ರಾಜಕೀಯವಾಗಿ ತುಳಿಯುವ ಉದ್ದೇಶದಿಂದ ಸಂಚು; ನನ್ನ ವಿರುದ್ದದ ಷಡ್ಯಂತ್ರಗಳಿಗೆ ಫಲ ಸಿಗುವುದಿಲ್ಲ: ಚಲುವರಾಯಸ್ವಾಮಿ

ಇಂತಹ ಸಂದರ್ಭದಲ್ಲಿ ನನಗೆ ಮತ್ತಷ್ಟು ಹೆಸರು ಬರುವುದೆಂಬ ಭಯ ಮತ್ತು ಹತಾಶೆಯಿಂದ ಕೆಲವರು ಈ ಷಡ್ಯಂತ್ರದ ರಾಜಕಾರಣ ನಡೆಸುತ್ತಿದ್ದಾರೆ. ಸತ್ಯಕ್ಕೆ ದೂರವಾಗಿರುವ  ಅವರ ಈ ಯಾವ ಕುತಂತ್ರಗಳು ಫಲ ನೀಡುವುದಿಲ್ಲ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ. 
ಚಲುವರಾಯಸ್ವಾಮಿ
ಚಲುವರಾಯಸ್ವಾಮಿ
Updated on

ಬೆಂಗಳೂರು: ಕೃಷಿ ಖಾತೆಯ ಸಚಿವನಾಗಿ ರಾಜ್ಯದಲ್ಲಿ ಮಾಡಬಹುದಾದ ಬಹಳಷ್ಟು ಕೆಲಸವಿದ್ದು ಆ ಬಗ್ಗೆ ನನಗೆ ನನ್ನದೇ ಆದ ಕನಸುಗಳಿವೆ. ನನ್ನ ಖಾತೆಯ ಇತಿ ಮಿತಿಯೊಳಗೆ ನಾನು ರೈತರಿಗೆ ನೆರವಾಗಬಹುದಾದ ಅನೇಕ ಕಾರ್ಯಕ್ರಮಗಳನ್ನು ಮಾಡಲು ಯೋಜಿಸಲಾಗಿದೆ.

ಇಂತಹ ಸಂದರ್ಭದಲ್ಲಿ ನನಗೆ ಮತ್ತಷ್ಟು ಹೆಸರು ಬರುವುದೆಂಬ ಭಯ ಮತ್ತು ಹತಾಶೆಯಿಂದ ಕೆಲವರು ಈ ಷಡ್ಯಂತ್ರದ ರಾಜಕಾರಣ ನಡೆಸುತ್ತಿದ್ದಾರೆ. ಸತ್ಯಕ್ಕೆ ದೂರವಾಗಿರುವ  ಅವರ ಈ ಯಾವ ಕುತಂತ್ರಗಳು ಫಲ ನೀಡುವುದಿಲ್ಲ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ.

ಲಂಚ ಪ್ರಕರಣ ಸಂಬಂಧ ಟ್ವೀಟ್ ಮಾಡಿರುವ ಅವರು,  ಕೃಷಿ ಪ್ರಧಾನ ದೇಶವಾಗಿರುವ ಭಾರತದಲ್ಲಿ ಕೃಷಿಯನ್ನೇ ನಂಬಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಶೇ.70 ರಷ್ಟು ಜನರು ಜೀವನ ನಡೆಸುತ್ತಿದ್ದಾರೆ. ಇಂತಹ ಮಹತ್ವದ ಕ್ಷೇತ್ರದಲ್ಲಿ ಒಂದಷ್ಟು ಸೇವೆ ಮಾಡುವ ಅವಕಾಶ ನನಗೆ ರಾಜಕೀಯವಾಗಿ ದೊರೆತಿದೆ.

ನಾನೂ ಸಹ ಕೃಷಿಕ ಕುಟುಂಬದ ಒಬ್ಬ ರೈತನ ಮಗನಾಗಿ ಬಂದವನಾಗಿದ್ದು ನನಗೆ ಲಭಿಸಿರುವ ಉತ್ತಮ ಅವಕಾಶವನ್ನು ಬಳಸಿಕೊಂಡು ಕರ್ನಾಟಕದ ರೈತರಿಗೆ ಕೃಷಿ ಮಂತ್ರಿಯಾಗಿ ಏನೆಲ್ಲಾ ಸೇವೆ ಮಾಡಲು ಸಾಧ್ಯವಿದೆಯೋ ಆ ಎಲ್ಲಾ ಸೇವೆ ಸಲ್ಲಿಸಲು ನಾನು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ಆದರೆ ಹೇಗಾದರೂ ಮಾಡಿ ನನ್ನನ್ನು ರಾಜಕೀಯವಾಗಿ ತುಳಿಯುವ ಉದ್ದೇಶದಿಂದ ಬಹಳ ವ್ಯವಸ್ಥಿತವಾಗಿ ಷಡ್ಯಂತ್ರ ಮತ್ತು ಪಿತೂರಿ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.

ನನ್ನನ್ನೇ ಗುರಿಯಾಗಿಸಿಕೊಂಡು ನಡೆಯುತ್ತಿರುವ ಈ ಕುತಂತ್ರದ ಹಿಂದೆ ಯಾರಿರಬಹುದು ಎನ್ನುವ ಬಗ್ಗೆ ಹೆಸರು ಹೇಳುವ ಅವಶ್ಯಕತೆಯಿಲ್ಲ ನಿಮಗೆ ತಿಳಿದಿದೆ. ಜನರು ರಾಜಕೀಯವಾಗಿ ಪ್ರಬುದ್ಧರಿದ್ದು ನನ್ನ ವಿರುದ್ಧ ಷಡ್ಯಂತ್ರ ರೂಪಿಸುತ್ತಿರುವುದು ಯಾರೆಂದು ಅವರೇ ನಿರ್ಧಾರ ಮಾಡುತ್ತಾರೆ. ಸರ್ಕಾರಗಳ ಬದಲಾವಣೆ ಆದಾಗ ಸರ್ಕಾರಿ ನೌಕರರ ವರ್ಗಾವಣೆ ಒಂದು ಸಾಮಾನ್ಯ ಪ್ರಕ್ರಿಯೆ. ಇದು ಎಲ್ಲಾ ಹೊಸ ಸರ್ಕಾರಗಳು ಬಂದಾಗಲೂ ಸಹಜವಾಗಿ ನಡೆದಿವೆ. ಆದರೆ ವೈಯಕ್ತಿಕವಾಗಿ ನಾನು ಮೊದಲಿನಿಂದಲೂ ಈ ಪ್ರಕ್ರಿಯೆಯಲ್ಲಿ ಈ ಬಗ್ಗೆ ಹೆಚ್ಚಿನ ಗಮನ ಕೊಟ್ಟಿಲ್ಲ ಎಂದಿದ್ದಾರೆ.

ನನ್ನ ಬಗ್ಗೆ ಬಹಳ ದ್ವೇಷ ಹೊಂದಿರುವ ಜನ ಹೇಗಾದರೂ ಸರಿ ನನ್ನ ವ್ಯಕ್ತಿತ್ವಕ್ಕೆ ಕಪ್ಪು ಚುಕ್ಕೆ ತರುವ ಪ್ರಯತ್ನದ ಭಾಗವಾಗಿ ನಕಲಿ ಪತ್ರಗಳನ್ನು ಸೃಷ್ಟಿಸಿ ಸದರಿ ನಕಲಿ ಪತ್ರಗಳ ಆಧಾರದ ಮೇಲೆ ನೌಕರರನ್ನು ನೆಪವಾಗಿಸಿ ಷಡ್ಯಂತ್ರ ರೂಪಿಸುತ್ತಿದ್ದಾರೆ.

ಈ ಷಡ್ಯಂತ್ರದ ಹಿಂದಿರುವವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಲಿದೆ. ಈಗಾಗಲೇ ರಾಜ್ಯದ ಜನತೆಗೆ ನನ್ನ ವಿರುದ್ಧ ಯಾರೆಲ್ಲ ಏನೇನು ರಾಜಕೀಯ ಮಸಲತ್ತು ನಡೆಸಿದ್ದಾರೆಂಬುದು ತಿಳಿದಿದೆ. ಇದು ಸಹ ಅಂತಹುದೇ ಮುಂದುವರಿದ ಭಾಗ ಭಾಗವಷ್ಟೇ. ನೇರವಾಗಿ ನನ್ನನ್ನು ಎದುರಿಸಲಾಗದೆ ನನ್ನ ವಿರುದ್ಧ ಈ ರೀತಿಯ ಕ್ಷುಲ್ಲಕ ರಾಜಕೀಯ ಮಾಡಲಾಗುತ್ತಿದೆ ಎಂದು ಸಚಿವರು ವಿವರಣೆ ನೀಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com