ಬೆಂಗಳೂರು: ಬಿ.ಎಸ್.ಯಡಿಯೂರಪ್ಪ ಬಗ್ಗೆ ಕಾಂಗ್ರೆಸ್ನವರು ಮೊಸಳೆ ಕಣ್ಣೀರು ಹರಿಸುವ ಅಗತ್ಯ ಇಲ್ಲ. ಮೊದಲು ನಿಮ್ಮ ಪಕ್ಷದಲ್ಲಿರುವ ಹಿರಿಯರನ್ನು ಗೌರವಯುತವಾಗಿ ನಡೆಸಿಕೊಳ್ಳಿ ಎಂದು ರಾಜ್ಯ ಬಿಜೆಪಿ ಸೋಮವಾರ ಕಿಡಿಕಾರಿದೆ.
ಬಿ.ಎಸ್. ಯಡಿಯೂರಪ್ಪ ಅವರಿಗೆ ಬಿಜೆಪಿ ಮೋಸ ಮಾಡಿದೆ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆ ಕುರಿತು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಬಿಜೆಪಿ ಕಿಡಿಕಾರಿದೆ.
ಯಡಿಯೂರಪ್ಪ ಅವರನ್ನು ಬಿಜೆಪಿ ಸದಾ ಮಲತಾಯಿ ಮಗನಂತೆ ನಡೆಸಿಕೊಂಡಿದೆ. ಅಧಿಕಾರದಲ್ಲಿದ್ದಾಗಲೂ ಬಿಜೆಪಿ ಕಾಡಿತ್ತು, ಅಧಿಕಾರ ಕಳೆದುಕೊಂಡ ಮೇಲೂ ಕಾಡುತ್ತಿದೆ. ಮುಂದಿನ ಚುನಾವಣೆಯೊಳಗೆ ಬಿಎಸ್ವೂ ಅವರನ್ನು ಸಂಪೂರ್ಣ ಮುಗಿಸುವ 'ಟಾರ್ಗೆಟ್ ಬಿಎಸ್ವೈ' ಯೋಜನೆಯನ್ನು ಬಿಜೆಪಿ ಹಮ್ಮಿಕೊಂಡಿದೆ. ಪಕ್ಷ ಕಟ್ಟಿದವರನ್ನು ಮುಗಿಸುವುದು ಬಿಜೆಪಿ ಹೊಸ ಟ್ರೆಂಡ್" ಎಂದು ವ್ಯಂಗ್ಯವಾಡಿತ್ತು.
ಇದಕ್ಕೆ ಟ್ವೀಟ್ ಮಾಡುವ ಮೂಲಕ ಕಿಡಿಕಾರಿರುವ ಬಿಜೆಪಿ, ಯಡಿಯೂರಪ್ಪ ಅವರ ಬಗ್ಗೆ ಕಾಂಗ್ರೆಸ್ ಮೊಸಳೆ ಕಣ್ಣೀರು ಸುರಿಸಬೇಕಾದ ಅಗತ್ಯವಿಲ್ಲ. ರಾಜ್ಯ ಬಿಜೆಪಿಯ ಸರ್ವೋಚ್ಚ ನಾಯಕರಾಗಿ ಅವರು ಪಕ್ಷದಲ್ಲಿ ತಮ್ಮದೆ ಆದ ಸ್ಥಾನಮಾನ ಹೊಂದಿದ್ದಾರೆ. ನಕಲಿ ಗಾಂಧಿ ಕುಟುಂಬದ ವಿರುದ್ಧ ತಿರುಗಿ ಬಿದ್ದಿರುವ #G23 ನಾಯಕರ ಯೋಗಕ್ಷೇಮದ ಬಗ್ಗೆ ನೀವು ಮೊದಲು ಲಕ್ಷ್ಯ ವಹಿಸಿ" ಎಂದು ಕಿಡಿಕಾರಿದೆ.
ಕಾಂಗ್ರೆಸ್ ಪಕ್ಷ ಒಬ್ಬೊಬ್ಬ ಹಿರಿಯ ನಾಯಕರನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತದೆ. ಹಿರಿಯ ನಾಯಕ ಕಪಿಲ್ ಸಿಬಲ್ ಅವರು ನಕಲಿ ಗಾಂಧಿ ಕುಟುಂಬದ ವಿರುದ್ಧ ಮಾತನಾಡಿದರು ಎನ್ನುವ ಕಾರಣಕ್ಕೆ ಕಪಿಲ್ ಸಿಬಲ್ ಮನೆ ಮೇಲೆ ತನ್ನ ಕಾರ್ಯಕರ್ತರಿಂದ ದಾಳಿ ಮಾಡಿಸುತ್ತದೆ. ನಿಮ್ಮದು ಯಾವ ಟ್ರೆಂಡ್?" ಎಂದು ಪ್ರಶ್ನೆ ಮಾಡಿದೆ.
Advertisement