ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಎರಡೂ ರಾಷ್ಟ್ರೀಯ ಪಕ್ಷಗಳಿಗೂ ‘ನರ್ವಸ್ 90’ ಸಿಂಡ್ರೋಮ್‌: ಬಂಡಾಯ ಶಮನ ಮಾಡುವ ಪಾರ್ಟಿಗೆ ಗೆಲುವಿನ ಅವಕಾಶ ಹೆಚ್ಚು!

ಕರ್ನಾಟಕ ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ಟಿಕೆಟ್ ಹಂಚಿಕೆ ಬೆನ್ನಲ್ಲೇ ಕಾಂಗ್ರೆಸ್ ಮತ್ತು ಬಿಜೆಪಿ ಪಾಳಯದಲ್ಲಿ ಎದ್ದಿರುವ ಬಂಡಾಯ ನೋಡಿದರೆ ಈ ಬಾರಿ ಕೂಡ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಸಿಗಲಾರದು ಎಂದು ಬಹುತೇಕ ಮಂದಿ ಮಾತನಾಡಿಕೊಳ್ಳುತ್ತಿದ್ದಾರೆ.
Published on

ಬೆಂಗಳೂರು: ಕರ್ನಾಟಕ ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ಟಿಕೆಟ್ ಹಂಚಿಕೆ ಬೆನ್ನಲ್ಲೇ ಕಾಂಗ್ರೆಸ್ ಮತ್ತು ಬಿಜೆಪಿ ಪಾಳಯದಲ್ಲಿ ಎದ್ದಿರುವ ಬಂಡಾಯ ನೋಡಿದರೆ ಈ ಬಾರಿ ಕೂಡ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಸಿಗಲಾರದು ಎಂಬುದು ಬಹುತೇಕ ಮಂದಿಯ ಅಭಿಪ್ರಾಯ. ಆದರೆ ರಾಜಕೀಯ ವಿಶ್ಲೇಷಕರು ಮತ್ತು ತಜ್ಞರು ಹೇಳುವ ಪ್ರಕಾರ ಎರಡೂ ಪಕ್ಷಗಳು ಭಿನ್ನಮತೀಯರ ಅಸಮಾಧಾನವನ್ನು, ಬಂಡಾಯವನ್ನು ಯಾವ ರೀತಿ ಶಮನ ಮಾಡುತ್ತದೆ ಎಂಬುದರ ಮೇಲೆ ಪಕ್ಷದ ಚುನಾವಣಾ ಫಲಿತಾಂಶ ಭವಿಷ್ಯ ನಿರ್ಧಾರವಾಗಲಿದೆ. 

ಎರಡೂ ರಾಷ್ಟ್ರೀಯ ಪಕ್ಷಗಳು ‘ನರ್ವಸ್ 90’ ಸಿಂಡ್ರೋಮ್‌ ಗೆ ಸಿಕ್ಕಿಹಾಕಿಕೊಂಡಿದ್ದು, ಈ ಬಾರಿ ಚುನಾವಣೆಯಲ್ಲಿ 113 ಸ್ಥಾನಗಳ ಅರ್ಧದಷ್ಟು ಗಡಿಯನ್ನು ದಾಟಲು ವಿಫಲವಾಗುತ್ತವೆ ಎಂದು ಕೆಲವು ಸಮೀಕ್ಷೆಗಳ ವರದಿಗಳು ಹೇಳುತ್ತವೆ.

ಈ ಬಾರಿ ಕರ್ನಾಟಕ ಜನತೆ ಮುಂದಿರುವ ಆಯ್ಕೆಗಳು ನೇರವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ. ನಂತರದಲ್ಲಿ ಜೆಡಿಎಸ್ ಇದೆ. ಮುಂದಿನ 20 ದಿನಗಳಲ್ಲಿ ಆಗುವ ಬೆಳವಣಿಗೆಗಳನ್ನು ಅವಲಂಬಿಸಿ ಚುನಾವಣೆಯ ದಿನದ ಮೊದಲು ಪರಿಸ್ಥಿತಿ ಬದಲಾಗಬಹುದು ಎಂದು ರಾಜಕೀಯ ವಿಶ್ಲೇಷ ಪ್ರೊ ಸಂದೀಪ್ ಶಾಸ್ತ್ರಿ ಹೇಳುತ್ತಾರೆ.

ಅತಂತ್ರ ಚುನಾವಣಾ ಫಲಿತಾಂಶ ಬರುವುದು ವಿಶೇಷ ಸಂದರ್ಭಗಳಲ್ಲಿ. ಈ ಬಾರಿ ರಾಜ್ಯ ರಾಜಕೀಯ ಪರಿಸ್ಥಿತಿ ವಿಚಿತ್ರವಾಗಿದೆ, ವಿಭಿನ್ನವಾಗಿದೆ ಎಂದು ನನಗೆ ಅನಿಸುವುದಿಲ್ಲ, ಈ ಬಾರಿ ಬಿಜೆಪಿ ಅಥವಾ ಕಾಂಗ್ರೆಸ್ ಗೆ ಸ್ಪಷ್ಟ ಬಹುಮತ ಸಿಗಬಹುದು ಎಂದು ಅನಿಸುತ್ತಿದೆ. ವಾಸ್ತವವಾಗಿ ಬಂಡಾಯವೆದ್ದವರನ್ನು ನಿಯಂತ್ರಿಸುವ ಪಕ್ಷಗಳು ಗೆಲ್ಲುವ ಸಾಧ್ಯತೆಗಳು ಮತ್ತು ಅವಕಾಶಗಳು ಹೆಚ್ಚಾಗಿರುತ್ತವೆ ಎಂದರು.

ಕಾಂಗ್ರೆಸ್ ನಲ್ಲಿ ಬಂಡಾಯಕ್ಕೆ ವಿಶೇಷ ಒತ್ತು ನೀಡುವ ಅಗತ್ಯವಿಲ್ಲ.ಈ ಬಾರಿ ಅತಂತ್ರ ವಿಧಾನಸಭೆ ಚುನಾವಣಾ ಫಲಿತಾಂಶ ಬರುವುದಿಲ್ಲ ಎಂದು ಕಾಂಗ್ರೆಸ್ ನಾಯಕ ಬಿ ಕೆ ಹರಿಪ್ರಸಾದ್ ಹೇಳುತ್ತಾರೆ. ಬಿಜೆಪಿ ನಾಯಕ ಸಿಎನ್ ಅಶ್ವಥ್ ನಾರಾಯಣ್, ಚುನಾವಣಾ ಪ್ರಚಾರ ಆರಂಭವಾದ ಬಳಿಕ ಬಿಜೆಪಿಯಲ್ಲಿನ ಬಂಡಾಯ ಶಮನವಾಗಲಿದೆ. ಪಕ್ಷದ ಅಭ್ಯರ್ಥಿಯ ವಿರುದ್ಧ ಸ್ವತಂತ್ರವಾಗಿ ಸ್ಪರ್ಧಿಸುವ ಯಾವುದೇ ನಾಯಕರಿಲ್ಲ, ಅಂತಹ ನಾಯಕರನ್ನು ಜನರು ಸೋಲಿಸುತ್ತಾರೆ ಎಂದು ಹೇಳಿದರು.

ಆದರೆ ನಾಯಕರ ಬಂಡಾಯವು ಪಕ್ಷಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ, ಕೆಲವು ಪ್ರಮುಖ ನಾಯಕರು ಸ್ಪರ್ಧಿಸುವ ಧೈರ್ಯವನ್ನು ಹೊಂದಿದ್ದಾರೆ. ಚಿತ್ರದುರ್ಗದಲ್ಲಿ ಮಾಜಿ ಎಂಎಲ್‌ಸಿ ರಘು ಆಚಾರ್, ಕಡೂರಿನಲ್ಲಿ ವೈಎಸ್‌ವಿ ದತ್ತ, ಕಲಘಟಗಿಯಲ್ಲಿ ನಾಗರಾಜ್ ಚೆಬ್ಬಿ ಅವರಂತಹ ನಾಯಕರು ಕಾಂಗ್ರೆಸ್ ತೊರೆದಿದ್ದಾರೆ. ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಶಾಸಕರಾದ ನೆಹರು ಓಲೇಕಾರ, ಎಂಪಿ ಕುಮಾರಸ್ವಾಮಿ, ಎಂಎಲ್‌ಸಿ ಆರ್‌ ಶಂಕರ್‌, ಮಾಜಿ ಸಚಿವ ಸೊಗಡು ಶಿವಣ್ಣ ಸೇರಿದಂತೆ ಹಲವರು ಬಿಜೆಪಿ ಪಕ್ಷ ತೊರೆದು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತೇವೆ ಇಲ್ಲವೇ ಬೇರೆ ಪಕ್ಷದ ಜೊತೆ ಸೇರಿ ಕಣಕ್ಕಿಳಿಯುವುದಾಗಿ ಘೋಷಿಸಿರುವುದು ಪಕ್ಷಗಳಿಗೆ ಹಿನ್ನಡೆಯಾಗಬಹುದು. 

ಸೊಗಡು ಶಿವಣ್ಣ, ನೆಹರು ಓಲೇಕಾರ ಸೇರಿದಂತೆ ಬಂಡಾಯಗಾರರ ಮೇಲೆ ಕಣ್ಣಿಟ್ಟಿರುವ ಜೆಡಿಎಸ್‌ಗೆ ಕಿಂಗ್ ಮೇಕರ್ ಆಗಲು ಸುಲಭವಾಗಬಹುದು. ಮುಂದಿನ ದಿನಗಳಲ್ಲಿ ಜೆಡಿಎಸ್ ಸೇರುವ ನಾಯಕರ ಪಟ್ಟಿ ನಮ್ಮ ಬಳಿ ಇದೆ ಎಂದು ಪಕ್ಷದ ಮುಖಂಡರೊಬ್ಬರು ಹೇಳುತ್ತಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Advertisement

X
Kannada Prabha
www.kannadaprabha.com