ಪೂರ್ವ ತಯಾರಿ ಇಲ್ಲದೇಯೇ ಅಖಾಡಕ್ಕಿಳಿದ ಕಾಂಗ್ರೆಸ್: ರಾಹುಲ್ ಗಾಂಧಿ ಪರ ಪ್ರತಿಭಟನೆಗಿಲ್ಲ ಜನ ಬೆಂಬಲ!

ನಾನು ರಾಹುಲ್​ ಗಾಂಧಿಯವರ ಜತೆ ಅತ್ಯಂತ ಸಮೀಪದಿಂದ ಕೆಲಸ ಮಾಡಿದ್ದೇನೆ. ಅವರನ್ನು ನಾನು ಅತಿ ಹತ್ತಿರದಿಂದ ನೋಡಿದಂತೆ ಅವರು ಎಂದಿಗೂ ಭ್ರಷ್ಟರು ಎಂದು ಎನಿಸಲಿಲ್ಲ. ಅವರು ಭ್ರಷ್ಟರೂ ಅಲ್ಲ, ದುರಾಸೆಯ ವ್ಯಕ್ತಿಯೂ ಅಲ್ಲ. ಅವರನ್ನು ನ್ಯಾಷನಲ್​ ಹೆರಾಲ್ಡ್​ ಪ್ರಕರಣದಲ್ಲಿ ಈ ರೀತಿ ನಡೆಸಿಕೊಳ್ಳುತ್ತಿರುವ ರೀತಿ ಸರಿಯಲ್ಲ.
ರಾಹುಲ್ ಗಾಂಧಿ
ರಾಹುಲ್ ಗಾಂಧಿ

ಬೆಂಗಳೂರು: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ವಿಚಾರಣೆಗಾಗಿ ಜಾರಿ ನಿರ್ದೇಶನಾಲಯದಿಂದ ಸಮನ್ಸ್ ಪಡೆದಿರುವ ಪಕ್ಷದ ಹಿರಿಯ ನಾಯಕ ರಾಹುಲ್ ಗಾಂಧಿ ಅವರನ್ನು ಸಮರ್ಥಿಸಿಕೊಳ್ಳಲು ಮತ್ತು ಕೇಂದ್ರದ ವಿರುದ್ಧ ಪ್ರತಿಭಟಿಸಲು ಕಾಂಗ್ರೆಸ್ ನಾಯಕರು ಬೀದಿಗಿಳಿದು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

ನಾನು ರಾಹುಲ್​ ಗಾಂಧಿಯವರ ಜತೆ ಅತ್ಯಂತ ಸಮೀಪದಿಂದ ಕೆಲಸ ಮಾಡಿದ್ದೇನೆ. ಅವರನ್ನು ನಾನು ಅತಿ ಹತ್ತಿರದಿಂದ ನೋಡಿದಂತೆ ಅವರು ಎಂದಿಗೂ ಭ್ರಷ್ಟರು ಎಂದು ಎನಿಸಲಿಲ್ಲ. ಅವರು ಭ್ರಷ್ಟರೂ ಅಲ್ಲ, ದುರಾಸೆಯ ವ್ಯಕ್ತಿಯೂ ಅಲ್ಲ. ಅವರನ್ನು ನ್ಯಾಷನಲ್​ ಹೆರಾಲ್ಡ್​ ಪ್ರಕರಣದಲ್ಲಿ ಈ ರೀತಿ ನಡೆಸಿಕೊಳ್ಳುತ್ತಿರುವ ರೀತಿ ಸರಿಯಲ್ಲ. ರಾಹುಲ್​ ಗಾಂಧಿಯವರ ಹೆಸರಿಗೆ ಕಳಂಕ ತರಲು ಈ ರೀತಿ ಮಾಡಲಾಗುತ್ತಿದೆ. ವಿನಾಕಾರಣ ಅವರನ್ನು ಈ ಪ್ರಕರಣದಲ್ಲಿ ಎಳೆಯಲಾಗುತ್ತಿದೆ ಎಂದು ನಟಿ  ಹಾಗೂ ಮಾಜಿ ಸಂಸದೆ ರಮ್ಯಾ ಟ್ವೀಟ್ ಮಾಡಿದ್ದರು.

ತಮ್ಮ ನಾಯಕ ಕೇವಲ ಒಳ್ಳೆಯವನು ಎಂದು ಬಿಂಬಿಸಿದರೇ ಸಾಕುವುದಿಲ್ಲ. ಇದರಿಂದ ಸಹಾನುಭೂತಿ ದೊರೆಯಬಹುದು ಅಷ್ಟೇ. ಗುಜರಾತ್, ಹಿಮಾಚಲ ಪ್ರದೇಶ ಮತ್ತು ಕರ್ನಾಟಕದಲ್ಲಿ ಸದ್ಯದಲ್ಲಿಯೇ ಚುನಾವಣೆ ನಡೆಯಲಿದೆ. ಕಾಂಗ್ರೆಸ್ ನಾಯಕರು ಮಾಡುತ್ತಿರುವ ಪ್ರತಿಭಟನೆ ಪಕ್ಷದ ಪರವಾಗಿ ಕೆಲಸ ಮಾಡುವುದಿಲ್ಲ ಎಂದು ರಾಜಕೀಯ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಕಳೆದ 20 ದಿನಗಳಲ್ಲಿ ರಾಹುಲ್‌ ಗಾಂಧಿಗೆ ನೋಟಿಸ್ ಜಾರಿಯಾದಾಗಿನಿಂದ ಕಾಂಗ್ರೆಸ್ ಇಡಿ ಆರೋಪಗಳನ್ನು ತಳ್ಳಿಹಾಕುತ್ತಿದೆ? ಅವರು ಸಾಮಾಜಿಕ ಮಾಧ್ಯಮದಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಬಹುದಿತ್ತಲ್ಲವೇ? ತಮ್ಮ ನಾಯಕನ ಮೇಲೆ ಮಾಡಿರುವ ಆರೋಪಗಳ ಬಗ್ಗೆ  ಮೊದಲು ಜನರಿಗೆ ತಿಳಿಸಿದ್ದರೆ ಅರ್ಥವಾಗುತ್ತಿತ್ತು. ಇದೀಗ ಪಕ್ಷದ ಮುಖಂಡರು ಪ್ರತಿಭಟನೆ ನಡೆಸುತ್ತಿದ್ದರೂ, ರಾಹುಲ್ ವಿರುದ್ಧದ ಪ್ರಕರಣ ಮತ್ತು ಆರೋಪದ ಸಂಪೂರ್ಣ ಸತ್ಯಾಂಶಗಳು ಹಲವರಿಗೆ ತಿಳಿಯದ ಕಾರಣ ಸಾರ್ವಜನಿಕರು ಭಾಗವಹಿಸುತ್ತಿಲ್ಲ. ಅವರ ದೃಷ್ಟಿಕೋನವನ್ನು ವಿವರಿಸಲು ಪತ್ರಿಕೆ ಜಾಹೀರಾತುಗಳನ್ನು ನೀಡುವುದು ಸಹ ಸಹಾಯ ಮಾಡುತ್ತಿತ್ತು ಎಂದು ರಾಜಕೀಯ ವಿಶ್ಲೇಷಕ ಬಿಎಸ್ ಮೂರ್ತಿ ತಿಳಿಸಿದ್ದಾರೆ.

ಅಧಿಕಾರ ದುರುಪಯೋಗ ಮತ್ತು ಸೇಡಿನ ರಾಜಕಾರಣದ ವಿರುದ್ಧದ ಪ್ರತಿಭಟನೆ ಎಂದು ಕಾಂಗ್ರೆಸ್ ಇದನ್ನು ಬಿಂಬಿಸಬೇಕಿತ್ತು. ಸರಿಯಾದ ಹೋಮ್ ವರ್ಕ್ ಮಾಡದೇ, ಜನರಿಗೆ ತಿಳಿಸಲು ವಿಫಲವಾದ ಕಾರಣ ಪಕ್ಷವು ಅವಕಾಶವನ್ನು ಕಳೆದುಕೊಂಡಿದೆ.

ಈ ಕಾರಣದಿಂದಾಗಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿಲ್ಲ. ಈ ಪ್ರತಿಭಟನೆಗಳ ಬಗ್ಗೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಲು ಜನರು ಸಾಮಾಜಿಕ ಮಾಧ್ಯಮಗಳಿಗೆ ಹೋಗುತ್ತಿದ್ದಾರೆ. ಪಕ್ಷ ಮತ್ತು ಸಾರ್ವಜನಿಕರ ನಡುವಿನ ಸಂಪರ್ಕ ಕಡಿಮೆಯಾಗಿದೆ ಎಂದು ಮತ್ತೊಬ್ಬ ವಿಶ್ಲೇಷಕ ಪ್ರೊ. ಕಿರಣ್ ಗಾಜನೂರು ಅಭಿಪ್ರಾಯ ಪಟ್ಟಿದ್ದಾರೆ.

ರಾಹುಲ್ ಗಾಂಧಿ ಇಡಿ ವಿಚಾರಣೆಗೆ ಸಂಬಂಧಿಸಿದಂತೆ, ಕಳೆದ ಮೂರು ದಿನಗಳಿಂದ ಕಾಂಗ್ರೆಸ್ ನಾಯಕರ ಪ್ರತಿಭಟನೆಗೆ ಸಂಪೂರ್ಣ ಜನಬೆಂಬಲ  ಇಲ್ಲ ಎಂದು ಪ್ರಖ್ಯಾತ ಅಂಕಣಕಾರರೊಬ್ಬರು ತಮ್ಮ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com