೋಕರೆನ್ಸಿಗಳು ಅನಿಯಂತ್ರಿತವಾಗಿದ್ದು, ಯಾವುದೇ ಅರ್ಥಿಕ ವ್ಯವಸ್ಥೆಗೆ ಅವು ಗಂಭೀರ ಅಪಾಯ ಉಂಟುಮಾಡಬಲ್ಲದ್ದಾಗಿದೆ ಎಂದು ಹೇಳಿದ್ದರು.