ದಾವಣಗೆರೆ: ಜೆಡಿಎಸ್ ಪಕ್ಷದ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ಹೋಗುವುದಾಗಿ ಬಿಜೆಪಿ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹೇಳಿದ್ದು, ಈ ಹೇಳಿಕೆ ಸಾಕಷ್ಟು ಕುತೂಹಲಕ್ಕೆ ದಾರಿ ಮಾಡಿಕೊಟ್ಟಿದೆ.
ಚನ್ನಗಿರಿ ತಾ.ಸಂತೇ ಬೆನ್ನೂರಿನಲ್ಲಿ ವಿಧಾನ ಪರಿಷತ್ ಚುನಾವಣೆ ಪ್ರಚಾರ ಸಭೆಗೆ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನ ಪರಿಷತ್ ಚುನಾವಣೆಯಲ್ಲಿ ಯಾವ್ಯಾವ ಕ್ಷೇತ್ರದಲ್ಲಿ ಜೆಡಿಎಸ್ ನವರು ಅಭ್ಯರ್ಥಿಗಳನ್ನು ಹಾಕುತ್ತಾರೋ ನೋಡಿಕೊಂಡು, ನಿರ್ಧಾರ ಮಾಡುತ್ತೇವೆ. ಜೆಡಿಎಸ್ ಪಕ್ಷದವರು ಅಭ್ಯರ್ಥಿಗಳನ್ನು ಹಾಕಿದ ನಂತರ ಚರ್ಚೆ ನಡೆಸಲಾಗುವುದು ಎಂದು ಹೇಳಿದ್ದಾರೆ.
ವಿಧಾನಪರಿಷತ್ ಚುನಾವಣೆಯಲ್ಲಿ ಪರಸ್ಪರ ಸಹಕಾರ ಕೊಡಿ ಅಂತಾ ಹೇಳುತ್ತೇವೆ. ಈ ಬಗ್ಗೆ ಜೆಡಿಎಸ್ ಜೊತೆಗೆ ಚರ್ಚೆ ಮಾಡುತ್ತೇವೆಂದು ಎಂದು ತಿಳಿಸಿದರು.
ಈಗಾಗಲೇ ವಿಧಾನಪರಿಷತ್ ಚುನಾವಣೆಗೆ 2ನೇ ಸುತ್ತಿನ ಪ್ರಚಾರ ಶುರುವಾಗಿದೆ. ರಾಜ್ಯದಲ್ಲಿ ಕೇವಲ 20 ಸೀಟುಗಳಿಗೆ ನಿಶ್ಚಿತವಾಗಿ ಸ್ಪರ್ಧೆ ಮಾಡುತ್ತೇವೆ. ಈ ಪೈಕಿ 15ಕ್ಕೆ ಕ್ಷೇತ್ರಗಳಲ್ಲಂತೂ ಗೆದ್ದೇ ಗೆಲ್ಲುತ್ತೇವೆ. ವಿಧಾನಸಭೆಯಲ್ಲಿ ಬಹುಮತ ಇದೆ. ವಿಧಾನಪರಿಷತ್ ನಲ್ಲೂ ನಮ್ಮ ಪಕ್ಷಕ್ಕೆ ಬಹುಮತ ಸೆಗಲಿ ಎಂಬುದು ನಮ್ಮೆಲ್ಲರ ಅಪೇಕ್ಷೆ ಎಂದರು.
ರಾಜ್ಯಾದ್ಯಂತ ಬಿಜೆಪಿ ಪರ ವಾತಾವರಣ ಇದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಪ್ರವಾಸ ಶುರು ಮಾಡಿದ್ದೇವೆ. ಶಾಸಕರೂ ಸಹ ನಮ್ಮವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸ್ಥಲೀಯ ಸಂಸ್ಥೆಗಳಲ್ಲೂ ನಮ್ಮ ಪಕ್ಷದ ಜನ ಪ್ರತಿನಿಧಿಗಳೇ ಹೆಚ್ಚಾಗಿರುವುದು ಕೂಡ ನಮ್ಮ ಪಕ್ಷದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದು ಹೇಳಿದರು.
ದೇಶದಲ್ಲಿ ಕಾಂಗ್ರೆಸ್ ಪಕ್ಷ ದಯನೀಯ ಸ್ಥಿತಿಯಲ್ಲಿದೆ. ರಾಜ್ಯದಲ್ಲೂ ಕಾಂಗ್ರೆಸ್ ಪಕ್ಷ ಸ್ವಲ್ಪ ಉಸಿರಾಡುತ್ತಿದೆ. ಈ ಉಸಿರು ನಿಲ್ಲಿಸಬೇಕಾದರೆ ಬಿಜೆಪಿಯನ್ನು ಬೆಂಬಲಿಸಿ. ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಲಖನ್ ಜಾರಕಿಹೊಳಿ ಜೊತೆದೆ ಮಾತನಾಡಿ, ಅವರ ಮನವೊಲಿಸಿ ನಾಮಪತ್ರ ಹಿಂಪಡೆಯುವಂತೆ ಮನವಿ ಮಾಡಿಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.
Advertisement