ಹಳೆ ಮೈಸೂರು ಭಾಗದಲ್ಲಿ ಪ್ರಾಬಲ್ಯ ಸಾಧಿಸಲು ಬಿಜೆಪಿ ಹೆಜ್ಜೆ: ಆಡಳಿತ ಪಕ್ಷದ ಯತ್ನವನ್ನು ವಿಫಲಗೊಳಿಸಲು ಎಚ್‌ಡಿಕೆ ಕಸರತ್ತು

ಹಳೆ ಮೈಸೂರಿನತ್ತ ಇದೀಗ ಮೂರು ರಾಜಕೀಯ ಪಕ್ಷಗಳು ದೃಷ್ಠಿ ನೆಟ್ಟಿವೆ. ಅದರಲ್ಲೂ ಬಿಜೆಪಿ, ಆ ಭಾಗದಲ್ಲಿ ತನ್ನ ಪ್ರಾಬಲ್ಯ ಸಾಧಿಸಲು ಬೇಕಾದ ತಂತ್ರಗಳನ್ನು ಈಗಿನಿಂದಲೇ ಶುರುಮಾಡಿದೆ. ಒಕ್ಕಲಿಗರೇ ಅಧಿಕವಾಗಿರುವ ಹಳೆ ಮೈಸೂರಿನಲ್ಲಿ ಪ್ರಾಬಲ್ಯ ಸಾಧಿಸಲು ಬಿಜೆಪಿ, ಒಕ್ಕಲಿಗ ನಾಯಕನನ್ನು ನಿಯೋಜಿಸಿದೆ ಎಂದು ವರದಿಯಾಗಿದೆ.
ಎಚ್.ಡಿ. ಕುಮಾರಸ್ವಾಮಿ
ಎಚ್.ಡಿ. ಕುಮಾರಸ್ವಾಮಿ
Updated on

ಬೆಂಗಳೂರು: ಹಳೆ ಮೈಸೂರಿನತ್ತ ಇದೀಗ ಮೂರು ರಾಜಕೀಯ ಪಕ್ಷಗಳು ದೃಷ್ಠಿ ನೆಟ್ಟಿವೆ. ಅದರಲ್ಲೂ ಬಿಜೆಪಿ, ಆ ಭಾಗದಲ್ಲಿ ತನ್ನ ಪ್ರಾಬಲ್ಯ ಸಾಧಿಸಲು ಬೇಕಾದ ತಂತ್ರಗಳನ್ನು ಈಗಿನಿಂದಲೇ ಶುರುಮಾಡಿದೆ. ಒಕ್ಕಲಿಗರೇ ಅಧಿಕವಾಗಿರುವ ಹಳೆ ಮೈಸೂರಿನಲ್ಲಿ ಪ್ರಾಬಲ್ಯ ಸಾಧಿಸಲು ಬಿಜೆಪಿ, ಒಕ್ಕಲಿಗ ನಾಯಕನನ್ನು ನಿಯೋಜಿಸಿದೆ ಎಂದು ವರದಿಯಾಗಿದೆ. ಇದೇ ವೇಳೆ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ಮುಖಂಡ ಎಚ್‌ಡಿ ಕುಮಾರಸ್ವಾಮಿ ಆಡಳಿತ ಪಕ್ಷದ ಯತ್ನವನ್ನು ವಿಫಲಗೊಳಿಸಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

ಶನಿವಾರದಂದು ಚನ್ನಪಟ್ಟಣದಲ್ಲಿ ಎಂಎಲ್ಸಿ ಸಿ.ಪಿ. ಯೋಗೀಶ್ವರ್ ಅವರ ಮೇಲೆ ಜೆಡಿಎಸ್ ಕಾರ್ಯಕರ್ತರು ಹಲ್ಲೆ ನಡೆಸಿದ ಘಟನೆ ನಡೆದಿದೆ. ಯೋಗಿಶ್ವರ್ ಅವರು ರಸ್ತೆ ಕಾಮಗಾರಿಗೆ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಮುಂದಾದಾಗ ಕುಮಾರಸ್ವಾಮಿ ಅವರನ್ನು ಕಡೆಗಣಿಸಿದ್ದು, ಜೆಡಿಎಸ್ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ.

ಚನ್ನಪಟ್ಟಣ ಕ್ಷೇತ್ರದ ಗ್ರಾಮೀಣಾಭಿವೃದ್ಧಿಗೆ ಸಿಎಂ ವಿಶೇಷ ಅನುದಾನಕ್ಕಾಗಿ ಉಭಯ ನಾಯಕರು ಮುಖ್ಯಮಂತ್ರಿಗೆ ಮನವಿ ಮಾಡಿದ್ದರು. ಅದಕ್ಕಾಗಿ 50 ಕೋಟಿ ರೂ ಬಿಡುಗಡೆಯಾಗಿದ್ದು, ರಸ್ತೆ ಅಭಿವೃದ್ಧಿಗೆ ಕಾಮಗಾರಿ ಭೂಮಿ ಪೂಜೆ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಸಿ.ಪಿ ಯೋಗೇಶ್ವರ್ ಕೋರಿಕೆ ಮೇರೆಗೆ ಬಿಡುಗಡೆಯಾಗಿರುವ ವಿಶೇಷ ಅನುದಾನ ಎಂದು ಮುದ್ರಣವಾಗಿರುವುದು ಜೆಡಿಎಸ್ ಮುಖಂಡರ, ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಿದೆ. ಈ ಹಿಂದೆ ಯೋಗೇಶ್ವರ್ ಕ್ಷೇತ್ರದ ಶಾಸಕರಾಗಿದ್ದರು.

ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರಾಗಿ ಒಕ್ಕಲಿಗರೂ ಆದ ಡಾ. ಸಿ.ಎನ್.ಅಶ್ವತ್ಥ್ ನಾರಾಯಣ ಅವರನ್ನು ನೇಮಿಸಿದ್ದು ಆಡಳಿತ ಪಕ್ಷದ ಉದ್ದೇಶವೇನು ಎಂಬುದನ್ನು ಸ್ಪಷ್ಟವಾಗಿದೆ. ಬಿಜೆಪಿ ಸ್ವಲ್ಪ ಮಟ್ಟಿನ ಹಿಡಿತ ಸಾಧಿಸಲು, ಯೋಗಿಶ್ವರ್-ಅಶ್ವತ್ಥ್ ನಾರಾಯಣ ಇಬ್ಬರೂ ಸೇರಿ ಕಾಂಗ್ರೆಸ್ ಮತ್ತು ಜೆಡಿಎಸ್‌ನ ಪ್ರಬಲ ನಾಯಕರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ  ನಾಯಕತ್ವವನ್ನು ವಹಿಸಿಕೊಳ್ಳುವ ಸುಳಿವು ನೀಡಿದ್ದಾರೆ.

ಬಿಜೆಪಿ ನಾಯಕರಿಗೆ ಹಳೆ ಮೈಸೂರಿನತ್ತ ಮೊದಲಿನಿಂದಲೂ ಕಣ್ಣಿದೆ. ಹೇಗಾದರೂ ಮಾಡಿ ಈ ಭಾಗದಲ್ಲಿ ತಮ್ಮ ಪ್ರಾಬಲ್ಯ ಸಾಧಿಸಬೇಕೆನ್ನುವ ಬಯಕೆಯನ್ನಿಟ್ಟುಕೊಂಡೇ ಇಲ್ಲಿಯತನಕ ಬಂದಿದ್ದಾರೆ. ತಳಮಟ್ಟದಿಂದ ಪಕ್ಷ ಸಂಘಟನೆ ಮಾಡಿದರೂ ಪ್ರಭಾವಿ ಸಮುದಾಯದ ಅಥವಾ ಪ್ರಭಾವಿ ನಾಯಕರನ್ನು ಹುಟ್ಟು ಹಾಕವುದು ಬಿಜೆಪಿಗೆ ಕಷ್ಟವಾಗಿದೆ. ಈಗಾಗಲೇ ಕೆಲವೊಂದಿಷ್ಟು ನಾಯಕರಿದ್ದರೂ ತಮ್ಮೊಂದಿಗೆ ಇತರೆ ಕ್ಷೇತ್ರದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರುವಷ್ಟರ ಮಟ್ಟಿಗೆ ಬೆಳೆದವರು ವಿರಳ.

ಈ ಮಧ್ಯೆ, ಒಕ್ಕಲಿಗರೇ ಆಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ. ಸುರೇಶ್ ಅವರು ತಟಸ್ಥರಾಗಿದ್ದು, ಬಿಜೆಪಿಯ ಒಕ್ಕಲಿಗ ನಾಯಕರನ್ನು ನಿಭಾಯಿಸಲು ಕುಮಾರಸ್ವಾಮಿ ಅವರಿಗೆ ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ರಾಮನಗರ ಜಿಲ್ಲೆಯ ಕೆಲವು ಕ್ಷೇತ್ರಗಳಲ್ಲಿ ಶಿವಕುಮಾರ್ ಮತ್ತು ಕುಮಾರಸ್ವಾಮಿ ಪರಸ್ಪರ ಡೀಲ್ ಮಾಡಿಕೊಂಡರೂ ಆಶ್ಚರ್ಯವಿಲ್ಲ ಎಂದು ಮೂಲಗಳು ತಿಳಿಸಿವೆ.

ಇತ್ತೀಚೆಗಷ್ಟೇ ಸಮುದಾಯದ ಮುಖಂಡರು ಹಾಗೂ ಧಾರ್ಮಿಕ ಮುಖಂಡರ ಜತೆಗಿನ ಸಭೆಯಲ್ಲಿ ಶಿವಕುಮಾರ್ ಮತ್ತು ಕುಮಾರಸ್ವಾಮಿ ಇಬ್ಬರಿಗೂ ಸಿಎಂ ಸ್ಥಾನದ ವಿಚಾರದಲ್ಲಿ ಸೌಹಾರ್ದತೆ ಇರಬೇಕು ಎಂದು ಸೂಚನೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com