ಚಿತ್ರದುರ್ಗ: ಚಿತ್ರದುರ್ಗದಲ್ಲಿ ಭಾರತ್ ಜೋಡೋ ಪಾದಯಾತ್ರೆ ವೇಳೆ ವಿಪಕ್ಷ ನಾಯಕ ಸಿದ್ದರಾಮಯ್ಯ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪನವರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಅವರಂತೆ ಕೀಳು ಅಭಿರುಚಿಯ ಮಾತುಗಳನ್ನು ನಾನು ಆಡಲ್ಲ, ಅಲ್ಲದೆ ಯಡಿಯೂರಪ್ಪರಿಂದ ಇಂತಾ ಮಾತುಗಳನ್ನು ನಿರೀಕ್ಷಿಸಿರಲಿಲ್ಲ, ಬಿಎಸ್ವೈಗೆ ವಯಸ್ಸಾಗಿರುವುದರಿಂದ ಆ ರೀತಿ ಮಾತಾಡ್ತಿದ್ದಾರೆ ಎಂದು ಹೇಳಿದ್ದಾರೆ. ಯಡಿಯೂರಪ್ಪ ರಾಹುಲ್ ಗಾಂಧಿ ಪಾದಕ್ಕೂ ಸಮ ಇಲ್ಲ ಎಂದು ನಾನು ಹೇಳಲ್ಲ ಎಂದು ತಿರುಗೇಟು ಕೊಟ್ಟಿದ್ದಾರೆ.
ಬಿಜೆಪಿಯ ಜನಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ್ದ ಬಿ ಎಸ್ ಯಡಿಯೂರಪ್ಪ, ಮೋದಿ ಪಾದದ ಧೂಳಿಗೂ ಸಿದ್ದರಾಮಯ್ಯ ಸಮನಲ್ಲ ಎಂದು ಹೇಳಿದ್ದರು. ಇದಕ್ಕೆ ಪಾದಯಾತ್ರೆ ವೇಳೆ ಚಿತ್ರದುರ್ಗದಲ್ಲಿ ಸಿದ್ದರಾಮಯ್ಯನವರಲ್ಲಿ ಮಾಧ್ಯಮ ಪ್ರತಿನಿಧಿಗಳು ಪ್ರತಿಕ್ರಿಯೆ ಕೇಳಿದಾಗ, ಯಡಿಯೂರಪ್ಪ ಮಟ್ಟಕ್ಕೆ ಹೋಗಿ ನಾನು ಮಾತನಾಡಲ್ಲ. ನೆಹರೂ ಪಾದಕ್ಕೂ ಮೋದಿ ಸಮಾನ ಅಲ್ಲ ಅಂತ ನಾನು ಹೇಳಕ್ಕಾಗುತ್ತಾ? ಪ್ರಧಾನ ಮಂತ್ರಿ ಅವರು. ಅದೇ ರೀತಿ ನೆಹರೂ ಕಾಲಿಗೂ ಯಡಿಯೂರಪ್ಪ ಸಮನಲ್ಲ ಅಂತಾ ಹೇಳಬಹುದಲ್ವಾ? ಆದರೆ ನಾನು ಅವರಿಗೆ ಆ ರೀತಿ ಹೇಳಲ್ಲ. ಅದು ಕೀಳು ಅಭಿರುಚಿ. ಸಿಎಂ ಆದವರು ಆ ತರಹ ಮಾತನಾಡಬಾರದು ಎಂದು ಕಿಡಿಕಾರಿದರು.
ರಾಹುಲ್ ಗಾಂಧಿ ಒಬ್ಬ ಬಚ್ಚಾ ಎಂಬ ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿ, ಯಡಿಯೂರಪ್ಪ ಇಷ್ಟೊಂದು ಕೀಳುಮಟ್ಟಕ್ಕೆ ಇಳಿದು ಮಾತನಾಡುತ್ತಾರೆ ಎಂದು ಅಂದುಕೊಂಡಿರಲಿಲ್ಲ. ಯಡಿಯೂರಪ್ಪನವರಿಗೆ ವಯಸ್ಸಾಗಿದೆ. ಅದಕ್ಕಾಗಿ ಅವರಿಗೆ ಬಹುಶಃ ಅರಳೋ ಮರುಳೋ ಆಗಿದೆ. ಹೀಗಾಗಿ ಈ ರೀತಿ ಮಾತಾಡುತ್ತಿದ್ದಾರೆ ಎಂದು ಟೀಕಿಸಿದರು.
Advertisement