ಮದ್ದೂರಿಗೆ ಮೋದಿ ಭೇಟಿ: ಚುನಾವಣೆ ಗೆಲ್ಲಲು ಅಭಿವೃದ್ಧಿ ಮಂತ್ರ; ಒಕ್ಕಲಿಗರ ಹೃದಯ ಸಾಮ್ರಾಜ್ಯದಲ್ಲಿ ಕಮಲ ಅರಳಿಸಲು 'ನಮೋ' ತಂತ್ರ!

ಮೈಸೂರು-ಬೆಂಗಳೂರು ದಶಪಥ ಹೆದ್ದಾರಿ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಮದ್ದೂರಿಗೆ ಆಗಮಿಸಲಿದ್ದಾರೆ. ಈ ಸಂದರ್ಭವನ್ನು ಭಾರತೀಯ ಜನತಾ ಪಕ್ಷವು ಒಕ್ಕಲಿಗ ಹೃದಯಭಾಗದಲ್ಲಿ ತನ್ನ ರಾಜಕೀಯ ಭವಿಷ್ಯವನ್ನು ಸಂಸ್ಥಾಪಿಸುವ ಅವಕಾಶವನ್ನಾಗಿ ಪರಿವರ್ತಿಸಲು ಸಜ್ಜಾಗಿದೆ.
ನರೇಂದ್ರ ಮೋದಿ
ನರೇಂದ್ರ ಮೋದಿ

ಮೈಸೂರು: ಮೈಸೂರು-ಬೆಂಗಳೂರು ದಶಪಥ ಹೆದ್ದಾರಿ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಮದ್ದೂರಿಗೆ ಆಗಮಿಸಲಿದ್ದಾರೆ. ಈ ಸಂದರ್ಭವನ್ನು ಭಾರತೀಯ ಜನತಾ ಪಕ್ಷವು ಒಕ್ಕಲಿಗ ಹೃದಯಭಾಗದಲ್ಲಿ ತನ್ನ ರಾಜಕೀಯ ಭವಿಷ್ಯವನ್ನು ಸಂಸ್ಥಾಪಿಸುವ ಅವಕಾಶವನ್ನಾಗಿ ಪರಿವರ್ತಿಸಲು ಸಜ್ಜಾಗಿದೆ.

ಇದನ್ನು ಮೆಗಾ ಈವೆಂಟ್ ಮಾಡಲು ಬಯಸುತ್ತಿರುವ ಕರ್ನಾಟಕ ಬಿಜೆಪಿ, ರಾಮನಗರ, ಮೈಸೂರು ಮತ್ತು ಹಾಸನ ಜಿಲ್ಲೆಯ ಕೇಂದ್ರ ಬಿಂದು ಎಂದು ಪರಿಗಣಿಸಲಾದ ಮದ್ದೂರಿನಲ್ಲಿ ಮೆಗಾ ರ್ಯಾಲಿಯನ್ನು ಆಯೋಜಿಸಲು ನಿರ್ಧರಿಸಿದೆ. ವಿಧಾನಸಭೆ ಚುನಾವಣಾ ಪ್ರಚಾರದ ಕಣವನ್ನು ಮತ್ತೊಂದು ಹಂತಕ್ಕೆ  ಕೊಂಡೊಯ್ಯಲು ಹಾಯ ಮಾಡುತ್ತದೆ.  ಮಂಡ್ಯಕ್ಕೆ  ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಮಾಸ್ಟರ್ ಸ್ಟ್ರಾಟಜಿಸ್ಟ್ ಅಮಿತ್ ಶಾ ಅವರ ಭೇಟಿಯ ನಂತರ ಪ್ರಧಾನಿ ಮೋದಿ ಆಗಮಿಸುತ್ತಿದ್ದಾರೆ.

ಮಂಡ್ಯಕ್ಕೆ ಕೇಂದ್ರ ಸಚಿವ ಅಮಿತ್ ಶಾ ಭೇಟಿ ನೀಡಿದ ವೇಳೆ ಜೆಡಿಎಸ್  ಕುಟುಂಬ ರಾಜಕೀಯದ  ವಿರುದ್ಧ ಹರಿ ಹಾಯ್ದಿದ್ದರು. ಮಂಡ್ಯದಲ್ಲಿ ಏಳು ಸ್ಥಾನಗಳಲ್ಲಿ ಕನಿಷ್ಠ ನಾಲ್ಕನ್ನು ಗೆಲ್ಲುವ ಕಾರ್ಯಸೂಚಿಯನ್ನು  ನೀಡಿರುವ ಅವರು, ಜೆಡಿಎಸ್‌ನೊಂದಿಗೆ ಯಾವುದೇ ಹೊಂದಾಣಿಕೆ ರಾಜಕೀಯ ಮಾಡಿಕೊಳ್ಳುವುದಿಲ್ಲ ಎಂಬ ಪ್ರಬಲವಾದ ಸಂದೇಶ ರವಾನಿಸಿದ್ದರು.

ಒಕ್ಕಲಿಗ ಮತದಾರರ ಮೇಲೆ ಹಿಡಿತ ಸಾಧಿಸಲು ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಜೆಡಿಎಸ್ ಮುಖಂಡ ಎಚ್.ಡಿ.ಕುಮಾರಸ್ವಾಮಿ ಪೈಪೋಟಿ ನಡೆಸುತ್ತಿದ್ದರೂ ಹಳೇ ಮೈಸೂರು ಭಾಗದ 74 ಸ್ಥಾನಗಳಲ್ಲಿ ಅತಿ ಹೆಚ್ಚು ಶಾಸಕರನ್ನು ನೀಡುವಂತೆ ಸಮುದಾಯಕ್ಕೆ ಮನವಿ ಮಾಡಿದ್ದಾರೆ.

ರಾಜ್ಯ ಬಿಜೆಪಿ ಘಟಕದಲ್ಲಿ ವರ್ಚಸ್ವಿ ಪ್ರಭಾವಿ ಒಕ್ಕಲಿಗ ನಾಯಕರ ಕೊರತೆ ಇದೆ ಎಂಬುದನ್ನು ಬಿಜೆಪಿ ಹೈಕಮಾಂಡ್ ಚೆನ್ನಾಗಿ ತಿಳಿದಿದ್ದು, ಮತದಾರರನ್ನು ಆಕರ್ಷಿಸಲು ಪ್ರಧಾನಿ ಮೋದಿಯವರ ಇಮೇಜ್  ಬಳಸಿಕೊಳಳ್ಲಲು ಯೋಜಿಸಿದೆ .  ದಶಪಥದ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ, ಮೈ ಶುಗರ್ ಕಾರ್ಖಾನೆಯ ಕಾರ್ಯಾರಂಭ, ಕಾವೇರಿ ಜಲಾನಯನ ಪ್ರದೇಶದಲ್ಲಿ ನೀರಾವರಿ ಯೋಜನೆಗಳಿಗೆ ಹಣ, ಮಂಡ್ಯ ವಿಶ್ವವಿದ್ಯಾಲಯ ಸ್ಥಾಪನೆ,  ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 106 ಅಡಿ ಕೆಂಪೇಗೌಡ ಪ್ರತಿಮೆ ಸ್ಥಾಪನೆ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಕ್ರಮಗಳ ಪಟ್ಟಿಯನ್ನು ಜನರ ಮುಂದಿಡುತ್ತಿದೆ. ಡಿ.ಕೆ ಶಿವಕುಮಾರ್ ಮತ್ತು ಕುಮಾರಸ್ವಾಮಿ ಇಬ್ಬರೂ ಪ್ರತಿನಿಧಿಸುವ ರಾಮನಗರ ಜಿಲ್ಲೆಗೆ ಅಭಿವೃದ್ಧಿ ಯೋಜನೆಗಳನ್ನು ಘೋಷಿಸುವುದು ಬಿಜೆಪಿ ಪ್ರಮುಖ ಅಸ್ತ್ರವಾಗಿದೆ.

ಜೆಡಿಎಸ್‌ನಲ್ಲಿ ವಂಶವಾಹಿ ರಾಜಕೀಯ ಮತ್ತು ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಸ್ಥಾನದ ಬಗ್ಗೆ ಆಂತರಿಕ ಕಚ್ಚಾಟವನ್ನು ಬಿಜೆಪಿ ತನ್ನ ಪ್ರಬಲ ಅಸ್ತ್ರವನ್ನಾಗಿ ಬಳಸಿಕೊಳ್ಳಲಿದೆ ಎಂದು ಪಕ್ಷದ ಮೂಲಗಳು ಖಚಿತಪಡಿಸಿವೆ.

2023ರ ವಿಧಾನಸಭೆ ಮತ್ತು 2024ರ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಚುನಾವಣಾ ಹೋರಾಟ ನಡೆಸಲಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ಪಕ್ಷದ ಕಾರ್ಯಕರ್ತರಿಗೆ ಹೇಳಿರುವಂತೆ ಬಿಜೆಪಿ ಜೆಡಿಎಸ್ ಜೊತೆ ಚೆಲ್ಲಾಟವಾಡುವ ಮನಸ್ಥಿತಿಯಲ್ಲಿಲ್ಲ ಎಂದು ಘೋಷಿಸಿದ್ದಾರೆ.

ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಅಭ್ಯರ್ಥಿಗಳ ಪಟ್ಟಿಯನ್ನು ಕುಟುಂಬದವರು ಸಿದ್ಧಪಡಿಸಿದ್ದಾರೆ ಎಂದು ಆರೋಪಿಸಿದ್ದಾರೆ.  ಜೆಡಿಎಸ್ ಮತ್ತು ಕಾಂಗ್ರೆಸ್‌ನ ಭದ್ರಕೋಟೆ ಎಂದು ಪರಿಗಣಿಸಲಾಗಿದ್ದರೂ ಹಳೇ ಮೈಸೂರು ಭಾಗದಲ್ಲಿ ಹೆಚ್ಚು ಬಿಜೆಪಿ ಶಾಸಕರನ್ನು ಆಯ್ಕೆ ಮಾಡಬೇಕೆಂದು ಅವರು ಹೇಳಿದ್ದಾರೆ.

ಮಂಡ್ಯ ಜಿಲ್ಲಾ ಉಸ್ತುವಾರಿಯನ್ನು  ಕಂದಾಯ ಸಚಿವ ಆರ್.ಅಶೋಕ ಅವರಿಗೆ ನೀಡಿದ ಬಳಿಕ ಮಂಡ್ಯ ಘಟಕದಲ್ಲಿ ಬಂಡಾಯ ಎದ್ದಿರುವ ಬಗ್ಗೆ ಬಿಜೆಪಿ ಹೈಕಮಾಂಡ್ ಸಹ ಗಮನಿಸಿದೆ. ಕೆಲವು ನಾಯಕರು ಜೆಡಿಎಸ್ ಜೊತೆ ಹೊಂದಾಣಿಕೆ ರಾಜಕಾರಣ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಹಳೇ ಮೈಸೂರಿನಲ್ಲಿ ಕೇಸರಿ  ಹರಡಲು ಉತ್ಸುಕವಾಗಿರುವ ಬಿಜೆಪಿ, 113 ಸ್ಥಾನಗಳ ಮ್ಯಾಜಿಕ್ ನಂಬರ್ ಪಡೆಯಲು ಸಂಸದೆ ಸುಮಲತಾ ಅಂಬರೀಶ್ ಮತ್ತು ಅವರ ಬೆಂಬಲಿಗರನ್ನು ತಲುಪಬಹುದು ಎಂದು ಹೇಳಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com