ಸಿಂದಗಿ-ಹಾನಗಲ್ ಉಪಚುನಾವಣೆ: ರಮೇಶ್ ಭೂಸನೂರ್- ಶಿವರಾಜ ಸಜ್ಜನರ್ ನಾಮಪತ್ರ ಸಲ್ಲಿಕೆ

ಅಕ್ಟೋಬರ್ 30 ರಂದು ನಡೆಯುವ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳಾಗಿ ಸಿಂದಗಿಯಿಂದ ರಮೇಶ್ ಭೂಸನೂರ್ ಮತ್ತು ಹಾನಗಲ್ ನಿಂದ ಶಿವರಾಜ ಸಜ್ಜನರ್ ನಾಮಪತ್ರ ಸಲ್ಲಿಸಿದ್ದಾರೆ. ಉಮೇದುವಾರಿಕೆ ಸಲ್ಲಿಸಲು ನಿನ್ನೆ ಕೊನೆಯ ದಿನವಾಗಿತ್ತು.
ಶಿವರಾಜ್ ಸಜ್ಜನರ್ ನಾಮಪತ್ರ ಸಲ್ಲಿಕೆ
ಶಿವರಾಜ್ ಸಜ್ಜನರ್ ನಾಮಪತ್ರ ಸಲ್ಲಿಕೆ
Updated on

ವಿಜಯಪುರ/ಹುಬ್ಬಳ್ಳಿ: ಅಕ್ಟೋಬರ್ 30 ರಂದು ನಡೆಯುವ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳಾಗಿ ಸಿಂದಗಿಯಿಂದ ರಮೇಶ್ ಭೂಸನೂರ್ ಮತ್ತು ಹಾನಗಲ್ ನಿಂದ ಶಿವರಾಜ ಸಜ್ಜನರ್ ನಾಮಪತ್ರ ಸಲ್ಲಿಸಿದ್ದಾರೆ. ಉಮೇದುವಾರಿಕೆ ಸಲ್ಲಿಸಲು ನಿನ್ನೆ ಕೊನೆಯ ದಿನವಾಗಿತ್ತು.

ಸಿಂದಗಿ ವಿಧಾನಸಭಾ ಉಪ ಚುನಾವಣೆ ಅಭ್ಯರ್ಥಿ ರಮೇಶ ಭೂಸನೂರ ಅವರು ಸಚಿವರಾದ ವಿ.ಸೋಮಣ್ಣ, ಶಶಿಕಲಾ ಜೊಲ್ಲೆ, ಭೈರತಿ ಬಸವರಾಜ್, ಸಿ.ಸಿ.ಪಾಟೀಲ, ಸಂಸದ ರಮೇಶ ಜಿಗಜಿಣಗಿ, ಶಾಸಕ ಬಸನಗೌಡ ಪಾಟೀಲ ಯತ್ನಾಳ, ಬಿಜೆಪಿ ಜಿಲ್ಲಾ ಘಟಕ  ಅಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ ಸೇರಿದಂತೆ ವಿವಿಧ ನಾಯಕರೊಂದಿಗೆ ಚುನಾವಣಾ ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು.

ಮುಂದಿನ ವಿಧಾನಸಭೆ ಚುನಾವಣೆಗೂ ಮೊದಲು ಕಾಂಗ್ರೆಸ್ ಎರಡು ಹೋಳಾಗಲಿದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಭವಿಷ್ಯ ನುಡಿದರು. ಸಿಂದಗಿ ವಿಧಾನಸಭೆ ಉಪಚುನಾವಣೆ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಅವರು ಶುಕ್ರವಾರ ನಾಮಪತ್ರ ಸಲ್ಲಿಸಿದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಈಶ್ವರಪ್ಪ ಮಾತನಾಡಿದರು. ಈವರೆಗೆ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ನಾನು ಸಿಎಂ ನಾನು ಸಿಎಂ ಎನ್ನುತ್ತಿದ್ದರು. ಒಬ್ಬರು ಎಡಕ್ಕೆ ಎಳೆದರೆ, ಇನ್ನೊಬ್ಬರು ಬಲಕ್ಕೆ ಎಳೆಯುತ್ತಾರೆ. ಇದೀಗ ಅನಿವಾರ್ಯವಾಗಿ ಒಂದಾಗಿದ್ದಾರೆ ಎಂದರು. ಬಿಜೆಪಿ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಹಾನಗಲ್, ಸಿಂದಗಿ ಉಪ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗಳನ್ನು ಜನ ಗೆಲ್ಲಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು.

ಐಟಿ ದಾಳಿ ನಡೆದಾಗಲೆಲ್ಲಾ ಕೇವಲ ಕಾಂಗ್ರೆಸ್‌ನವರ ಮೇಲೆ ಮಾತ್ರ ಐಟಿ ದಾಳಿ ಎಂದು ಹೇಳುತ್ತಿದ್ದರು. ಈಗ ಯಾಕೆ ಕಾಂಗ್ರೆಸ್‌ನವರು ಬಾಯಿ ಬಿಡ್ತಿಲ್ಲ. ಯಾರ ಮೇಲೆ ಅನುಮಾನ ಇದೆ ಅವರ ಮೇಲೆ ಐಟಿ ದಾಳಿ ಮಾಡುತ್ತಾರೆ ಎಂದು ಕಾಂಗ್ರೆಸ್‌ನವರು ಹೇಳಬೇಕಲ್ವಾ..? ತಪ್ಪಿತಸ್ಥರು ಯಾರಿದ್ದಾರೆ ಅವರ ಮೇಲೆ ಕ್ರಮ ಕೈಗೊಳ್ತಾರೆ. ಇಲ್ಲಂದ್ರೆ ಇಲ್ಲ.
ಕಾಂಗ್ರೆಸ್‌ನವರ ಮೇಲೆ ಗುರಿ ಇಟ್ಟು ಐಟಿ ದಾಳಿ ಮಾಡ್ತಿದ್ರು ಎಂದು ನಾವು ಹೇಳ್ತಿದ್ದು ತಪ್ಪು ಅಂತಾ ಹೇಳಿ ರಾಜ್ಯದ ಜನರ ಮುಂದೆ ಕಾಂಗ್ರೆಸ್‌ನವರು ಕ್ಷಮೆ‌ ಕೇಳಬೇಕು ಎಂದು ಆಗ್ರಹಿಸಿದರು.

ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ ಸವದಿ, ಸಿಂದಗಿ ಕ್ಷೇತ್ರದಲ್ಲಿ ಬಹಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಗೆಲ್ಲಿಸಲು ಕಾರ್ಯಸೂಚಿ ಮಾಡಿಕೊಂಡಿದ್ದೇವೆ. ಬೂತ್‌ಮಟ್ಟದಲ್ಲಿ ಮನೆ ಮನೆಗೆ ತೆರಳಿ ಕೆಲಸ ಮಾಡಲು ತಂಡಗಳು ಸಜ್ಜಾಗಿವೆ. ಏಳು ತಂಡಗಳನ್ನು ಮಾಡಲಾಗಿದೆ ಎಂದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಸಹ ಎರಡು ದಿನ ಪ್ರಚಾರ ನಡೆಸಲಿದ್ದಾರೆ ಎಂದು ತಿಳಿಸಿದರು.

ಬಿಜೆಪಿ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಹಾನಗಲ್, ಸಿಂದಗಿ ಉಪ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗಳನ್ನು ಜನ ಗೆಲ್ಲಿಸುತ್ತಾರೆ ಎಂಬ ವಿಶ್ವಾಸವಿದೆ., ಆದಾಯ ತೆರಿಗೆ ಸ್ವಾಯತ್ತ ಸಂಸ್ಥೆ, ದಾಳಿಗೂ ಕೇಂದ್ರ ಸರ್ಕಾರಕ್ಕೂ ಸಂಬಂಧವಿಲ್ಲ. ವಿರೋಧ ಪಕ್ಷದವರು ವಿನಾಕಾರಣ ಆರೋಪ ಮಾಡುತ್ತಿದ್ದಾರೆ  ಎಂದು ಸಚಿವ ಗೋವಿಂದ ಕಾರಜೋಳ ತಿಳಿಸಿದರು.

ಇದೇ ವೇಳೆ ಹಾನಗಲ್ ನಲ್ಲಿ ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ್ ನೂರಾರು ಬೆಂಬಲಿಗರೊಂದಿಗೆ ತೆರಳಿ ನಾಮಪತ್ರ ಸಲ್ಲಿಸಿದರು. ಇದೇ ವೇಳೆ ಮಾಧ್ಯಮಗಳೊಂದಿಗೆ ಮಾತಾನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕ್ಷೇತ್ರಕ್ಕೆ ಸಿಎಂ ಉದಾಸಿ ಅವರ ಕೊಡುಗೆ ಅಪಾರವಾಗಿದೆ. ಹಾನಗಲ್ ಕ್ಷೇತ್ರವನ್ನು ಅಭಿವೃದ್ಧಿ ಪಥದಲ್ಲಿ ನಡೆಸಿದ್ದಾರೆ. ಕೊನೆಯ 2 -3 ವರ್ಷಗಳಲ್ಲಿ ಯಡಿಯೂರಪ್ಪ ಮತ್ತು ಬೊಮ್ಮಾಯಿ ಉತ್ತಮ ಆಡಳಿತ ನೀಡಿದ್ದಾರೆ ಎಂದು ಹೇಳಿದರು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com