'ಮಾರ್ಗದರ್ಶಕ' ಬಿ.ಎಸ್. ಯಡಿಯೂರಪ್ಪ ಭೇಟಿ ಮಾಡಿದ ಸಿಎಂ ಬೊಮ್ಮಾಯಿ, ರಾಜಕೀಯ ವಲಯದಲ್ಲಿ ಕುತೂಹಲ!

2023ರ ವಿಧಾನಸಭೆ ಚುನಾವಣೆ ಬಸವರಾಜ ಬೊಮ್ಮಾಯಿಯವರ ನೇತೃತ್ವದಲ್ಲಿಯೇ ನಡೆಯಲಿದೆ ಎಂದು ಬಿಜೆಪಿ ಹೈಕಮಾಂಡ್ ಘೋಷಣೆ ಮಾಡಿದ ನಂತರ ಬಿಜೆಪಿಯೊಳಗೆ ಕೆಲವು ನಾಯಕರಿಗೆ ಇದು ಸರಿ ಬಂದಂತೆ ಕಾಣುತ್ತಿಲ್ಲ.
ಸಿಎಂ ಬಸವರಾಜ ಬೊಮ್ಮಾಯಿ-ಬಿ ಎಸ್ ಯಡಿಯೂರಪ್ಪ(ಸಂಗ್ರಹ ಚಿತ್ರ)
ಸಿಎಂ ಬಸವರಾಜ ಬೊಮ್ಮಾಯಿ-ಬಿ ಎಸ್ ಯಡಿಯೂರಪ್ಪ(ಸಂಗ್ರಹ ಚಿತ್ರ)

ಬೆಂಗಳೂರು: 2023ರ ವಿಧಾನಸಭೆ ಚುನಾವಣೆ ಬಸವರಾಜ ಬೊಮ್ಮಾಯಿಯವರ ನೇತೃತ್ವದಲ್ಲಿಯೇ ನಡೆಯಲಿದೆ ಎಂದು ಬಿಜೆಪಿ ಹೈಕಮಾಂಡ್ ಘೋಷಣೆ ಮಾಡಿದ ನಂತರ ಬಿಜೆಪಿಯೊಳಗೆ ಕೆಲವು ನಾಯಕರಿಗೆ ಇದು ಸರಿ ಬಂದಂತೆ ಕಾಣುತ್ತಿಲ್ಲ.

ಬೊಮ್ಮಾಯಿಯವರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಹೈಕಮಾಂಡ್ ಸೂಚಿಸಿರುವುದು ಬಿಜೆಪಿಯೊಳಗೆ ಹಲವು ಹಿರಿಯ ನಾಯಕರಿಗೆ ಅಸಮಾಧಾನವನ್ನುಂಟುಮಾಡಿದ್ದು ಈ ಸಂದರ್ಭದಲ್ಲಿ ಬೊಮ್ಮಾಯಿಯವರು ತಮ್ಮ ಮಾರ್ಗದರ್ಶಕ, ನಿಕಟಪೂರ್ವ ಮುಖ್ಯಮಂತ್ರಿ ಹಾಗೂ ಗುರುಗಳಾದ ಯಡಿಯೂರಪ್ಪನವರನ್ನು ಭೇಟಿ ಮಾಡಿದ್ದಾರೆ.

ಇದೇ 13ಕ್ಕೆ ವಿಧಾನಸಭೆ ಅಧಿವೇಶನ ಆರಂಭವಾಗುತ್ತಿದ್ದು ಈ ಸಂದರ್ಭದಲ್ಲಿ ಹಿರಿಯ ನಾಯಕ ಯಡಿಯೂರಪ್ಪನವರ ಜೊತೆ ಉತ್ತಮ ಬಾಂಧವ್ಯ ಹೊಂದಿರಲು, ಹಿಂದಿನ ಪ್ರೀತಿ, ವಿಶ್ವಾಸ-ಗೌರವವನ್ನೇ ಕಾಪಾಡಿಕೊಂಡು ಹೋಗಲು ಬಸವರಾಜ ಬೊಮ್ಮಾಯಿಯವರು ತಮ್ಮ ಈ ನಡೆಯನ್ನು ಪ್ರದರ್ಶಿಸುತ್ತಿದ್ದು ನಿನ್ನೆ ನಡೆದ ಭೇಟಿ ಮಾತುಕತೆ ಗೌಪ್ಯವಾಗಿತ್ತು ಎಂದು ಮೂಲಗಳು ಹೇಳುತ್ತಿವೆ. ವಿಧಾನಸಭೆಯಲ್ಲಿ ಯಡಿಯೂರಪ್ಪನವರ ಮುಂದೆ ಬಸವರಾಜ ಬೊಮ್ಮಾಯಿಯವರು ಹಿತಾಸಕ್ತಿ, ಉತ್ತಮ ನಡೆಯನ್ನು ಪ್ರದರ್ಶಿಸಬೇಕಿದೆ.

ಸದನದಲ್ಲಿ ಕಾಂಗ್ರೆಸ್ ಹಿಂದಿನ ಯಡಿಯೂರಪ್ಪ ಸರ್ಕಾರದಲ್ಲಿ ಕೇಳಿಬಂದಿರುವ ಹಲವು ಹಗರಣಗಳನ್ನುಪ್ರಸ್ತಾಪಿಸಿ ಗದ್ದಲವೆಬ್ಬಿಸುವ ಸಾಧ್ಯತೆಯಿದ್ದು ಈ ಸಂದರ್ಭದಲ್ಲಿ ಬೊಮ್ಮಾಯಿಯವರಿಗೆ ಪಕ್ಷದ ಹಿರಿಯ-ಕಿರಿಯ ಶಾಸಕರ ಬೆಂಬಲ ಖಂಡಿತಾ ಬೇಕಿದೆ. ಈ ನಿಟ್ಟಿನಲ್ಲಿ ಬೊಮ್ಮಾಯಿಯವರು ಯಡಿಯೂರಪ್ಪನವರನ್ನು ಸೌಹಾರ್ದಯುತವಾಗಿ ಭೇಟಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ನಿನ್ನೆ ಯಡಿಯೂರಪ್ಪನವರ ನಿವಾಸ ಕಾವೇರಿಗೆ ಸಿಎಂ ಬೊಮ್ಮಾಯಿಯವರು ಹೋಗಿ ಅಲ್ಲಿ 15 ನಿಮಿಷಗಳ ಸಮಯ ಕಳೆದಿದ್ದಾರೆ.

ಹಲವು ನಿಗಮ-ಮಂಡಳಿಗಳಿಗೆ ನೇಮಕಾತಿ ವಿಚಾರವೂ ನಿನ್ನೆಯ ಉಭಯ ನಾಯಕರ ಭೇಟಿಯಲ್ಲಿ ಚರ್ಚೆಯಾಗಿರಬಹುದು, ಯಡಿಯೂರಪ್ಪನವರ ಒಪ್ಪಿಗೆಯಿಲ್ಲದೆ ಸರ್ಕಾರದ ಪ್ರಮುಖ ನಿರ್ಧಾರಗಳನ್ನು ಬೊಮ್ಮಾಯಿಯವರು ಮುಂದುವರಿಸುವುದು ಕಷ್ಟವೇ, ಈ ನಿಟ್ಟಿನಲ್ಲಿ ಭೇಟಿ ಸಾಗಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com