ಬೆಂಗಳೂರು: ಮೇ 10 ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗಾಗಿ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಬಿಎಸ್ ಯಡಿಯೂರಪ್ಪ ಅವರನ್ನು ಹೊರಗಿಟ್ಟು ಅಮಿತ್ ಶಾ, ಜೆಪಿ ನಡ್ಡಾ ಸಭೆ ನಡೆಸಿದ್ದಾರೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್, ಮಾಜಿ ಮುಖ್ಯಮಂತ್ರಿ ಬಿಜೆಪಿ ಬಳಸಿ ಬಿಸಾಡುವ ಟಿಶ್ಯೂ ಪೇಪರ್ ಆಗಿದ್ದಾರೆ ಎಂದು ವ್ಯಂಗ್ಯವಾಡಿದೆ.
ಯಡಿಯೂರಪ್ಪ ಅವರನ್ನೇ ಹೊರಗಿಟ್ಟು ಇತರೇ ರಾಜ್ಯ ನಾಯಕರೊಂದಿಗೆ ಸಭೆ ನಡೆಸಿದ್ದು ಲಿಂಗಾಯತ ಸಮುದಾಯದ ಹಿರಿಯ ನಾಯಕನಿಗೆ ಮಾಡಿದ ಘೋರ ಅವಮಾನವಾಗಿದೆ. ಕರ್ನಾಟಕದಲ್ಲಿ ಬಿಜೆಪಿ ಕಟ್ಟಿದ ಬಿಎಸ್ ಯಡಿಯೂರಪ್ಪ ಅವರಿಗೆ ಸಭೆಯಲ್ಲಿ ಕುರ್ಚಿ ಇರಲಿಲ್ಲವೇ? ಟಿಕೆಟ್ ನಿರ್ಧರಿಸುವ ಸ್ವತಂತ್ರವಿಲ್ಲವೇ? ಎಂದು ರಾಜ್ಯ ಬಿಜೆಪಿಯನ್ನು ಪ್ರಶ್ನಿಸಿದೆ.
ಬಿಜೆಪಿಗೆ ಯಡಿಯೂರಪ್ಪ ಬೇಕಿರುವುದು ಓಟು ಗಳಿಕೆಗೆ ಮುಖ ತೋರಿಸಲು ಮಾತ್ರ, ಟಿಕೆಟ್ ಹಂಚಿಕೆ ಸಭೆಗೆ ಬಿಎಸ್ ವೈ ಹೊರಗೆ, ಪ್ರಹ್ಲಾದ್ ಜೋಶಿ, ಬಿ.ಎಲ್. ಸಂತೋಷ್, ಸಿ.ಟಿ ರವಿ, ಕಟೀಲ್ ಒಳಗೆ! ಬಿಎಸ್ ವೈ ಅವರಿಗೆ ಈಗ ಮಾರ್ಗದರ್ಶಕ ಮಂಡಳಿಯೂ ಇಲ್ಲ, ಬಿಜೆಪಿಗೆ ಮಾರ್ಗದರ್ಶನ ಬೇಕಿಲ್ಲ. ಯಡಿಯೂರಪ್ಪ ಅವರ ರಾಜಕೀಯ ಬದುಕಿಗೆ ಬಿಜೆಪಿ ದುರಂತ ಅಂತ್ಯ ತೋರಿಸುತ್ತಿದೆ ಎಂದು ಟೀಕಾ ಪ್ರಹಾರ ನಡೆಸಿದೆ.
ಯಡಿಯೂರಪ್ಪ ಇರಬೇಕಾದ ಜಾಗದಲ್ಲಿ ಪ್ರಯತ್ನಪೂರ್ವಕವಾಗಿ ಪ್ರಹ್ಲಾದ್ ಜೋಷಿ ಅವರನ್ನು ಬಿಜೆಪಿ ತಂದು ಕೂರಿಸುತ್ತಿದೆ. ಟಿಕೆಟ್ ಹಂಚಿಕೆ ಸಭೆಯಲ್ಲಿ ಬಿಎಸ್ ವೈ ಮಾತಿಗೆ ಮನ್ನಣೆ ಕೊಡುವುದರಲ್ಲಿ ಕನಿಷ್ಠ ಹಾಜರಿಗೂ ಅವಕಾಶ ಕೊಡಲಿಲ್ಲ. ಬಿಎಸ್ ವೈರಿಗೆ ನಿರಂತರ ಅವಮಾನ ಮಾಡಿದ ಬಿಜೆಪಿ ಅವರನ್ನು ಡಸ್ಟ್ ಬಿನ್ ನಲ್ಲಿ ಬಿದ್ದಿರುವ ಕಸದಂತೆ ನಡೆಸಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
Advertisement