ಮೈಸೂರು: ಟಿಪ್ಪು ಸುಲ್ತಾನ್ ಮತ್ತು ಮೈಸೂರಿಗೆ ಇರುವ ಸಂಬಂಧವಾದರೂ ಏನು ಎಂದು ಮೈಸೂರು ಸಂಸದ ಪ್ರತಾಪ್ ಸಿಂಹ ಪ್ರಶ್ನಿಸಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು ಪ್ರತಿದಿನ ಮೈಸೂರು ಬೆಂಗಳೂರು ನಡುವೆ ಸಂಚರಿಸುವ ಟಿಪ್ಪು ಎಕ್ಸ್ ಪ್ರೆಸ್ ಹೆಸರು ಬದಲಿಸಿ ಒಡೆಯರ್ ಹೆಸರಿಟ್ಟಿರುವುದರ ಬಗ್ಗೆ ಅವರು ಪ್ರತಿಕ್ರಿಯಿಸಿದರು.
ಟಿಪ್ಪುವಿಗೂ ಮೈಸೂರಿಗೂ ಏನು ಸಂಬಂಧ ? ಟಿಪ್ಪು ಏನು ಮೈಸೂರಿನವನಾ. ಅವನು ಶ್ರೀರಂಗಪಟ್ಟಣದವನು,. ಮೈಸೂರು ಸಾಮ್ರಾಜ್ಯದಲ್ಲಿ ಮಹಾರಾಜರು ಕೊಟ್ಟಿರುವ ನೂರು ಕೊಡುಗೆಗಳನ್ನು ನಾನು ಹೇಳಬಲ್ಲೆ. ರೈಲಿಗೆ ಟಿಪ್ಪು ಎಕ್ಸ್ ಪ್ರೆಸ್ ಇರಬೇಕಿತ್ತು ಎಂದು ಹೇಳುವವರು ಟಿಪ್ಪುವಿನ ಮೂರು ಕೊಡುಗೆ ಹೇಳಲಿ ನೋಡೋಣ ಎಂದು ಸವಾಲು ಹಾಕಿದರು.
ಮೈಸೂರಿಗೆ ಏನು ಕೊಡುಗೆ ನೀಡದ ಅಂತ ಟಿಪ್ಪು ಹೆಸರನ್ನು ರೈಲಿಗೆ ಏಕೆ ಇಡಬೇಕಿತ್ತು. ಆ ಹೆಸರು ಉಳಿಸಿಕೊಳ್ಳಬೇಕಾದ ಅಗತ್ಯವೇನಿತ್ತು. ನಾನು ಉದ್ದೇಶಪೂರ್ವಕವಾಗಿಯೇ ಈ ಟ್ರೈನ್ ಹೆಸರು ಬದಲಾಯಿಸಿರುವುದು. ಭಾರತೀಯ ರೈಲ್ವೆ ಇತಿಹಾಸದಲ್ಲಿ ರೈಲಿಗೆ ಹೆಸರು ಇಟ್ಟ ಉದಾಹರಣೆ ಇದೆಯೇ ಹೊರತು ಹೆಸರು ಬದಲಿಸಿದ ಉದಾಹರಣೆಗಳಿರಲಿಲ್ಲ ಎಂದರು.
ಮೈಸೂರು ಅಭಿವೃದ್ಧಿಯ ದ್ಯೋತಕಗಳ ಹಿನ್ನೆಲೆಯಲ್ಲಿ ಮೈಸೂರು ಮಹಾರಾಜರ ಕೊಡುಗೆ ಇದೆ. ಟಿಪ್ಪುವಿಗೂ ಮೈಸೂರಿಗೂ ಯಾವುದೇ ಸಂಬಂಧ ಇಲ್ಲ ಎಂದು ಪ್ರತಿಪಾದಿಸಿದರು. ಈ ಹಿನ್ನೆಲೆಯಲ್ಲಿಯೇ ಉದ್ದೇಶಪೂರ್ವಕ ಬದಲಾವಣೆ ಮಾಡಿದ್ದೇವೆ ಎಂದು ಪುನರುಚ್ಚರಿಸಿದರು.
Advertisement