ಬೆಂಗಳೂರು: ಬಳ್ಳಾರಿಯಲ್ಲಿ ಎಸ್ಟಿ ಸಮುದಾಯದ ‘ನವಚೈತನ್ಯ ಸಮಾವೇಶ’ ನಡೆಸಿ ಯಶಸ್ವಿಯಾಗಿ ಸಂತಸದಲ್ಲಿರುವ ಬಿಜೆಪಿಗೆ ಟಕ್ಕರ್ ಕೊಡಲು ಕಾಂಗ್ರೆಸ್ ಮುಂದಾಗಿದ್ದು, ಐಕ್ಯತಾ ಸಮಾವೇಶಕ್ಕೆ ಸಿದ್ಧತೆ ನಡೆಸಿದೆ.
ಇದಕ್ಕೆ ಪೂರ್ವ ಸಿದ್ಧತೆ ಎಂಬಂತೆ ಕಾಂಗ್ರೆಸ್ ನಾಯಕತ್ವವು ಭಾನುವಾರ ಇಲ್ಲಿನ ಖಾಸಗಿ ಹೋಟೆಲ್ನಲ್ಲಿ ಎಸ್ಸಿ/ಎಸ್ಟಿ ಮುಖಂಡರೊಂದಿಗೆ ಸರಣಿ ಸಭೆಗಳನ್ನು ನಡೆಸಿ, ಮಾತುಕತೆ ನಡೆಸಿತು.
ಸಂವಿಧಾನಕ್ಕೆ ಧಕ್ಕೆ, ಎಸ್ಸಿ/ಎಸ್ಟಿಗಳ ಕಲ್ಯಾಣಕ್ಕೆ ಮೀಸಲಿಟ್ಟಿರುವ ಅನುದಾನ, ಗಂಗಾಕಲ್ಯಾಣ ಯೋಜನೆಯಡಿ ಬೋರ್ವೆಲ್ ಮಂಜೂರಾತಿ ಕೊರತೆ ಮತ್ತಿತರ ವಿಷಯಗಳ ಕುರಿತು ಪೂರ್ವಭಾವಿ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ತಿಳಿದುಬಂದಿದೆ.
ಕಳೆದ ವಾರ ನಡೆದ ಸಭೆಯಲ್ಲಿ ಡಿಸೆಂಬರ್ ಕೊನೆಯ ವಾರ ಎಸ್ಸಿ/ಎಸ್ಟಿ ‘ಐಕ್ಯತಾ ಸಮಾವೇಶ’ ನಡೆಸಲು ನಿರ್ಧರಿಸಲಾಗಿತ್ತು. ಅಲ್ಲದೆ, ಸ್ಕಾಲರ್ಶಿಪ್ ಫಂಡ್ ಮತ್ತು ಸ್ಟೈಫಂಡ್ಗಳ ವಿತರಣೆಯನ್ನು ನಿಲ್ಲಿಸಿರುವುದು ಮತ್ತು ಉದ್ಯೋಗ ಬಾಕಿಯನ್ನು ಭರ್ತಿ ಮಾಡದಿರುವ ಬಗ್ಗೆ ಚರ್ಚಿಸಲಾಗಿತ್ತು.
ಸಮಾವೇಶ ರಾಜ್ಯ ಮಟ್ಟದ ಕಾರ್ಯಕ್ರಮವಾಗಿದ್ದು, ನಾವು 10 ಲಕ್ಷಕ್ಕೂ ಹೆಚ್ಚು ಜನರನ್ನು ಸಂಘಟಿಸಲು ಯೋಜಿಸಿದ್ದೇವೆ. ಕೋಲಾರ, ಬೆಳಗಾವಿ, ಕಲಬುರಗಿ, ಚಿತ್ರದುರ್ಗ ಮತ್ತು ಕರಾವಳಿ ಪ್ರದೇಶಗಳ ಜನರನ್ನು ಸೇರಿಸಲು ಸೂಚಿಸಲಾಗಿದೆ" ಎಂದು ನಾಯಕರೊಬ್ಬರು ಮಾಹಿತಿ ನೀಡಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಮಾತನಾಡಿ, ಬೆಂಗಳೂರು, ಬಳ್ಳಾರಿ, ರಾಯಚೂರು ಅಥವಾ ದಾವಣಗೆರೆಯಲ್ಲಿ ಸಿದ್ದರಾಮಯ್ಯ ಅವರ ಜನ್ಮದಿನ ಹಾಗೂ ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯಂತೆಯೇ ಐಕ್ಯತಾ ಸಮಾವೇಶ ನಡೆಸಬೇಕೆಂದು ಸೂಚಿಸಿದ್ದಾರೆ.
“ಬಿಜೆಪಿ ಸಂವಿಧಾನ ಮತ್ತು ಡಾ ಬಿಆರ್ ಅಂಬೇಡ್ಕರ್ ಅವರ ತತ್ವಗಳಿಗೆ ವಿರುದ್ಧವಾಗಿದೆ, ಆದರೆ ಎಸ್ಸಿ/ಎಸ್ಟಿ ಕೋಟಾವನ್ನು ಶೇಕಡಾ 15 ರಿಂದ 17 ಕ್ಕೆ ಮತ್ತು ಶೇಕಡಾ 3 ರಿಂದ 7 ಕ್ಕೆ ಹೆಚ್ಚಿಸಿದ ಕೀರ್ತಿಯನ್ನು ಪಡೆಯಲು ಪ್ರಯತ್ನಿಸುತ್ತಿದೆ. ಬಿಜೆಪಿ ದಲಿತ ವಿರೋಧಿಯಾಗಿದ್ದು ಹೇಗೆ ಎಂಬುದರ ಕುರಿತು ಹಾಗೂ ಸಿದ್ದರಾಮಯ್ಯ ಆಡಳಿತಾವಧಿಯಲ್ಲಿ ಎಸ್ಸಿ/ಎಸ್ಟಿಗಳ ಕಲ್ಯಾಣಕ್ಕೆ ಅನುದಾನ ಹಂಚಿಕೆ ಹಾಗೂ ಸಾಲ ಮನ್ನಾ ಕುರಿತು ಜಾಗೃತಿ ಮೂಡಿಸಲಾಗುವುದು ಎಂದು ಮತ್ತೊಬ್ಬ ನಾಯಕರು ಹೇಳಿದ್ದಾರೆ.
ಬೊಮ್ಮಾಯಿ ಸರ್ಕಾರವು ಕೆಲವು ಜಮೀನುಗಳ ವರ್ಗಾವಣೆ ನಿಷೇಧ (ಪಿಟಿಸಿಎಲ್) ಕಾಯಿದೆ, 1978 ಅನ್ನು ತಿದ್ದುಪಡಿ ಮಾಡುತ್ತಿಲ್ಲ ಅಥವಾ SC/ST ಗಳು ಅವರಿಗೆ ಸರ್ಕಾರದಿಂದ ಮಂಜೂರು ಮಾಡಿದ ಭೂಮಿಯನ್ನು ಮರಳಿ ಪಡೆಯುವುದನ್ನು ಖಚಿತಪಡಿಸಿಕೊಳ್ಳುತ್ತಿಲ್ಲ ಆದರೆ, ಇತರ ಸಮುದಾಯಗಳಿಗೆ ಮಾರಾಟ ಮಾಡುತ್ತಿದೆ. ಈ ಸಂಬಂಧ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ತಂಡಗಳನ್ನು ರಚಿಸಲಾಗಿದ್ದು, ಈ ಪ್ರದೇಶದಲ್ಲಿ ಪ್ರವಾಸ ಮಾಡಿ ಸಮುದಾಯದವರನ್ನು ಭೇಟಿ ಮಾಡಲಾಗುವುದು ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಬಿ ಜಿ ನಿಂಗರಾಜು ಎಂಬುವವರು ತಿಳಿಸಿದ್ದಾರೆ.
36 ಎಸ್ಸಿ ಮತ್ತು 15 ಎಸ್ಟಿಗಳಿಗೆ ಮೀಸಲು ಸೇರಿದಂತೆ 51 ಸ್ಥಾನಗಳಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಗುರಿಯನ್ನು ಪಕ್ಷ ಹೊಂದಿದೆ. ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾಗಿರುವುದರಿಂದ ಗಂಭೀರವಾಗಿ ಪರಿಗಣಿಸಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಬೇಕು ಎಂದು ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದ್ದಾರೆ.
Advertisement