ಬೆಂಗಳೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ಆಯ್ದ ಕ್ಷೇತ್ರಗಳಿಂದ ಸ್ಪರ್ಧಿಸುವ ತಂತ್ರದೊಂದಿಗೆ ಆಡಳಿತಾರೂಢ ಬಿಜೆಪಿ ಮೇಲ್ಮನೆಯಲ್ಲಿ ಬಹುಮತವನ್ನು ಉಳಿಸಿಕೊಳ್ಳುವ ಗುರಿಯನ್ನು ಹೊಂದಿದೆ.
ರಮೇಶ್ ಮತ್ತು ಬಾಲಚಂದ್ರ ಅವರ ಕಿರಿಯ ಸಹೋದರ ಲಖನ್ ಜಾರಕಿಹೊಳಿ ಅವರಿಗೆ ಬೆಳಗಾವಿ ದ್ವಿ ಸ್ಥಾನ ಕ್ಷೇತ್ರದಿಂದ ಸ್ವತಂತ್ರವಾಗಿ ಸ್ಪರ್ಧಿಸಲು ಅವಕಾಶ ನೀಡುವುದು ಬಿಜೆಪಿಯ ದೊಡ್ಡ ತಂತ್ರದ ಭಾಗವಾಗಿದೆ ಎಂದು ಪಕ್ಷದ ಮೂಲಗಳು ಹೇಳಿವೆ. ಪಕ್ಷದ ಅಧಿಕೃತ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಗೆಲುವು ಖಚಿತವಾಗಿದ್ದು, ಲಖನ್ ಜಾರಕಿಹೊಳಿ ಗೆದ್ದರೆ ಬಿಜೆಪಿಗೆ ಬೋನಸ್ ಆಗಲಿದೆ ಎಂದು ಮೂಲಗಳು ತಿಳಿಸಿವೆ.
ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಅವರ ಪುತ್ರ ಬಿವೈ ವಿಜಯೇಂದ್ರ ಕೂಡ ಮಂಡ್ಯ, ಮೈಸೂರು-ಚಾಮರಾಜನಗರ ಸೇರಿದಂತೆ ಕೆಲವು ಆಯ್ದ ಕ್ಷೇತ್ರಗಳಲ್ಲಿ ತಮ್ಮ ನಿಷ್ಠಾವಂತರ ಗೆಲುವಿಗಾಗಿ ಯೋಜನೆ ರೂಪಿಸಿದ್ದಾರೆ.
ಚುನಾವಣೆ ನಡೆಯಲಿರುವ 25 ಸ್ಥಾನಗಳ ಪೈಕಿ 14 ಸ್ಥಾನಗಳನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ಶ್ರಮಿಸುತ್ತಿದೆ.
ಜೆಡಿಎಸ್ ತನ್ನ ನಾಲ್ಕು ಸ್ಥಾನಗಳನ್ನು ಉಳಿಸಿಕೊಳ್ಳಲು ಉತ್ಸುಕವಾಗಿದೆ, ಆದರೆ ಆರು ಸ್ಥಾನಗಳನ್ನು ಹೊಂದಿರುವ ಬಿಜೆಪಿ ಮೇಲ್ಮನೆಯಲ್ಲಿ ತನ್ನ ಸಂಖ್ಯೆಯನ್ನು ಹೆಚ್ಚಿಸಲು ಬಯಸಿದೆ. 75 ಸದಸ್ಯ ಬಲದ ಮೇಲ್ಮನೆಯಲ್ಲಿ ಬಿಜೆಪಿ 32, ಕಾಂಗ್ರೆಸ್ 29, ಜೆಡಿಎಸ್ನ 13 ಮತ್ತು ಒಬ್ಬ ಸ್ವತಂತ್ರ ಸದಸ್ಯರಿದ್ದಾರೆ.
ನಾವು ಸ್ಪರ್ಧಿಸುತ್ತಿರುವ 20 ಸ್ಥಾನಗಳಲ್ಲಿ ಮೂರನೇ ಎರಡರಷ್ಟು ಗೆಲ್ಲುತ್ತೇವೆ ಮತ್ತು ಪರಿಷತ್ತಿನಲ್ಲಿ ಬಹುಮತವನ್ನು ಉಳಿಸಿಕೊಳ್ಳುತ್ತೇವೆ ಎಂದು ಸಿಎಂ ಬೊಮ್ಮಾಯಿ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.
ಬಿಜೆಪಿ ತನ್ನ ಅಭ್ಯರ್ಥಿಗಳ ಅರ್ಹತೆಯ ಮೇಲೆ ಟಿಕೆಟ್ ನೀಡಿದ್ದರೇ, ಕಾಂಗ್ರೆಸ್ ಮತ್ತು ಜೆಡಿಎಸ್ ತಮ್ಮ ಸಂಬಂಧಿಕರು ಅಥವಾ ತಮ್ಮ ನಾಯಕರ ಆಪ್ತರಿಗೆ ಟಿಕೆಟ್ ನೀಡಿವೆ ಎಂದು ಬಿಜೆಪಿ ಮುಖಂಡರೊಬ್ಬರು ಲೇವಡಿ ಮಾಡಿದ್ದಾರೆ.
ಈ ಪರಿಷತ್ ಚುನಾವಣೆಯಲ್ಲಿ ಬಹುಕತೇಕ ಅಭ್ಯರ್ಥಿಗಳು ಹಣ ಬಲದ ಮೂಲಕ ಗೆಲ್ಲಲು ಮುಂದಾಗಿದ್ದಾರೆ, ಗೆಲುವಿಗಾಗಿ ಅಪಾರ ಪ್ರಮಾಣದಲ್ಲಿ ಖರ್ಚು ಮಾಡುತ್ತಿದ್ದಾರೆ , ಇದರಿಂದ ಉತ್ತಮ ಕೆಲಸ ಮಾಡಿ ಜಯ ಸಾಧಿಸಲು ಶ್ರಮಿಸುತ್ತಿರುವವರಿಗೆ ಆತಂಕ ಎದುರಾಗಿದೆ ಎಂದು ಹೇಳಲಾಗುತ್ತಿದೆ.
Advertisement