ಜಿಟಿ ದೇವೇಗೌಡಗೆ ಮೈಸೂರು ಉಸ್ತುವಾರಿ, ಹುಣಸೂರಿನಿಂದ ಪುತ್ರ ಹರೀಶ್ಗೌಡಗೆ ಜೆಡಿಎಸ್ ಟಿಕೆಟ್
ಮೈಸೂರು: ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಮೇಲೆ ಮುನಿಸಿಕೊಂಡು ಪಕ್ಷದ ಕಾರ್ಯಚಟುವಟಿಕೆಗಳಿಂದ ದೂರ ಉಳಿದಿದ್ದ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಅವರಿಗೆ ಚಾಮುಂಡೇಶ್ವರಿ ಕ್ಷೇತ್ರದಿಂದ ಮತ್ತು ಅವರ ಪುತ್ರ ಹರೀಶ್ಗೌಡ ಅವರಿಗೆ ಜೆಡಿಎಸ್ ಟಿಕೆಟ್ ಖಚಿತವಾಗಿದೆ.
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನಾನು ಮತ್ತೆ ಚಾಮುಂಡೇಶ್ವರಿಯಿಂದ ಸ್ಪರ್ಧಿಸುತ್ತೇನೆ ಮತ್ತು ನನ್ನ ಮಗ(ಜಿ.ಡಿ.ಹರೀಶ್ಗೌಡ)ನಿಗೆ ಹುಣಸೂರು ಕ್ಷೇತ್ರದಿಂದ ಟಿಕೆಟ್ ನೀಡುವ ಭರವಸೆ ಸಿಕ್ಕಿದೆ ಎಂದು ಜಿಟಿ ದೇವೇಗೌಡ ಅವರ ಶುಕ್ರವಾರ ಹೇಳಿದ್ದಾರೆ.
ಇಂದು ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಿಟಿಡಿ, ಪಕ್ಷದ ನಾಯಕರು ನನಗೆ ಮೈಸೂರು ಉಸ್ತುವಾರಿ ನೀಡಿದ್ದಾರೆ. ನಾನು ಮತ್ತೊಮ್ಮೆ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ. ಮಗ ಹರೀಶ್ ಗೌಡ ಹುಣಸೂರು ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಕೆ ಆರ್ ನಗರದಿಂದ ಸಾ ರಾ ಮಹೇಶ್, ಟಿ ನರಸೀಪುರದಿಂದ ಅಶ್ವಿನ್, ಪಿರಿಯಾಪಟ್ಟಣದಿಂದ ಮಹಾದೇವ ಮತ್ತು ಎಚ್ ಡಿ ಕೋಟೆಯಿಂದ ಸಿದ್ದಣ್ಣ ಇಲ್ಲವೇ ಅವರ ಮಗ ಸ್ಪರ್ಧಿಸಲಿದ್ದಾರೆಂದು ಜಿಟಿಡಿ ಹೇಳಿದರು.
ಕಳೆದ ಮೂರು ವರ್ಷಗಳಿಂದಲೂ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಅವರ ಮನವೊಲಿಸುವಲ್ಲಿ ಜೆಡಿಎಸ್ ವರಿಷ್ಠಿ ಎಚ್.ಡಿ.ದೇವೇಗೌಡ ಯಶಸ್ವಿಯಾಗಿದ್ದಾರೆ.