ಮಡಿಕೇರಿಯಲ್ಲಿ ಸಿದ್ದರಾಮಯ್ಯ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲು ಯತ್ನಿಸಲಾಗಿತ್ತು: ಎಂ ಲಕ್ಷ್ಮಣ್ ಗಂಭೀರ ಆರೋಪ
ಮೈಸೂರು: ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಕಾರಿಗೆ ಮೊಟ್ಟೆ ಎಸೆದಾಗ, ಚಾಕುವಿನಿಂದ ಚಾಕುವಿನಿಂದ ಹಲ್ಲೆಗೂ ಯತ್ನಿಸಲಾಗಿತ್ತು ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಶನಿವಾರ ಹೇಳಿದ್ದಾರೆ.
ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಹತ್ಯೆಗೆ ಮಡಿಕೇರಿಯಲ್ಲಿ ಪ್ಲ್ಯಾನ್ ಆಗಿತ್ತು. ಸಿದ್ದರಾಮಯ್ಯ ಅವರ ಮೇಲೆ ಚಾಕು ಎಸೆದಿದ್ದರು. ಆದರೆ ಅವರ ಸುತ್ತ ಭದ್ರತಾ ಸಿಬ್ಬಂದಿ ಇದ್ದ ಕಾರಣ ಯಾವುದೇ ಅಪಾಯ ಎದುರಾಗಲಿಲ್ಲ, ಈ ಘಟನೆಯ ಹಿಂದಿನ ಉದ್ದೇಶ ಸ್ಪಷ್ಟವಾಗಿದೆ ಎಂದು ಹೇಳಿದ್ದಾರೆ.
ವಾಹನದ ಮೇಲೆ ಮೊಟ್ಟೆ ಎಸೆದವನು ಆರ್ಎಸ್ಎಸ್ ಕಾರ್ಯಕರ್ತ. ಅವರ ತಂದೆ ಸುಂದರ ಮೂರ್ತಿ ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಸದಸ್ಯರಾಗಿದ್ದಾರೆ. ಸಂಪತ್ ಸಿವಿಲ್ ಗುತ್ತಿಗೆದಾರರಾಗಿದ್ದು, ಬಿಜೆಪಿ ಶಾಸಕ ಅಪ್ಪಚ್ಚು ರಂಜನ್ ಅವರಿಗೆ ಆಪ್ತರಾಗಿದ್ದಾರೆ. ಅಪ್ಪಚ್ಚು ರಾಜನ್ ಅವರ ಕಟ್ಟಡದ ಟೆರೇಸ್ನಲ್ಲಿ ಕಾಂಗ್ರೆಸ್ ಧ್ವಜ ಮತ್ತು ಶಾಲು ಹೊಂದಿರುವ ಸಂಪತ್ ಅವರ ಫೋಟೋ ತೆಗೆಯಲಾಗಿದೆ. ಸಂಪತ್ ಕಾಂಗ್ರೆಸ್ಸಿಗರಲ್ಲ, ನಾಪೋಕ್ಲು ಪ್ರದೇಶದ ಆರ್ಎಸ್ಎಸ್ ಕಾರ್ಯಕರ್ತ. ಈ ಪ್ರಕರಣ ಸಂಬಂಧ ನ್ಯಾಯಾಂಗ ತನಿಖೆಯಾಗಲಿ, ಅವರು ಆರ್ಎಸ್ಎಸ್ ಕಾರ್ಯಕರ್ತ ಎಂದು ಸಾಬೀತುಪಡಿಸಲು ಎಲ್ಲಾ ದಾಖಲೆಗಳನ್ನು ಒದಗಿಸುತ್ತೇನೆ ಎಂದು ಲಕ್ಷ್ಮಣ್ ತಿಳಿಸಿದ್ದಾರೆ.
ಕೊಡಗಿನ ಮತ್ತೋರ್ವ ಶಾಸಕ ಕೆ.ಜಿ.ಬೋಪಯ್ಯ ಅವರು ಬಿಜೆಪಿ ಹೈಕಮಾಂಡ್ನೊಂದಿಗೆ ಮಾತನಾಡಿರುವ ಆಡಿಯೋ ಕ್ಲಿಪ್ಪಿಂಗ್ಗಳು ತಮ್ಮ ಬಳಿ ಇವೆ ಎಂದು ಲಕ್ಷ್ಮಣ್ ಹೇಳಿದ್ದಾರೆ. ಸಿದ್ದರಾಮಯ್ಯ ಅವರ ಜನಪ್ರಿಯತೆಯನ್ನು ತಡೆಯಲು ನಡೆಸಿರುವ ಕುತಂತ್ರ, ನಾವು ಪಿರಿಯಾಪಟ್ಟಣದಲ್ಲಿದ್ದಾಗ, ತಮ್ಮ ಮೇಲೆ ಹಲ್ಲೆ ನಡೆಸುವ ಯೋಜನೆ ಇದೆ ಎಂದು ಮಾಹಿತಿ ನೀಡಲು ಸಿದ್ದರಾಮಯ್ಯನವರು ಕೊಡಗು ಪೊಲೀಸ್ ವರಿಷ್ಠಾಧಿಕಾರಿಗೆ 10 ಕ್ಕೂ ಹೆಚ್ಚು ಕರೆಗಳನ್ನು ಮಾಡಿದ್ದರು. ಆದರೆ ಎಸ್ಪಿ ಕರೆ ಸ್ವೀಕರಿಸಲಿಲ್ಲ, ವಾಪಸ್ ಕರೆಯನ್ನು ಮಾಡಲಿಲ್ಲ. ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆ, ಕಲ್ಲು ತೂರಾಟ ನಡೆದಿದೆ. ಇದು ಸಿದ್ದರಾಮಯ್ಯ ಅವರನ್ನು ಹತ್ಯೆ ಮಾಡಲು ಆರ್ಎಸ್ಎಸ್ ನಡೆಸಿದ ಸಂಘಟಿತ ದಾಳಿ ಎಂದು ಆರೋಪಿಸಿದರು.