ವಿಜಯಪುರ ಜಿಲ್ಲೆಗೆ ನೆರೆ ಪರಿಹಾರ ನೀಡಲು ಸರ್ಕಾರದ ಮಲತಾಯಿ ಧೋರಣೆ: ಎಂ ಬಿ ಪಾಟೀಲ್
ಕಳೆದ ಕೆಲ ದಿನಗಳಿಂದ ಎಡಬಿಡದೆ ಮಳೆ ನಿರಂತರವಾಗಿ ಸುರಿಯುತ್ತಿದ್ದು ಪ್ರವಾಹ ಹಾಗೂ ಭೂ ಕುಸಿತದಿಂದಾಗಿ ನಷ್ಟ ಅನುಭವಿಸಿರುವ ವಿಜಯಪುರ ಜಿಲ್ಲೆಗೆ ಜಿಲ್ಲೆಗೆ ಒಂದೇ ಒಂದು ರೂಪಾಯಿ ಮಂಜೂರು ಮಾಡಿಲ್ಲ ಎಂದು ಕಾಂಗ್ರೆಸ್ ನಾಯಕ ಎಂಬಿ ಪಾಟೀಲ್ ಹರಿ ಹಾಯ್ದಿದ್ದಾರೆ.
Published: 08th August 2022 11:01 AM | Last Updated: 08th August 2022 12:59 PM | A+A A-

ಎಂ.ಬಿ ಪಾಟೀಲ್
ವಿಜಯಪುರ: ಕಳೆದ ಕೆಲ ದಿನಗಳಿಂದ ಎಡಬಿಡದೆ ಮಳೆ ನಿರಂತರವಾಗಿ ಸುರಿಯುತ್ತಿದ್ದು ಪ್ರವಾಹ ಹಾಗೂ ಭೂ ಕುಸಿತದಿಂದಾಗಿ ನಷ್ಟ ಅನುಭವಿಸಿರುವ ವಿಜಯಪುರ ಜಿಲ್ಲೆಗೆ ಜಿಲ್ಲೆಗೆ ಒಂದೇ ಒಂದು ರೂಪಾಯಿ ಮಂಜೂರು ಮಾಡಿಲ್ಲ ಎಂದು ಕಾಂಗ್ರೆಸ್ ನಾಯಕ ಎಂಬಿ ಪಾಟೀಲ್ ಹರಿ ಹಾಯ್ದಿದ್ದಾರೆ.
ಮಳೆ, ಪ್ರವಾಹದಿಂದ ತೊಂದರೆಗೆ ಈಡಾಗಿರುವ ವಿಜಯಪುರ ಜಿಲ್ಲೆಗೂ ತುರ್ತು ಪರಿಹಾರ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ಸಂತ್ರಸ್ತರೊಂದಿಗೆ ನಾನೇ ಬೀದಿಗಿಳಿಯಬೇಕಾಗುತ್ತದೆ ಎಂ.ಬಿ.ಪಾಟೀಲ ಎಚ್ಚರಿಕೆ ನೀಡಿದ್ದಾರೆ.
ನೆರೆ ಹಾವಳಿ ಮತ್ತು ಮುಂಗಾರು ಮಳೆಯಿಂದ ಜೀವ, ಜಾನುವಾರು, ಬೆಳೆ, ಮನೆ ಮತ್ತು ಸಾರ್ವಜನಿಕ ಮೂಲಸೌಲಭ್ಯ ಹಾನಿಯಾಗಿರುವ ಕುರಿತು ತುರ್ತು ಪರಿಹಾರ ನೀಡಲು ರಾಜ್ಯ ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿ 200 ಕೋಟಿ ರು. ಅನುದಾನ ಬಿಡುಗಡೆ ಮಾಡಿ, ವಿವಿಧ ಜಿಲ್ಲೆಗಳಿಗೆ ಹಂಚಿಕೆ ಮಾಡಲಾಗಿದೆ. ಆದರೆ, ಇದರಲ್ಲಿ ವಿಜಯಪುರ ಜಿಲ್ಲೆಯನ್ನು ಕೈ ಬಿಟ್ಟಿರುವುದು ಆಶ್ಚರ್ಯ ತಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಗೆ ಅಭಿವೃದ್ಧಿ ಕಾರ್ಯಗಳ ಅನುದಾನ ಬಿಡುಗಡೆ ಮಾಡುವಲ್ಲಿ ಸದಾ ತಾರತಮ್ಯ ತೋರುತ್ತಿರುವ ಬಿಜೆಪಿ ಸರ್ಕಾರ, ಇದೀಗ ನೆರೆ ಹಾವಳಿಯಂತಹ ಗಂಭೀರ ವಿಷಯದಲ್ಲಿಯೂ ತಾರತಮ್ಯ ಮಾಡುವ ಮೂಲಕ ತಾವು ಲಜ್ಜೆಗೆಟ್ಟವರು ಎಂಬುದನ್ನು ತೋರಿಸಿದೆ ಎಂದು ಟೀಕಿಸಿದ್ದಾರೆ.
ಇದನ್ನೂ ಓದಿ: ಮುಂಗಾರು ಆರಂಭದಿಂದ ಈವರೆಗೂ ಮಳೆಯಿಂದ 74 ಮಂದಿ ಸಾವು: ರಾಜ್ಯಾದ್ಯಂತ ಸಿಎಂ ಬೊಮ್ಮಾಯಿ ತೀವ್ರ ನಿಗಾ
ಮುಖ್ಯಮಂತ್ರಿ, ಈ ಭಾಗದ ಸಚಿವರಿಗೆ ಕಿಂಚಿತ್ತು ಮಾನ, ಮರ್ಯಾದೆ ಇದ್ದರೆ, ತಕ್ಷಣ ಜಿಲ್ಲೆಯಲ್ಲಿ ಮಳೆಯಿಂದ, ನೆರೆಯಿಂದ ಹಾನಿಯಾಗಿರುವ ಮಾಹಿತಿ ಪಡೆದು, ವಿಜಯಪುರ ಜಿಲ್ಲೆಗೂ ತುರ್ತು ಪರಿಹಾರ ಬಿಡುಗಡೆ ಮಾಡಿ, ತಮ್ಮ ಗೌರವ ಉಳಿಸಿಕೊಳ್ಳಬೇಕು. ಇಲ್ಲದಿದ್ದರೆ ಸಂತ್ರಸ್ತರೊಂದಿಗೆ ನಾನೇ ಬೀದಿಗಿಳಿಯಬೇಕಾಗುತ್ತದೆ ಎಚ್ಚರಿಕೆ ನೀಡಿದ್ದಾರೆ.
ಈ ಭಾಗದ ಯಾವುದೇ ಸಚಿವರಿಗೆ ಜನರ ಬಗ್ಗೆ ಕಿಂಚಿತ್ತಾದರೂ ಘನತೆ, ಕಾಳಜಿ ಇದ್ದರೆ ಪ್ರವಾಹ ಮತ್ತು ಮಳೆಯಿಂದ ಆಗಿರುವ ನಷ್ಟದ ಬಗ್ಗೆ ಜಿಲ್ಲಾಧಿಕಾರಿಗಳಿಂದ ವರದಿ ಪಡೆದು ಜಿಲ್ಲೆಗೆ ಪರಿಹಾರ ಧನ ಮಂಜೂರು ಮಾಡಬೇಕು. ವಿಫಲವಾದರೆ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತೇನೆ' ಎಂದು ಎಚ್ಚರಿಕೆ ನೀಡಿದರು. ಡೋಣಿ ಬೆಲ್ಟ್ನ ಪ್ರವಾಹದಿಂದ ಜಿಲ್ಲೆಯಲ್ಲಿ 1,520 ಹೆಕ್ಟೇರ್ಗೂ ಹೆಚ್ಚು ಬೆಳೆದ ಬೆಳೆ ಹಾನಿಯಾಗಿದೆ ಎಂದು ಜಿಲ್ಲಾಡಳಿತ ಹೇಳಿಕೊಂಡಿರುವುದನ್ನು ಸಹ ಗಮನಿಸಬಹುದು.