ರಾಹುಲ್ ಗಾಂಧಿ ಕುರಿತು ಹೇಳಿಕೆ: ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ವಿರುದ್ಧ ಪ್ರಿಯಾಂಕ್ ಖರ್ಗೆ ತೀವ್ರ ಕಿಡಿ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಹೇಳಿಕೆ ನೀಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿರುದ್ಧ ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆಯವರು ಗುರುವಾರ ತೀವ್ರವಾಗಿ ಕಿಡಿಕಾರಿದ್ದಾರೆ.
ಪ್ರಿಯಾಂಕ್ ಖರ್ಗೆ
ಪ್ರಿಯಾಂಕ್ ಖರ್ಗೆ

ಕಲಬುರಗಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಹೇಳಿಕೆ ನೀಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿರುದ್ಧ ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆಯವರು ಗುರುವಾರ ತೀವ್ರವಾಗಿ ಕಿಡಿಕಾರಿದ್ದಾರೆ.

ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ಹತಾಶೆ ಹಾಗೂ ಪ್ರಚಾರದ ಗೀಳಿನಿಂದಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಾಂಗ್ರೆಸ್ ನಾಯಕರ ಮೇಲೆ ವೈಯಕ್ತಿಕ ದಾಳಿಗಿಳಿದಿದ್ದಾರೆಂದು ತಿರುಗೇಟು ನೀಡಿದ್ದಾರೆ.

ವ್ಯಕ್ತಿಯೊಬ್ಬ ಹತಾಶನಾದಾಗ ಏನೋನೋ ಮಾಡನಾಡಲು ಶುರು ಮಾಡುತ್ತಾರೆ. ಈ ಹಂತದಲ್ಲಿ ದಾರಿ ತಪ್ಪುವುದು ಸಹಜ. ಕೆಲವೊಮ್ಮೆ ಹತಾಶೆ ತೀವ್ರಗೊಂಡಾಗ ಮದ್ಯಪಾನ ಮಾಡುತ್ತಾರೆ. ಅಥವಾ ಡ್ರಗ್ಸ್ ಕೂಡಾ ತೆಗೆದುಕೊಳ್ಳುತ್ತಾರೆ. ಬಹುಶಃ ಕಟೀಲ್ ಆ ಹಂತ ತಲುಪಿಲ್ಲ ಎಂಬು ಭಾವಿಸುತ್ತೇನೆ. ಆದರೆ, ಕೆಲವೊಮ್ಮೆ ಅವರು ಮಾತನಾಡುವುದು ನೋಡಿದರೆ ಅನುಮಾನ ಮೂಡುತ್ತಿದೆ ಎಂದು ಹೇಳಿದ್ದಾರೆ.

ಕಟೀಲ್ ಅವರನ್ನ ಮುಖ್ಯಮಂತ್ರಿ ಹಾಗೂ ಯಡಿಯೂರಪ್ಪ ಅವರು ಬದಿಗೆ ಸರಿಸಿದ್ದಾರೆ. ಅವರ ಮಾತಿಗೆ ಅವರ ಪಕ್ಷದಲ್ಲಿ ಕವಡೆ ಕಾಸಿನ ಕಿಮ್ಮತ್ತಿಲ್ಲ. ಮಾಧ್ಯಮಗಳು ಕಟೀಲ್ ಅವರಿಗೆ ಹೆಚ್ಚು ಪ್ರಚಾರ ಕೊಡುತ್ತಿಲ್ಲ. ಹಾಗಾಗಿ ಪ್ರಚಾರದ ಹಂಬಲದಿಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ನಿಂದಿಸಿದ್ದಾರೆಂದು ತಿಳಿಸಿದ್ದಾರೆ.

ಕೇಂದ್ರ ಸರ್ಕಾರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಡ್ರಗ್ಸ್ ದಂಧೆ ಹೆಚ್ಚಾಗುತ್ತಿದೆ. ಕರ್ನಾಟಕದಲ್ಲಿಯೂ ಡ್ರಗ್ಸ್ ದಂಧೆ ಹೆಚ್ಚಾಗಿದ್ದು, ಮಾದಕವಸ್ತುಗಳ ಸಾಗಾಣಿಕೆಗೆ ಇಡೀ ಏಷ್ಯಾದಲ್ಲೇ ಬೆಂಗಳೂರು ಹೇಳಿ ಮಾಡಿಸಿದ ಜಾಗದಂತಿದೆ. ಕಲಬುರಗಿ ಜಿಲ್ಲೆಯಲ್ಲಿ ಚಿಂಚೋಳಿಯಲ್ಲಿ ಸುಮಾರು 2600 ಕೆಜಿಯ ರೂ.6 ಕೋಟಿ ಮೌಲ್ಯದ ಗಾಂಜಾ ವಶಪಡಿಸಿಕೊಳ್ಳಲಾಗಿತ್ತು. ಈ ಪ್ರಕರಣದಲ್ಲಿ ಭಾಗಿಯಾದವರು ಬಿಜೆಪಿಯವರೇ. ಇನ್ನೂ ಬಿಜೆಪಿ ಸ್ಟಾರ್ ಪ್ರಚಾರಕಿ ಕೂಡ ಡ್ರಗ್ಸ್ ದಂಧೆ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದಾರೆ.

ಕಟೀಲ್ ಅವರೇ ಪಕ್ಷ ಆಡಳಿತ ನಡೆಸುವ ನಮ್ಮ ರಾಜ್ಯದಲ್ಲಿ 2018ರಲ್ಲಿ 285 ಪ್ರಕರಣಗಳಲ್ಲಿ 44 ಜನ ವಿದೇಶಿಯರು ಅರೆಸ್ಟ್ ಆಗಿದ್ದಾರೆ. 2019ರಲ್ಲಿ 768 ಪ್ರಕರಣಗಳಲ್ಲಿ 38 ವಿದೇಶಿಯರು ಹಾಗೂ 1260 ಸ್ಥಳೀಯರು ಬಂಧನಕ್ಕೊಳಗಾಗಿದ್ದು, 1053 ಕೆಜಿ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ. 2020ರಲ್ಲಿ 2766 ಪ್ರಕರಣದಲ್ಲಿ 70 ವಿದೇಶಿಯರು ಹಾಗೂ 3673 ಸ್ಥಳೀಯರು ಬಂಧನಕ್ಕೊಳಗಾಗಿದ್ದು, 1912 ಕೆಜಿ ಜ್ರಗ್ಸ್ ವಶಪಡಿಸಿಕೊಳ್ಳಲಾಗಿದೆ. 2021ರ ಅಕ್ಟೋಬರ್ ವರೆಗೆ 3337 ಪ್ರಕರಣದಲ್ಲಿ 100ಕ್ಕೂ ಹೆಚ್ಚು ವಿದೇಶಿಯರು ಹಾಗೂ 4210 ಸ್ಥಳೀಯರು ಅರೆಸ್ಟ್ ಆಗಿದ್ದು, 3255 ಕೆಜಿ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಬಿಜೆಪಿಯವರು ವೈಯಕ್ತಿಕ ಟೀಕೆ ಮಾಡುವ ಬದಲು ವಿಷಯಾಧಾರಿತ ಚರ್ಚೆ ನಡೆಸಲಿ. ಸಿದ್ಧಾಂತ ಹಾಗೂ ಅಭಿವೃದ್ಧಿ ನಿಚಾರದಲ್ಲಿ ಚರ್ಚೆ ಮಾಡಲಿ. ನಾವೂ ತಯಾರಿದ್ದೇವೆಂದು ಆಹ್ವಾನ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com