ದಾವಣಗೆರೆ: ಒಕ್ಕಲಿಗ ಮತ್ತು ಪಂಚಮಸಾಲಿ-ಲಿಂಗಾಯತರಿಗೆ ಪ್ರತ್ಯೇಕ ಮೀಸಲಾತಿ ಕಲ್ಪಿಸುವ ರಾಜ್ಯ ಸರ್ಕಾರದ ನಿರ್ಧಾರ ಚುನಾವಣಾ ಗಿಮಿಕ್ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಶುಕ್ರವಾರ ಹೇಳಿದ್ದಾರೆ.
ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿ ಮತದಾರರನ್ನು ಮೆಚ್ಚಿಸಲು ಯತ್ನಿಸುತ್ತಿದ್ದು, ಹೀಗಾಗಿ ಮೀಸಲಾತಿ ಘೋಷಣೆ ಮಾಡಿದೆ’ ಎಂದು ಹೇಳಿದರು.
3ಎ ಮತ್ತು 3ಬಿ ವರ್ಗಗಳನ್ನು ಕೈಬಿಟ್ಟು 2ಸಿ ಮತ್ತು 2ಡಿ ವರ್ಗಗಳಿಗೆ ನೀಡಿರುವ ಮೀಸಲಾತಿಯ ನಿಖರ ಸ್ಥಿತಿ ಯಾರಿಗೂ ತಿಳಿದಿಲ್ಲ, ಹೊಸ 2ಸಿ ಮತ್ತು 2ಡಿ ವರ್ಗಗಳ ಬಗ್ಗೆಯೂ ಸರ್ಕಾರ ಸ್ಪಷ್ಟನೆ ನೀಡಬೇಕು ಮತ್ತು ಸಾರ್ವಜನಿಕರು ಮತ್ತು ವಿರೋಧ ಪಕ್ಷಗಳನ್ನು ಕತ್ತಲೆಯಲ್ಲಿ ಕೂರಿಸುವ ಕೆಲಸ ಮಾಡಬಾರದು ಎಂದು ತಿಳಿಸಿದರು.
ಸರ್ಕಾರಕ್ಕೆ ಯಾವುದೇ ಕಾಳಜಿ ಇದ್ದರೆ, ಸಂವಿಧಾನ ತಿದ್ದುಪಡಿಯ ಮೂಲಕ ಸಂಸತ್ತಿನಲ್ಲಿ ಎಲ್ಲಾ ಮೀಸಲಾತಿಗಳನ್ನು ಅಂಗೀಕರಿಸಬೇಕು. ಒಕ್ಕಲಿಗರಿಗೆ ಮೀಸಲಾತಿ ನೀಡಲು ನನ್ನ ಅಭ್ಯಂತರವಿಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.
ಮಹದಾಯಿ ಯೋಜನೆ ಕುರಿತುಮಾತನಾಡಿ, ಯೋಜನೆ ಕುರಿತು 2020ರ ಫೆಬ್ರುವರಿ 27ರಂದು ಅಧಿಸೂಚನೆ ಹೊರಡಿಸಲಾಗಿದ್ದು, ಡಿಪಿಆರ್ ಸಿದ್ಧಪಡಿಸಲು 2 ವರ್ಷ 10 ತಿಂಗಳು ಸರ್ಕಾರವನ್ನು ಯಾವ ಕಾರಣಗಳು ತಡೆದಿತ್ತು ಎಂದು ಪ್ರಶ್ನಿಸಿದರು.
‘ಚುನಾವಣೆ ಸಮೀಪಿಸುತ್ತಿದ್ದಂತೆ ಕಾನೂನು ಪರಿಣಾಮಗಳನ್ನು ಅರ್ಥ ಮಾಡಿಕೊಳ್ಳದೆ ಸರ್ಕಾರ ತರಾತುರಿಯಲ್ಲಿ ಘೋಷಣೆಗಳನ್ನು ಮಾಡುತ್ತಿದೆ’ ಎಂದರು.
ಬಳಿಕ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಲೇವಡಿ ಮಾಡಿದ ಸಿದ್ದರಾಮಯ್ಯ, “ಶಾ ಅವರು ಪಶ್ಚಿಮ ಬಂಗಾಳ, ಹಿಮಾಚಲ ಪ್ರದೇಶ ಮತ್ತು ಇತರೆಡೆ ಪ್ರಚಾರ ಮಾಡಿದರು. ಅಲ್ಲಿ ಬಿಜೆಪಿ ಸೋತಿತು. ಕರ್ನಾಟಕ ಗೆಲ್ಲುವಂತೆ ಮಾಡಲು ಅವರೇನು ಜಾದೂಗಾರನಾ? ಎಂದು ಪ್ರಶ್ನಿಸಿದರು.
Advertisement