ರಾಜ್ಯದಲ್ಲಿ ಸಿಎಂ ಬದಲಾವಣೆ ಚರ್ಚೆ: ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ದಿಷ್ಟು!

ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಬಂದು ಹೋದ ನಂತರ ರಾಜ್ಯದಲ್ಲಿ ಸಿಎಂ ಬದಲಾವಣೆ ಚರ್ಚೆ ಜೋರಾಗಿದ್ದು ಇದರ ಮಧ್ಯೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮಹತ್ವ ಹೇಳಿಕೆ ನೀಡಿದ್ದಾರೆ. 
ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ
ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ

ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಬಂದು ಹೋದ ನಂತರ ರಾಜ್ಯದಲ್ಲಿ ಸಿಎಂ ಬದಲಾವಣೆ ಚರ್ಚೆ ಜೋರಾಗಿದ್ದು ಇದರ ಮಧ್ಯೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮಹತ್ವ ಹೇಳಿಕೆ ನೀಡಿದ್ದಾರೆ. 

ಬೊಮ್ಮಾಯಿ ಅವರೇ ಸಿಎಂ ಆಗಿ ಮುಂದುವರಿಯುತ್ತಾರೆಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ರಾಜ್ಯದಲ್ಲಿ ಮೂರನೇ ಸಿಎಂ ಬರ್ತಾರೆಂದು ಕಾಂಗ್ರೆಸ್ ಮಾಡಿದ್ದ ಟ್ವೀಟ್ ಸಂಬಂಧ ಮಂತ್ರಾಲಯಕ್ಕೂ ತೆರಳುವ ಮುನ್ನ ಮಾತನಾಡಿದ ಅವರು ಸಿಎಂ ಬದಲಾವಣೆ ಕುರಿತ ಚರ್ಚೆಯಲ್ಲಿ ಯಾವುದೇ ಸತ್ಯಾಂಶ ಇಲ್ಲ. ಚುನಾವಣೆಗೆ 7-8 ತಿಂಗಳು ಇರುವಾಗ ಬದಲಾವಣೆ ಪ್ರಶ್ನೆ ಬರುವುದಿಲ್ಲ. ಮುಖ್ಯಮಂತ್ರಿ ಗಳಾಗಿ ಬೊಮ್ಮಾಯಿ ಅವ್ರೇ ಮುಂದುವರಿಯುತ್ತಾರೆ. ಅನಗತ್ಯವಾದ ಚರ್ಚೆ ಸರಿಯಲ್ಲ. ಯಾರೂ ಕೂಡ ಸಿಎಂ ಬದಲಾವಣೆ ಬಗ್ಗೆ ಚರ್ಚೆ ಮಾಡುವ ಅವಶ್ಯಕತೆಯೂ ಇಲ್ಲ. ಅಮಿತ್ ಷಾ ನನ್ನ ಬಳಿ ರಾಜ್ಯ ರಾಜಕಾರಣದ ಬಗ್ಗೆ ಚರ್ಚೆ ಮಾಡಿದ್ರು ಅಷ್ಟೇ. ಆದರೆ ನಾಯಕತ್ವದ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ. ಯಾರು ಏನೇ ಹೇಳಿದ್ರು ಆ ರೀತಿಯ ಬದಲಾವಣೆಗಿಳಿಲ್ಲ ಎಂದರು.

ಕಾಂಗ್ರೆಸ್ ಪಕ್ಷ ಮತ್ತೊಮ್ಮೆ ಅಧಿಕಾರಕ್ಕೆ ಬರದಂತೆ ನೋಡಿಕೊಳ್ಳುವುದೇ ನಮ್ಮ ಉದ್ದೇಶ. ನಾನು ಈಗಾಗಲೇ ವಿಧಾನಸಭೆ ಯಲ್ಲಿ ಹೇಳಿದ್ದೇನೆ,  ಯಾರೋ ಒಂದಿಬ್ಬರು ತಾವು ಮುಂದೆ ಮುಖ್ಯಮಂತ್ರಿ ಆಗ್ತೀವಿ ಅನ್ನೋ ಭ್ರಮೆ ನಲ್ಲಿದ್ದಾರೆ. ಆದರೆ ಅವರಿಗೆ ನಾವು ಅವಕಾಶ ಮಾಡಿಕೊಡುವುದಿಲ್ಲ. ನಿಶ್ಚಿತವಾಗಿ ಬಿಜೆಪಿಯವರೇ ಮುಂದಿನ ಮುಖ್ಯಮಂತ್ರಿಗಳಾಗ್ತಾರೆ. ನಾವೆಲ್ಲರೂ ಸಾಮೂಹಿಕವಾಗಿ ಪ್ರವಾಸ ಮಾಡಿ, ಅಧಿಕಾರಕ್ಕೆ ಬರಲು  135 ಸ್ಥಾನ ಗೆಲ್ತೇವೆ. ನಮಗೆ ನರೇಂದ್ರ ಮೋದಿಯಂತ ನಾಯಕ ಇರೋದ್ರಿಂದ ಕರ್ನಾಟಕದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರುವ ವಿಶ್ವಾಸ ನಮಗೆ ಇದೆ ಎಂದು ಕಾಂಗ್ರೆಸ್ ನಾಯಕರಾದ ಡಿಕೆಶಿ ಹಾಗೂ ಸಿದ್ದರಾಮಯ್ಯ ಗೆ ಟಾಂಗ್ ಕೊಟ್ಟರು.

ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿ,  ಹಜವಾಗಿಯೇ ಅವಧಿ ಮುಗಿದ ನಂತರ ರಾಜ್ಯಾಧ್ಯಕ್ಷರ ಬದಲಾವಣೆ ಆಗುತ್ತದೆ. ಅದರ ಬಗ್ಗೆ ಅಂತಿಮವಾಗಿ ಹೈಕಮಾಂಡ್ ತೀರ್ಮಾನ ಮಾಡಲಿದೆ ಎಂದರು. ಆದಷ್ಟು ಬೇಗ ಸಚಿವ ಸಂಪುಟ ವಿಸ್ತರಣೆ ಬಗ್ಗೆ ನಿರ್ಧಾರ ಆಗುತ್ತದೆ. ಇದಕ್ಕೆ ಹೈಕಮಾಂಡ್ ನಾಯಕರು ಕೂಡ ಸಹಕಾರ ಕೊಡ್ತಾರೆ. ಶಿಕಾರಿಪುರದಲ್ಲಿ ವಿಜಯೇಂದ್ರ ಸ್ಪರ್ಧೆ ಬಗ್ಗೆ ಹೇಳಿದ್ದೇನೆ. ಅಂತಿಮವಾಗಿ ಅವರ ಸ್ಪರ್ಧೆ ಬಗ್ಗೆ ತೀರ್ಮಾನ ಮಾಡೋದು ಹೈಕಮಾಂಡ್. ಆದರೆ ಅವರು ಶಿಕಾರಿಪುರ ಸ್ಪರ್ಧೆ ಬಗ್ಗೆ ಅಮಿತ್ ಷಾ ಜೊತೆ ನಾನು ಏನೂ ಚರ್ಚೆ ಮಾಡಿಲ್ಲ ಎಂದರು.

ಮಂತ್ರಾಲಯ ಪ್ರವಾಸ ಮುಗಿಸಿಕೊಂಡು ನಾಳೆ ಬರುತ್ತೇನೆ. ಮಂತ್ರಾಲಯ ದಿಂದ ಬಂದ ನಂತರ ರಾಜ್ಯ ಪ್ರವಾಸ ಮಾಡ್ತೀನಿ. ಯಾವುದೇ ಕಾರಣಕ್ಕೂ ಕಾಂಗ್ರೆಸ್ ಅಧಿಕಾರಕ್ಕೆ ಬರದ ರೀತಿ ನಾವು ನೋಡಿಕೊಳ್ತೇವೆ.  ಯಾರು ಸಿಎಂ ಕನಸು ಕಾಣ್ತಿದ್ದಾರೋ ಅದು ಅವರ ಭ್ರಮೆ ಅಷ್ಟೇ. ಯಾವುದೇ ಕಾರಣಕ್ಕೂ ಅವರ ಆಸೆ ಈಡೇರುವುದಿಲ್ಲ. ನೂರಕ್ಕೂ ನೂರರಷ್ಟು ನಾವು ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com