ಧರ್ಮದ ಆಧಾರದ ಮೇಲೆ ಬಸ್ ನಿಲ್ದಾಣ ನಿರ್ಮಿಸಿಲ್ಲ, ಇದು ಅರಮನೆ ಮಾದರಿ: ಮೌನ ಮುರಿದ ರಾಮದಾಸ್

ಗುಂಬಜ್ ಮಾದರಿಯಲ್ಲಿ ಬಸ್​ ನಿಲ್ದಾಣ ನಿರ್ಮಾಣ ವಿವಾದಕ್ಕೆ ಸಂಬಂಧಿಸಿದಂತೆ ಕೊನೆಗೂ ಮೌನ ಮುರಿದಿರುವ ಬಿಜೆಪಿ ಶಾಸಕ ಎಸ್.ಎ.ರಾಮದಾಸ್ ಅವರು, ಪಾರಂಪರಿಕ ನಗರಿಯ ಮಹತ್ವ ಸಾರುವ ಉದ್ದೇಶದಿಂದ ಕೃಷ್ಣರಾಜ ಕ್ಷೇತ್ರದಲ್ಲಿ ಬಸ್...
ಬಸ್ ನಿಲ್ದಾಣ
ಬಸ್ ನಿಲ್ದಾಣ

ಮೈಸೂರು: ಗುಂಬಜ್ ಮಾದರಿಯಲ್ಲಿ ಬಸ್​ ನಿಲ್ದಾಣ ನಿರ್ಮಾಣ ವಿವಾದಕ್ಕೆ ಸಂಬಂಧಿಸಿದಂತೆ ಕೊನೆಗೂ ಮೌನ ಮುರಿದಿರುವ ಬಿಜೆಪಿ ಶಾಸಕ ಎಸ್.ಎ.ರಾಮದಾಸ್ ಅವರು, ಪಾರಂಪರಿಕ ನಗರಿಯ ಮಹತ್ವ ಸಾರುವ ಉದ್ದೇಶದಿಂದ ಕೃಷ್ಣರಾಜ ಕ್ಷೇತ್ರದಲ್ಲಿ ಬಸ್ ನಿಲ್ದಾಣಗಳನ್ನು ಅರಮನೆ ವಿನ್ಯಾಸದ ಮಾದರಿಯಲ್ಲಿ ನಿರ್ಮಿಸಲಾಗುತ್ತಿದೆಯೇ ಹೊರತು, ಯಾವುದೇ ಧರ್ಮದ ಆಧಾರದ ಮೇಲೆ ಅಲ್ಲ ಎಂದು ಮಂಗಳವಾರ ಸ್ಪಷ್ಟಪಡಿಸಿದ್ದಾರೆ.

ಗುಂಬಜ್ ವಿವಾದ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಇಂದು ಪ್ರಕಟಣೆ ನೀಡಿರುವ ರಾಮದಾಸ್ ಅವರು, ಈ
ವಿನ್ಯಾಸವನ್ನು ತಪ್ಪಾಗಿ ಅರ್ಥೈಸಿಕೊಂಡು ಮಸೀದಿಯಂತೆ ನಿರ್ಮಿಸಲಾಗುತ್ತಿದೆ ಹಾಗೂ ಗುತ್ತಿಗೆದಾರ ಮುಸ್ಲಿಂ ಎಂದೆಲ್ಲಾ ಸಾಮಾಜಿಕ ಜಾಲತಾಣದಲ್ಲಿ ಹಬ್ಬಿಸುವ ಹುನ್ನಾರ ಗಮನಕ್ಕೆ ಬಂದ ಕೂಡಲೇ ಸೂಕ್ತ ಕ್ರಮಕ್ಕಾಗಿ ನಗರ ಪೊಲೀಸ್ ಆಯುಕ್ತರಿಗೆ ಪತ್ರ ಬರೆದು ದೂರು ನೀಡಿದ್ದೇನೆ ಎಂದು ಹೇಳಿದ್ದಾರೆ.

ನಗರದಲ್ಲಿ ಈಗಾಗಲೇ ಹಲವೆಡೆ ಇದೇ ಮಾದರಿಯ ಬಸ್ ನಿಲ್ದಾಣಗಳಿವೆ. ಅದೇ ಮಾದರಿಯನ್ನು ನಾವೂ ಅನುಸರಿಸಿದ್ದೇವೆ. ಸಂಸದ ಪ್ರತಾಪ ಸಿಂಹ ಹೇಳಿಕೆ ನಂತರ ರಾತ್ರೋರಾತ್ರಿ ಕಳಶ ಅಳವಡಿಸಿಲ್ಲ. ಕಳೆದ ವಾರವೇ ಕಳಶ ಹಾಕಲಾಗಿದೆ. ಮಹದೇವ್ ಎಂಬ ಗುತ್ತಿಗೆದಾರ ಇದನ್ನು ನಿರ್ಮಿಸುತ್ತಿದ್ದಾರೆ. ಎಲ್‌ಇಡಿ ಪರದೆ ಅಳವಡಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳನ್ನೂ ತಿಳಿಸಲಾಗುವುದು. ಕಾಮಗಾರಿ ಪ್ರಗತಿಯಲ್ಲಿದೆ ಎಂದಿದ್ದಾರೆ.

ವಿನ್ಯಾಸವನ್ನು ಪರಿಶೀಲಿಸಿ ವರದಿ ಸಲ್ಲಿಸಲು ತಜ್ಞರ ಸಮಿತಿ ರಚಿಸುವಂತೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ವಿವಾದವಾಗಲಿದೆ ಎನ್ನುವುದು ಅಥವಾ ತಪ್ಪಿದೆ ಎಂಬುದನ್ನು ಸಮಿತಿಯು ಹೇಳಿದರೆ ಬದಲಾಯಿಸಲು ನಮ್ಮ ಅಭ್ಯಂತರವೇನಿಲ್ಲ ಎಂದು ರಾಮದಾಸ್ ಸ್ಪಷ್ಟಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com