ಬೆಂಗಳೂರು: ಮೈಸೂರು ಬೆಂಗಳೂರು ಎಕ್ಸ್ ಪ್ರೆಸ್ ಕಾರಿಡಾರ್ ಸಿದ್ದರಾಮಯ್ಯನವರಿಂದ ಅನುಷ್ಠಾನ ಎಂಬರ್ಥದ ವಿಡಿಯೋ ಪ್ರಕಟಿಸಿರುವ ಕಾಂಗ್ರೆಸ್ ನ ಮಾಜಿ ಸಚಿವ ಎಚ್.ಸಿ. ಮಹದೇವಪ್ಪ ವಿರುದ್ಧ ಬಿಜೆಪಿ ಹರಿಹಾಯ್ದಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ಬಿಜೆಪಿ ವಿಧಾನಸೌಧ ಕಟ್ಟಿದ್ದೂ ನೀವು ಮತ್ತು ನಿಮ್ಮ ಮರಳುಗಳ್ಳ ಮಗನೇನಾ? ಎಂದು ಪ್ರಶ್ನಿಸಿದೆ, ಕೊಳವೆ ಬಾವಿ ಕೊರೆಸುವ ಯೋಜನೆ ಹೆಸರಿನಲ್ಲಿ ಅಂಬೇಡ್ಕರ್ ಅಭಿವೃದ್ಧಿ ನಿಗಮಕ್ಕೆ ಸೇರಿದ 18 ಕೋಟಿ ರೂ. ಹಣ ಲೂಟಿ ಹೊಡೆದವರು ಯಾರು? ಎಂದು ಪ್ರಶ್ನಿಸಿದೆ.
ಮೈಸೂರು - ಬೆಂಗಳೂರು ಎಕ್ಸ್ ಪ್ರೆಸ್ ಹೆದ್ದಾರಿಯ ಸಂಪೂರ್ಣ ಶ್ರೇಯಸ್ಸನ್ನು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯನವರಿಗೆ ಅರ್ಪಿಸಿರುವ ವಿಡಿಯೋವೊಂದನ್ನು ಕಾಂಗ್ರೆಸ್ ನ ಮಾಜಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಟ್ವಿಟರ್ ನಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ.
27 ಸೆಕೆಂಡ್ ಗಳ ಈ ವಿಡಿಯೋ ಕ್ಲಿಪ್ ನ ಆರಂಭದಲ್ಲಿ, ಸಿದ್ದರಾಮಯ್ಯನವರ ಫೋಟೋ ಹಾಕಿ, ಕರ್ನಾಟಕದ ಇತಿಹಾಸದಲ್ಲೇ 40,000 ಕಿ.ಮೀ.ಗಳ ರಸ್ತೆಯನ್ನು ಅಭಿವೃದ್ಧಿಗೊಳಿಸುವ ಕೆಲಸ ಆಗಿದೆ ಎಂದು ಹೇಳಲಾಗಿದೆ. ಐತಿಹಾಸಿಕ ಮೈಸೂರು - ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ನಿರ್ಮಾಣ, ಅಭಿವೃದ್ಧಿಯ ಹರಿಕಾರ - ಜನರ ತೆರಿಗೆಯ ಕಾವಲುಗಾರ - ನಮ್ಮ ಸಿದ್ದರಾಮಯ್ಯ ಎಂದು ಸಿದ್ದರಾಮಯ್ಯನವರನ್ನು ಬಣ್ಣಿಸಲಾಗಿದೆ. ಒಟ್ಟಿನಲ್ಲಿ ಮೈಸೂರು - ಬೆಂಗಳೂರು ಎಕ್ಸ್ ಪ್ರೆಸ್ ಹೈವೇ ಸಿದ್ದರಾಮಯ್ಯನರ ಕನಸಿನ ಯೋಜನೆ ಎಂಬಂತೆ ತೋರಿಸಲಾಗಿದೆ.
Advertisement