ತುಮಕೂರು: ಭಾರತ್ ಜೋಡೋ ಯಾತ್ರೆ (Bharat Jodo Yatra) ಇಂದು ಶನಿವಾರ ತುಮಕೂರು ಜಿಲ್ಲೆಯಲ್ಲಿ ಸಾಗುತ್ತಿದೆ. ಈ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ತುಮಕೂರಿನ ತುರುವೇಕೆರೆಯಲ್ಲಿರುವ ಕಾಸ್ಮೊ ಪಾಲಿಟನ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ಎಂದಿನಂತೆ ಬಿಜೆಪಿ, RSS ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನನ್ನ ತಿಳುವಳಿಕೆಯಲ್ಲಿ, RSS ಬ್ರಿಟಿಷರಿಗೆ ಸಹಾಯ ಮಾಡುತ್ತಿತ್ತು. ಸಾವರ್ಕರ್ ಬ್ರಿಟಿಷರಿಂದ ಸ್ಟೈಫಂಡ್ ಪಡೆಯುತ್ತಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ಬಿಜೆಪಿ ಎಲ್ಲೂ ಕಾಣಲಿಲ್ಲ. ಇಂತಹ ಕಹಿ ಸತ್ಯಗಳನ್ನು ಬಿಜೆಪಿ ಮುಚ್ಚಿಡಲು ಸಾಧ್ಯವಿಲ್ಲ. ಕಾಂಗ್ರೆಸ್ ಮತ್ತು ಅದರ ನಾಯಕರು ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದಾರೆ ಎಂದರು.
ಭಾರತವನ್ನು ಒಡೆಯುತ್ತಿರುವುದು ಬಿಜೆಪಿ, ಆರ್ಎಸ್ಎಸ್ ಎಂದು ಬಿಜೆಪಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು. ಸ್ವಾತಂತ್ರ್ಯಕ್ಕಾಗಿ ಕಾಂಗ್ರೆಸ್ಸಿಗರು ಸೇರಿದಂತೆ ಹಲವರ ಬಲಿದಾನವಾಗಿದೆ. ಸಾವರ್ಕರ್ ಸೇರಿದಂತೆ ಹಲವರು ಬ್ರಿಟಿಷರ ಜೊತೆ ನಿಂತಿದ್ದರು. ದೇಶದಲ್ಲಿ ಕೃಷಿ ಕ್ರಾಂತಿ, ಕೈಗಾರಿಕಾ ಕ್ರಾಂತಿ ಮಾಡಿದವರು ನಾವು. ಆದರೆ ಬಿಜೆಪಿ ಜನರ ನಡುವೆ ದ್ವೇಷ ಬಿತ್ತಿ ದೇಶ ಒಡೆಯುತ್ತಿದೆ. ಅದನ್ನು ಸರಿಪಡಿಸಲು ನಾವು ಐಕ್ಯತಾ ಯಾತ್ರೆ ಮಾಡುತ್ತಿದ್ದೇವೆ. ಭಾರತ್ ಐಕ್ಯತಾ ಯಾತ್ರೆಯಲ್ಲಿ ಲಕ್ಷಾಂತರ ಜನ ಭಾಗಿಯಾಗುತ್ತಿದ್ದಾರೆ. ಜೆಡಿಎಸ್ ಜೊತೆ ಒಪ್ಪಂದ ಬಗ್ಗೆ ರಾಜ್ಯ ನಾಯಕರ ಜತೆ ಚರ್ಚಿಸಬೇಕು. ಕರ್ನಾಟಕದಲ್ಲಿ JDS ಜೊತೆ ಹೊಂದಾಣಿಕೆ ಅಗತ್ಯವೇ ಬೀಳುವುದಿಲ್ಲ. ಚುನಾವಣೆಯಲ್ಲಿ ಯಾರ ಸಹಾಯವೂ ಇಲ್ಲದೆ ನಾವು ಗೆಲ್ಲುತ್ತೇವೆ ಎಂದರು.
ನರೇಂದ್ರ ಮೋದಿ ಈವರೆಗೆ ಒಂದೇ ಒಂದು ಸುದ್ದಿಗೋಷ್ಠಿ ಮಾಡಿಲ್ಲ
ರಾಜ್ಯದಲ್ಲಿ 40% ಸರ್ಕಾರದಿಂದ ಜನರ ಕಷ್ಟ ಅನುಭವಿಸುತ್ತಿದ್ದಾರೆ. ರೈತರು, ಬಡವರು, ನಿರುದ್ಯೋಗಿಗಳ ಕಷ್ಟ ಕೇಳುವವರೇ ಇಲ್ಲ. ಹೀಗಾಗಿ ಕರ್ನಾಟಕ ರಾಜ್ಯದ ಜನ ಬದಲಾವಣೆ ಬಯಸುತ್ತಿದ್ದಾರೆ. ನನ್ನನ್ನು ಅಪ್ರಯೋಜಕ ಎಂದು ಬಿಂಬಿಸಲು ಭಾರತೀಯ ಜನತಾ ಪಕ್ಷ ಕೋಟಿ ಕೋಟಿ ಹಣ ಖರ್ಚು ಮಾಡ್ತಿದೆ. ಬಿಜೆಪಿ ನನ್ನನ್ನು ನಿರಂತರವಾಗಿ ಹೀಯಾಳಿಸುವ ಕೆಲಸ ಮಾಡುತ್ತಿದೆ. ನಾನು ಕೆಲಸದಲ್ಲಿ ನಂಬಿಕೆ ಇಟ್ಟವನು. ಜನರ ನಡುವೆ ಓಡಾಡುವಾಗ ಅವರ ಕಷ್ಟ ನೋವು ಅರ್ಥವಾಗುತ್ತದೆ. ಭಾರತ್ ಜೋಡೋ ಯಾತ್ರೆಯಲ್ಲಿ ಒಳ್ಳೆಯ ಅನುಭವವಾಗುತ್ತಿದೆ. ಬಿಜೆಪಿ ನಾಯಕರಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ, ವಿಶ್ವಾಸವಿಲ್ಲ. ಬಿಜೆಪಿಯವರಿಗೆ ಪ್ರಶ್ನೆ ಕೇಳಲು ಪತ್ರಕರ್ತರಿಗೆ ಅವಕಾಶ ನೀಡಲ್ಲ. ನರೇಂದ್ರ ಮೋದಿ ಈವರೆಗೆ ಒಂದೇ ಒಂದು ಸುದ್ದಿಗೋಷ್ಠಿ ಮಾಡಿಲ್ಲ. ಆದರೆ ಕಾಂಗ್ರೆಸ್ ಪಕ್ಷ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟಿದೆ. ಹಾಗಾಗಿಯೇ ಸುದ್ದಿಗೋಷ್ಠಿಯಲ್ಲಿ ಅವಕಾಶ ಮಾಡಿಕೊಟ್ಟಿದೆ ಎಂದು ವಾಗ್ದಾಳಿ ನಡೆಸಿದರು.
ದ್ವೇಷ ಹರಡುವ ವ್ಯಕ್ತಿ ಯಾರು ಎಂಬುದು ಮುಖ್ಯವಲ್ಲ, ಅವರು ಯಾವ ಸಮುದಾಯದಿಂದ ಬಂದವರು ಎಂಬುದು ಮುಖ್ಯವಲ್ಲ, ದ್ವೇಷ ಮತ್ತು ಹಿಂಸಾಚಾರವನ್ನು ಹರಡುವುದು ದೇಶ ವಿರೋಧಿ ಕೃತ್ಯವಾಗಿದೆ. ಅಂತಹವರ ವಿರುದ್ಧ ನಾವು ಹೋರಾಡುತ್ತೇವೆ ಎಂದು ಪಿಎಫ್ಐ ಸಂಘಟನೆಯನ್ನು ನಿಷೇಧಿಸಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದರು.
ಹೊಸ ಶಿಕ್ಷಣ ನೀತಿಗೆ ವಿರೋಧ: ನಾವು ಹೊಸ ಶಿಕ್ಷಣ ನೀತಿಯನ್ನು ವಿರೋಧಿಸುತ್ತಿದ್ದೇವೆ. ಇದು ನಮ್ಮ ದೇಶದ ನೈತಿಕತೆಯ ಮೇಲಿನ ದಾಳಿಯಾಗಿದೆ, ನಮ್ಮ ಇತಿಹಾಸವನ್ನು ತಿರುಚುತ್ತದೆ. ಇದು ಕೆಲವೇ ಜನರ ಕೈಯಲ್ಲಿ ಅಧಿಕಾರವನ್ನು ಕೇಂದ್ರೀಕರಿಸುತ್ತದೆ. ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ವಿಕೇಂದ್ರೀಕೃತ ಶಿಕ್ಷಣ ವ್ಯವಸ್ಥೆ ನಮಗೆ ಬೇಕು ಎಂದರು.
ರಾಹುಲ್ ಗಾಂಧಿ ಸುದ್ದಿಗೋಷ್ಠಿಯಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಸುರ್ಜೇವಾಲ, ಕೆ.ಸಿ.ವೇಣುಗೋಪಾಲ್, ಡಾ.ಜಿ.ಪರಮೇಶ್ವರ್, ಕೆ.ಎನ್.ರಾಜಣ್ಣ ಭಾಗಿಯಾಗಿದ್ದರು. ಈ ಹಿಂದೆ ಭಾರತ್ ಜೋಡೋ ಯಾತ್ರೆ ವೇಳೆ ಕೇರಳದಲ್ಲಿ ಮೊದಲ ಬಾರಿ ಸುದ್ದಿಗೋಷ್ಠಿ ನಡೆಸಿದ್ದ ರಾಹುಲ್ ಗಾಂಧಿ ಇದೀಗ ಕರ್ನಾಟಕದಲ್ಲಿಯೂ ಸುದ್ದಿಗೋಷ್ಠಿ ನಡೆಸಿದರು.
Advertisement