ನವದೆಹಲಿ/ಬೆಂಗಳೂರು: ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಶರದ್ ಪವಾರ್ ನೇತೃತ್ವದ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್ಸಿಪಿ) 40-45 ಸ್ಥಾನಗಳಲ್ಲಿ ಸ್ಪರ್ಧಿಗಿಳಿಯಲು ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.
ಮೇ 10 ರಂದು ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆಗೆ ತನ್ನ ಯೋಜನೆಗಳನ್ನು ಅಂತಿಮಗೊಳಿಸಲು ಶರದ್ ಪವಾರ್ ಅವರು, ಶನಿವಾರ ಮುಂಬೈನಲ್ಲಿ ಪಕ್ಷದ ನಾಯಕರ ಸಭೆ ಕರೆದಿದ್ದಾರೆ.
ಚುನಾವಣೆಗೆ ಯೋಜನೆಗಳ ಕುರಿತು ನಿರ್ಧಾರ ಕೈಗೊಳ್ಳಲು ನಾಳೆ ಮುಂಬೈನಲ್ಲಿ ಸಭೆ ನಡೆಸಲಾಗುತ್ತಿದೆ ಎಂದು ಪವಾರ್ ಅವರು ಹೇಳಿದ್ದಾರೆ.
ಗೋವಾ, ಮೇಘಾಲಯ ಮತ್ತು ಮಣಿಪುರದಂತಹ ರಾಜ್ಯಗಳಲ್ಲಿ ಎನ್ಸಿಪಿಯ ರಾಜಕೀಯ ಭವಿಷ್ಯ ಕ್ಷೀಣಿಸಿದೆ. ಇದರ ಪರಿಣಾಮ ಇತ್ತೀಚೆಗೆ ರಾಷ್ಟ್ರೀಯ ಪಕ್ಷದ ಸ್ಥಾನಮಾನವನ್ನು ಎನ್ಸಿಪಿ ಕಳೆದುಕೊಂಡಿದೆ. ಇದನ್ನು ಮರಳಿ ಪಡೆಯುವ ಯತ್ನದ ಭಾಗವಾಗಿ ಕರ್ನಾಟಕ ಚುನಾವಣೆಯತ್ತ ಪಕ್ಷವು ಚಿತ್ತ ನೆಟ್ಟಿದೆ ಎಂದು ತಿಳಿದುಬಂದಿದೆ.
ಇಷ್ಟೇ ಅಲ್ಲ, ಕರ್ನಾಟಕ ವಿಧಾನಸಭೆ ಚುನಾವಣೆಗೆ 'ಅಲಾರಾಂ ಗಡಿಯಾರ' ಚಿಹ್ನೆಯನ್ನು ಹಂಚಿಕೆ ಮಾಡಲು ಎನ್ಸಿಪಿ ಚುನಾವಣಾ ಆಯೋಗಕ್ಕೆ ಪತ್ರ ಬರೆದಿತ್ತು. ಇದಕ್ಕೆ ಚುನಾವಣಾ ಆಯೋಗ ಕೂಡ ಸಮ್ಮತಿಸಿದೆ.
ರಾಜ್ಯಾದ್ಯಂತ ಒಟ್ಟು 224 ಸ್ಥಾನಗಳ ಪೈಕಿ ಕನಿಷ್ಠ 40-45 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಹಾಕಲು ಎನ್ಸಿಪಿ ಮುಂದಾಗಿದೆ. ಮರಾಠಿ ಮಾತನಾಡುವ ಜನಸಂಖ್ಯೆ ಮಹಾರಾಷ್ಟ್ರ-ಕರ್ನಾಟಕ ಗಡಿ ಪ್ರದೇಶದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿಗೆ ಬೆಂಬಲ ನೀಡಲು ಸಹ ಪಕ್ಷವು ಯೋಜಿಸುತ್ತಿದೆ ಎಂದು ಎನ್ಸಿಪಿ ನಾಯಕರೊಬ್ಬರು ತಿಳಿಸಿದ್ದಾರೆ.
ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ಪ್ರತಿಪಕ್ಷಗಳ ಒಗ್ಗಟ್ಟಿನ ಕುರಿತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರನ್ನು ಭೇಟಿಯಾದ ಒಂದು ದಿನದ ನಂತರ ಶರದ್ ಪವಾರ್ ಕರ್ನಾಟಕದಲ್ಲಿ ಸ್ಪರ್ಧಿಸುವ ಯೋಜನೆ ಬಗ್ಗೆ ಬಹಿರಂಗ ಪಡಿಸಿದ್ದಾರೆ. ಮತ್ತೊಂದೆಡೆ, 2014ರ ಲೋಕಸಭಾ ಚುನಾವಣೆಯಲ್ಲಿ ಸೋತ ನಂತರ ತನ್ನ ಚುನಾವಣಾ ಕಾರ್ಯಕ್ಷಮತೆ ಹೆಚ್ಚಿಸುವ ಹಂಬಲದಲ್ಲಿರುವ ಕಾಂಗ್ರೆಸ್ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ದೊಡ್ಡ ಗೆಲುವಿನ ಭರವಸೆಯನ್ನು ಇಟ್ಟುಕೊಂಡಿದೆ.
Advertisement