ಮಾಂಡೌಸ್ ಎಫೆಕ್ಟ್: ಬಿಜೆಪಿ, ಜೆಡಿಎಸ್ ಕಾರ್ಯಕ್ರಮಗಳು ಮೂಂದೂಡಿಕೆ
ಬೆಂಗಳೂರು: ಮಾಂಡೌಸ್ ಚಂಡಮಾರುತ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮಳೆಯಾಗುತ್ತಿದ್ದು, ಇದರ ಪರಿಣಾಮ ರಾಜಕೀಯ ಪಕ್ಷಗಳ ಮೇಲೂ ಬಿದ್ದಿದೆ.
ಚುನಾವಣೆ ಹತ್ತಿರಬರುತ್ತಿರುವ ಹಿನ್ನೆಲೆ ರಾಜಕೀಯ ಪಕ್ಷಗಳು ರ್ಯಾಲಿ, ಸಮಾವೇಶಗಳನ್ನು ಆರಂಭಿಸಿದ್ದವು. ಚಂಡಮಾರುತವು ರಾಜ್ಯ ರಾಜಕೀಯ ಪಕ್ಷಗಳ ಕಾರ್ಯಕ್ರಮಗಳ ಅಬ್ಬರಕ್ಕೆ ಕೊಂಚ ಬ್ರೇಕ್ ನೀಡಿದೆ.
ರಾಜ್ಯದಲ್ಲಿ ಮಳೆ ಸುರಿಯುತ್ತಿರುವ ಹಿನ್ನೆಲೆ ಬಿಜೆಪಿ ಜನಸಂಕಲ್ಪ ಸಮಾವೇಶವನ್ನು ಮುಂದೂಡಿಕೆ ಮಾಡಲಾಗಿದೆ. ಬೆಂಗಳೂರಿನಲ್ಲಿ ಇಂದು ನಿಗದಿಯಾಗಿದ್ದ ಸಮಾವೇಶ ಮುಂದೂಡಲಾಗಿದೆ. ಇನ್ನೊಂದೆಡೆ, ಮಕೂರು ಜಿಲ್ಲೆಯಲ್ಲಿ ಬಿಟ್ಟು ಬಿಡದೆ ಮಳೆಯಾಗುತ್ತಿರುವ ಹಿನ್ನೆಲೆ ಇಂದು ಚಿಕ್ಕನಾಯಕನಹಳ್ಳಿಯಿಂದ ಮತ್ತೆ ಶುರುವಾಗಬೇಕಿದ್ದ ಪಂಚರತ್ನ ರಥಯಾತ್ರೆ ನಾಲ್ಕು ದಿನ ಮುಂದೂಡಿಕೆ ಮಾಡಲಾಗಿದೆ.
ಜೆ.ಪಿ.ನಡ್ಡಾ ರಾಜ್ಯ ಪ್ರವಾಸದಲ್ಲಿ ಬದಲಾವಣೆ
ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ. ಇದರ ಭಾಗವಾಗಿ ಡಿ.15ರಂದು ನಿಗದಿಯಾಗಿದ್ದ ಬಾಗಲಕೋಟೆ ಭೇಟಿ ಇದೀಗ ರದ್ದಾಗಿದೆ.
ಅಂದು ಬಾಗಲಕೋಟೆ ಬದಲು ಕೊಪ್ಪಳಕ್ಕೆ ನಡ್ಡಾ ಅವರು ಆಗಮಿಸಲಿದ್ದಾರೆ. ಡಿ.15ರಂದು ಬಾಗಲಕೋಟೆ ಬಿಜೆಪಿ ಕಚೇರಿ ಉದ್ಘಾಟನೆಗೆ ಆಗಮಿಸಬೇಕಿದ್ದ ಜೆ.ಪಿ.ನಡ್ಡಾ ಮತ್ತು ಸಿಎಂ ಬೊಮ್ಮಾಯಿ ಕಾರ್ಯಕ್ರಮವನ್ನು ಕೊಪ್ಪಳಕ್ಕೆ ಸ್ಥಳಾಂತರಿಸಲಾಗಿದೆ.
ಕೊಪ್ಪಳದಿಂದಲೇ ವರ್ಚುವಲ್ ಮೂಲಕ ಬಾಗಲಕೋಟೆ ಮತ್ತು ಉತ್ತರ ಕರ್ನಾಟಕದ ಇತರೆ ಜಿಲ್ಲೆಗಳ ಬಿಜೆಪಿ ಕಚೇರಿಗಳನ್ನು ಉದ್ಘಾಟನೆ ಮಾಡಲಾಗುತ್ತಿದೆ.