ಬೆಂಗಳೂರು: PFI ನಿಷೇಧ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಸಿದ್ದರಾಮಯ್ಯ RSS ಅನ್ನು ಕೂಡ ನಿಷೇಧಿಸಲಿ ಎಂದು ಹೇಳಿದ್ದಾರೆ.
PFI ನಿಷೇಧ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, 'ಸಮಾಜದಲ್ಲಿ ಅಶಾಂತಿ ಉಂಟು ಮಾಡುವವರ ವಿರುದ್ಧ ಕ್ರಮ ಕೈಗೊಂಡರೆ ನಮ್ಮ ವಿರೋಧ ಇಲ್ಲ. ಯಾವುದೇ ಸಂಘಟನೆಯಾದರೂ ನಿಷೇಧಿಸಬೇಕು. ಆರೆಸ್ಸೆಸ್ನವರೂ ಸಮಾಜದಲ್ಲಿ ಶಾಂತಿ ಹಾಳು ಮಾಡುತ್ತಿದ್ದಾರೆ. ಅವರ ಮೇಲೂ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
‘ಯಾರು ಸಮಾಜದಲ್ಲಿ ಕಂಟಕ ಮಾಡುತ್ತಾರೊ ಅವರ ವಿರುದ್ಧ ಕ್ರಮ ತೆಗೆದುಕೊಂಡರೆ ನಮ್ಮ ಅಭ್ಯಂತರವಿಲ್ಲ. ಶಾಂತಿ ಹಾಳು ಮಾಡುತ್ತಿದ್ದವರ ಮೇಲೆ ಕ್ರಮ ಜರುಗಿಸಲಿ. ನಾನು ಆಗಲೂ ಹೇಳುತ್ತಿದ್ದೆ. ಈಗಲೂ ಹೇಳುತ್ತಿದ್ದೇನೆ. ದ್ವೇಷದ ರಾಜಕಾರಣ ಮಾಡಿದರೆ ಕ್ರಮ ಜರುಗಿಸಲಿ ಎಂದು ಹೇಳಿದ್ದಾರೆ.
ಇದೇ ವಿಚಾರವಾಗಿ ಟ್ವೀಟ್ ಕೂಡ ಮಾಡಿರುವ ಅವರು, 'ಕಾನೂನು ಬಾಹಿರ ಕೃತ್ಯಗಳಲ್ಲಿ ತೊಡಗಿರುವ ಸಂಸ್ಥೆಗಳು ಹಿಂದು,ಮುಸ್ಲಿಮ್ ಯಾರದ್ದೇ ಆಗಿರಲಿ ಮುಲಾಜಿಲ್ಲದೆ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಹೇಳುತ್ತಲೇ ಬಂದಿದ್ದನ್ನು ಪುನರುಚ್ಚರಿಸುತ್ತೇನೆ. ಜಾತಿ, ಧರ್ಮಗಳ ಆಧಾರದ ಪಕ್ಷಪಾತ, ಪೂರ್ವಗ್ರಹಗಳಿಂದ ಸರ್ಕಾರ ವರ್ತಿಸಬಾರದು ಎನ್ನುವುದಷ್ಟೇ ನನ್ನ ಸಲಹೆ ಎಂದು ಟ್ವೀಟ್ ಮಾಡಿದ್ದಾರೆ.
‘ನುಡಿದಂತೆ ಪಿಎಫ್ಐ ಸಂಘಟನೆಯನ್ನು ನಿಷೇಧಿಸಿದ್ದೇವೆ’ ಎಂಬ ಬಿಜೆಪಿ ಟ್ವೀಟ್ಗೆ ಪ್ರತಿಕ್ರಿಯಿಸಿರುವ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ‘ಪಿಎಫ್ಐ ಜೊತೆಗೆ ಒಂದೇ ನಾಣ್ಯದ ಇನ್ನೊಂದು ಮುಖ ಆಗಿರುವ ಆರೆಸ್ಸೆಸ್ ವಿರುದ್ಧ ಬಿಜೆಪಿ ಯಾವಾಗ ಕ್ರಮಕೈಗೊಳುತ್ತದೆ? ಎಲ್ಲ ರೀತಿಯ ಕೋಮುವಾದ ಮತ್ತು ದ್ವೇಷ ಸಮಾಜದ ರಚನೆ ಹಾನಿಕಾರಕ. ಅದನ್ನು ನಿಗ್ರಹಿಸುವ ಕೆಲಸ ಆಗಬೇಕು’ ಎಂದು ಆಗ್ರಹಿಸಿದ್ದಾರೆ.
Advertisement