ಪರಿಷತ್ ಗೆ ವಿಪಕ್ಷ ನಾಯಕನ ಆಯ್ಕೆ: 'ಕೈ' ಕೊಟ್ಟ ಇಬ್ರಾಹಿಂ; ಬಿ.ಕೆ ಹರಿಪ್ರಸಾದ್ 'ಕಾಂಗ್ರೆಸ್ 'ಹಾಟ್ ಫೇವರಿಟ್!

ಜೆಡಿಎಸ್ ಕದ ತಟ್ಟುತ್ತಿರುವ ಸಿಎಂ ಇಬ್ರಾಹಿಂ ಈಗಾಗಲೇ ಕಾಂಗ್ರೆಸ್ ನಿಂದ ಒಂದು ಕಾಲು ಹೊರಗಿಟ್ಟಿದ್ದಾರೆ. ಹೀಗಾಗಿ ಜೆಡಿಎಸ್ ಜೊತೆಗೂಡಿ ಅವರು ಪರಿಷತ್ ವಿಪಕ್ಷ ನಾಯಕನ ಸ್ಥಾನಕ್ಕಾಗಿ ಕಣಕ್ಕಿಳಿಯುವ ಸಾಧ್ಯತೆಯಿದೆ.
ಬಿ.ಕೆ ಹರಿಪ್ರಸಾದ್
ಬಿ.ಕೆ ಹರಿಪ್ರಸಾದ್

ಬೆಂಗಳೂರು: ಜೆಡಿಎಸ್ ಕದ ತಟ್ಟುತ್ತಿರುವ ಸಿಎಂ ಇಬ್ರಾಹಿಂ ಈಗಾಗಲೇ ಕಾಂಗ್ರೆಸ್ ನಿಂದ ಒಂದು ಕಾಲು ಹೊರಗಿಟ್ಟಿದ್ದಾರೆ. ಹೀಗಾಗಿ ಜೆಡಿಎಸ್ ಜೊತೆಗೂಡಿ ಅವರು ಪರಿಷತ್ ವಿಪಕ್ಷ ನಾಯಕನ ಸ್ಥಾನಕ್ಕಾಗಿ ಕಣಕ್ಕಿಳಿಯುವ ಸಾಧ್ಯತೆಯಿದೆ.

ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸುರ್ಜೆವಾಲಾ ಅವರು ಬೆನ್ಸನ್ ಟೌನ್ ನಲ್ಲಿರುವ ಸಿಎಂ ಇಬ್ರಾಹಿಂ ಅವರ ನಿವಾಸಕ್ಕೆ ಖುದ್ದು ಭೇಟಿ ನೀಡಿ ಪಕ್ಷ ತೊರೆಯದಂತೆ ಮನವಿ ಮಾಡಿದ್ದಾರೆ, ಆದರೆ ಇಬ್ರಾಹಿಂ ಅವರ ಮನವಿಗೆ ಕ್ಯಾರೆ ಎಂದಿಲ್ಲ.

ಉತ್ತಮ ವಾಗ್ಮಿ ಎಂದೇ ಗುರುತಿಸಿಕೊಂಡಿರುವ ಸಿಎಂ ಇಬ್ರಾಹಿಂ, ದಿವಂಗತ ಆರ್.ಗುಂಡೂರಾವ್ ಅವರು ಮಖ್ಯಮಂತ್ರಿ ಆಗಿದ್ದ ವೇಳೆ ಸಚಿವರಾಗಿದ್ದರು.  ಅದಾದ ನಂತರ ಕಾಂಗ್ರೆಸ್ ಗೆ ಗುಡ್ ಬೈ ಹೇಳಿದ ಇಬ್ರಾಹಿಂ ಜೆಡಿಎಸ್ ಸೇರಿ ದೇವೇಗೌಡರು ಪ್ರಧಾನಿಯಾದಾಗ ಕೇಂದ್ರ ಸಚಿವರಾಗಿದ್ದರು,  2008 ರಲ್ಲಿ ಕಾಂಗ್ರೆಸ್ ಗೆ ಮರಳಿದರು.

ಇಬ್ರಾಹಿಂ ಈಗಾಗಲೇ ಹೆಚ್ಚು ಕಮ್ಮಿ ಕಾಂಗ್ರೆಸ್ ತೊರೆದಿದ್ದಾರೆ, ಎಸ್ ಆರ್ ಪಾಟೀಲ್ ಅವರಿಗೆ ಟಿಕೆಟ್ ನಿರಾಕರಿಸಲಾಗಿದೆ, ನಾಸೀರ್ ಅಹ್ಮದ್, ಆರ್ ಬಿ ತಿಮ್ಮಾಪುರ್, ಬಿ.ಕೆ ಹರಿಪ್ರಸಾದ್ ಹಾಗೂ ಎಲ್ಲಂ ವೀರಭದ್ರಪ್ಪ ಅವರಿಗೆ ಟಿಕೆಟ್ ನೀಡಲಾಗಿದೆ.

ದಶಕಗಳಿಂದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿರುವ ಹರಿಪ್ರಸಾದ್ ಅವರಿಗೆ ರಾಜ್ಯ ಸಭೆಯಲ್ಲಿಯೂ ಅನುಭವವಿದೆ,  2004-2014ರವರೆಗೆ  ಯುಪಿಎ ಸರ್ಕಾರದ ಅವಧಿಯಲ್ಲಿ ಅವರು ಯಾವುದೇ ಸಚಿವ ಸ್ಥಾನವನ್ನು ಅಲಂಕರಿಸಿರಲಿಲ್ಲ.ಬದಲಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರು. 30 ವರ್ಷಗಳ ಹಿಂದೆ ಕೊಳಗೇರಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾಗಿ ನೇಮಕವಾಗಿದ್ದೇ ಕೊನೆಯ ಹುದ್ದೆ.

ಇನ್ನೂ ಮೂರು ಅವಧಿಗೆ ಸಚಿವರಾಗಿದ್ದ ಆರ್.ಬಿ.ತಿಮ್ಮಾಪುರ್ ಅವರು ನಿರ್ಧಾರವನ್ನು ಪಕ್ಷದ ನಾಯಕತ್ವಕ್ಕೆ ಬಿಟ್ಟಿದ್ದಾರೆ. ಅಲ್ಲಂ ವೀರಭದ್ರಪ್ಪ ಅವರು ಈ ಹಿಂದೆ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದರು ಮತ್ತು ಹಿರಿತನವನ್ನು ಹೊಂದಿದ್ದಾರೆ . 80 ರ ದಶಕದ ಉತ್ತರಾರ್ಧದಲ್ಲಿ ಎಸ್ ಬಂಗಾರಪ್ಪ ಸಂಪುಟದಲ್ಲಿ ನಾಸೀರ್ ಅಹಮದ್ ಸಚಿವರಾಗಿ ಕೆಲಸ ನಿರ್ವಹಿಸಿದ್ದರು

ಪಕ್ಷವನ್ನು ಸಮರ್ಥವಾಗಿ ಮುನ್ನಡೆಸುವ ಸಾಮರ್ಥ್ಯ ಇದ್ದವರನ್ನು ಮಾತ್ರ ಪರಿಗಣಿಸಲಾಗುವುದು ಎಂದು ಪಕ್ಷ ಸ್ಪಷ್ಟ ಸಂದೇಶ ರವಾನಿಸಿದೆ. ಈ ಪಟ್ಟಿಯಲ್ಲಿ ಬಿಕೆ ಹರಿಪ್ರಸಾದ್ ಕೂಡ ಸೇರಿದ್ದಾರೆ. ರಾಜ್ಯದ 70 ವಿಧಾನಸಭಾ ಕ್ಷೇತ್ರಗಳಲ್ಲಿ ರಾಜಕೀಯ ಬಲ ಹೊಂದಿರುವ ಪ್ರಭಾವಿ ಈಡಿಗ ಸಮುದಾಯಕ್ಕೆ ಸೇರಿದವರಾಗಿದ್ದಾರೆ.  

ಇತರ ಹಿಂದುಳಿದ ಜಾತಿಗಳು ಕಾಂಗ್ರೆಸ್‌ನಲ್ಲಿ ಕುರುಬರ ಪ್ರಾಬಲ್ಯದ ಬಗ್ಗೆ ದೂರುತ್ತಿವೆ ಹೀಗಾಗಿ, ಹಿಂದುಳಿದ ವರ್ಗದ ನಾಯಕನನ್ನು ಆಯ್ಕೆ ಮಾಡುವುದರಿಂದ ಸಮುದಾಯದ ಮೇಲೆ ಪಕ್ಷವು ತನ್ನ ಹಿಡಿತವನ್ನು ಬಲಪಡಿಸಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com