ಕರ್ನಾಟಕ ವಿಧಾನಸಭೆ ಚುನಾವಣೆ: ಒಕ್ಕಲಿಗ ಸಚಿವರ ಮೇಲೆ ಹಳೆ ಮೈಸೂರು ಭಾಗ ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ಹೊರಿಸಿದ ಅಮಿತ್ ಶಾ

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಇತ್ತೀಚಿನ ಕರ್ನಾಟಕ ಪ್ರವಾಸ, ಅದರಲ್ಲೂ ಒಕ್ಕಲಿಗರ ಪ್ರಾಬಲ್ಯವಿರುವ ಮಂಡ್ಯದ ಹೃದಯಭಾಗಕ್ಕೆ ಭೇಟಿ ನೀಡಿ ಅಲ್ಲಿ ಭಾಷಣ ಮಾಡಿರುವುದು ಬಿಜೆಪಿ ಕಾರ್ಯಕರ್ತರಲ್ಲಿ ಹೊಸ ಹುರುಪು ಮೂಡಿಸಿದೆ.
ಅಮಿತ್ ಶಾ
ಅಮಿತ್ ಶಾ

ಮೈಸೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಇತ್ತೀಚಿನ ಕರ್ನಾಟಕ ಪ್ರವಾಸ, ಅದರಲ್ಲೂ ಒಕ್ಕಲಿಗರ ಪ್ರಾಬಲ್ಯವಿರುವ ಮಂಡ್ಯದ ಹೃದಯಭಾಗಕ್ಕೆ ಭೇಟಿ ನೀಡಿ ಅಲ್ಲಿ ಭಾಷಣ ಮಾಡಿರುವುದು ಬಿಜೆಪಿ ಕಾರ್ಯಕರ್ತರಲ್ಲಿ ಹೊಸ ಹುರುಪು ಮೂಡಿಸಿರಬಹುದು, ಆದರೆ ಜೆಡಿಎಸ್ ನ್ನು ಭ್ರಷ್ಟ ಕುಟುಂಬದ ಪಕ್ಷ ಎಂದು ಜರೆದಿರುವುದು ಇಲ್ಲಿನ ಬಿಜೆಪಿ ಒಕ್ಕಲಿಗ ನಾಯಕರನ್ನು ಸಂಕಷ್ಟದಲ್ಲಿ ಸಿಲುಕಿಸಿರುವುದಂತೂ ಸತ್ಯ. ವಿಧಾನಸಭೆ ಚುನಾವಣೆ ಹೊಸ್ತಿಲಿನಲ್ಲಿ ಅವರು ಸಾಕಷ್ಟು ಶ್ರಮ ಹಾಕಬೇಕಾಗಿದೆ. 

ಒಕ್ಕಲಿಗ ಪ್ರಾಬಲ್ಯವಿರುವ ಹಳೇ ಮೈಸೂರು ಪ್ರದೇಶದಲ್ಲಿ ಪಕ್ಷದ ನಾಯಕರಿಗೆ ಕನಿಷ್ಠ 35 ಸ್ಥಾನಗಳನ್ನು ಗುರಿಯಾಗಿಟ್ಟುಕೊಂಡು ಅಮಿತ್ ಶಾ ಚುನಾವಣೆಗೆ ಅಡಿಪಾಯ ಹಾಕುವ ಕೆಲಸ ಆರಂಭಿಸಿದ್ದಾರೆ. ಇದು ಇಲ್ಲಿನ ಬಿಜೆಪಿ ನಾಯಕರನ್ನು ಕೆರಳಿಸಿದೆ. ಏಕೆಂದರೆ ಇಲ್ಲಿ ಗೆಲ್ಲುವುದು ಅನಿವಾರ್ಯವಾಗಿದ್ದು ಇದಕ್ಕೆ ಬಿಜೆಪಿ ನಾಯಕರನ್ನೇ ಹೊಣೆಗಾರರನ್ನಾಗಿ ಮಾಡಿ ಹೋಗಿದ್ದಾರೆ ಅಮಿತ್ ಶಾ. ಇದು ಬಿಜೆಪಿ ನಾಯಕರನ್ನು ಕೆರಳಿಸಿದೆ ಎಂದರೆ ತಪ್ಪಾಗಲಾರದು. 

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ 29 ಮಂದಿಯ ಸಚಿವ ಸಂಪುಟದಲ್ಲಿ ಆರ್ ಅಶೋಕ, ಸಿ ಎನ್ ಅಶ್ವಥ್ ನಾರಾಯಣ, ಕೆ ಗೋಪಾಲಯ್ಯ, ಕೆ ಸುಧಾಕರ್, ಎಸ್ ಟಿ ಸೋಮಶೇಖರ್, ಕೆ ಸಿ ನಾರಾಯಣ ಗೌಡ ಮತ್ತು ಆರಗ ಜ್ಞಾನೇಂದ್ರ ಸೇರಿದಂತೆ ಏಳು ಒಕ್ಕಲಿಗರಿದ್ದಾರೆ. ಅವರಲ್ಲಿ ಆರು ಮಂದಿ ಹಳೇ ಮೈಸೂರಿನವರಾಗಿದ್ದರೆ, ಅಶೋಕ ಮತ್ತು ಅಶ್ವಥ್ ಅವರು ಉಪಮುಖ್ಯಮಂತ್ರಿಗಳಾಗಿದ್ದಾರೆ. ಬಿಜೆಪಿಯು ಒಕ್ಕಲಿಗ ಸಮುದಾಯಕ್ಕೆ ಸಾಕಷ್ಟು ಖಾತೆಗಳನ್ನು ನೀಡಿದೆ. ಲಿಂಗಾಯತರ ನಂತರ ಕ್ಯಾಬಿನೆಟ್ ನಲ್ಲಿ ಸಿಂಹಪಾಲು ಸಿಕ್ಕಿರುವುದು ಒಕ್ಕಲಿಗ ನಾಯಕರುಗಳಿಗೆ.

ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ ಊಹಾಪೋಹಗಳಿಗೆ ಅಮಿತ್ ಶಾ ತೆರೆ ಎಳೆದಿದ್ದಾರೆ. ಪ್ರಾದೇಶಿಕ ಪಕ್ಷದೊಂದಿಗೆ ಯಾವುದೇ ಬಾಂಧವ್ಯವಿಲ್ಲ ಎಂದು ಸ್ಪಷ್ಟಪಡಿಸಿದರು. ಜೆಡಿಎಸ್ ಮತ್ತು ಕಾಂಗ್ರೆಸ್‌ಗೆ ರಣರಂಗವಾಗಿರುವ ಈ ಕ್ಷೇತ್ರದಲ್ಲಿ ನಿರ್ಣಾಯಕ ಗೆಲುವು ಸಾಧಿಸುವ ಹೊಣೆಗಾರಿಕೆಯನ್ನು ಬಿಜೆಪಿ ಹೈಕಮಾಂಡ್ ತನ್ನ ನಾಯಕರಿಗೆ ನೀಡಿದೆ.

ಒಕ್ಕಲಿಗ ಅಭಿವೃದ್ಧಿ ನಿಗಮ, ಕೆಂಪೇಗೌಡ ವಿಮಾನ ನಿಲ್ದಾಣದ ಬಳಿ 108 ಅಡಿ ಎತ್ತರದ ಕೆಂಪೇಗೌಡ ಪ್ರತಿಮೆ ಉದ್ಘಾಟನೆ, ಒಕ್ಕಲಿಗರಿಗೆ ಮೀಸಲಾತಿ ಹೆಚ್ಚಿಸುವುದು ಮುಂತಾದ ಕಾರ್ಯಕ್ರಮಗಳನ್ನು ಸಚಿವರು ವಹಿಸಬೇಕು ಎಂಬುದು ಪಕ್ಷದ ಆಶಯ. ಶೇಕಡಾ 50ರಷ್ಟು ಮತದಾರರನ್ನು ಬೂತ್ ಮಟ್ಟದಲ್ಲಿ ಕ್ರೋಢೀಕರಿಸಲು ಬಯಸುತ್ತಿರುವ ಅಮಿತ್ ಶಾ, ನಾಯಕರಿಗೆ ತಮ್ಮ ಆಜ್ಞೆಯ ತಂತ್ರಗಳು ಮತ್ತು ಸಂಪನ್ಮೂಲಗಳನ್ನು ಬಳಸಲು ಮುಕ್ತ ಹಸ್ತವನ್ನು ನೀಡಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಸಾರಿಕೊಂಡು ಬಂದಿರುವಂತೆ 130 ಸ್ಥಾನಗಳ ಮೇಲೆ ಕೇಸರಿ ಪಕ್ಷ ಕಣ್ಣಿಟ್ಟಿದೆ. ವಿಧಾನಸಭೆಯಲ್ಲಿ ಮ್ಯಾಜಿಕ್ ನಂಬರ್ 113ನ್ನು ಗೆಲ್ಲುವುದು ಪಕ್ಷಗಳ ತಂತ್ರವಾಗಿದೆ. ಇದು 2024 ರಲ್ಲಿ ಲೋಕಸಭೆ ಚುನಾವಣೆಗೆ ಪಕ್ಷಕ್ಕೆ ಹೊಸ ಹುರುಪು ನೀಡುತ್ತದೆ. 

ಬಿಜೆಪಿ ಸಂಘಟನಾತ್ಮಕ ಬೆಳವಣಿಗೆಯನ್ನು ನೋಡುತ್ತಿದೆ ಎಂದು ಪ್ರತಿಪಾದಿಸಲು ಶಾ ಮಂಡ್ಯದಲ್ಲಿ ಜೆಡಿಎಸ್ ನ್ನು ಗುರಿಯಾಗಿಸಿಕೊಂಡಿದ್ದಾರೆ. ಕಾಂಗ್ರೆಸ್ ನಿರ್ವಹಿಸಿದಂತೆ ಪ್ರಾದೇಶಿಕ ಪಕ್ಷವು ಅದರ ಬಿ-ಟೀಮ್ ಆಗುವುದಿಲ್ಲ ಎಂದು ಹಿರಿಯ ನಾಯಕರೊಬ್ಬರು ಅಭಿಪ್ರಾಯಪಟ್ಟಿದ್ದಾರೆ. ಜೆಡಿಎಸ್ ಮತ್ತು ಕಾಂಗ್ರೆಸ್ ವೋಟ್ ಬ್ಯಾಂಕ್‌ಗಳಿಗೆ ಬಿಜೆಪಿ ಕಾಲಿಡುವ ಸಮಯ ಬಂದಿದೆ ಎಂದಿದ್ದಾರೆ. 

ಬಿಜೆಪಿ ಮುಖಂಡ ಶಿವಣ್ಣ ಈ ಬಗ್ಗೆ ಮಾತನಾಡಿ, ಮೈ ಶುಗರ್ ಕಾರ್ಖಾನೆ ಕಾರ್ಯಾರಂಭ, ಮಂಡ್ಯ ವಿವಿ ಸ್ಥಾಪನೆ, ಕಬ್ಬು ಬೆಳೆಗಾರರ ಬೇಡಿಕೆ ಈಡೇರಿಸುವುದು ಖಂಡಿತಾ ಬಿಜೆಪಿಗೆ ವಿಧಾನಸಭೆ ಚುನಾವಣೆಯಲ್ಲಿ ಧನಾತ್ಮಕ ಅಂಶವಾಗಲಿದೆ ಎಂದಿದ್ದಾರೆ. 

ಒಕ್ಕಲಿಗರು ಬಿಜೆಪಿಯ ಮೂಲ ತಳಹದಿಯಲ್ಲ. ಹಿಂದುತ್ವ ರಾಜಕಾರಣದತ್ತ ವಾಲುವುದಿಲ್ಲ ಎಂದು ರಾಜಕೀಯ ವಿಮರ್ಶಕ ಮುಜಾಫರ್ ಅಸ್ಸಾದಿ ಹೇಳಿದ್ದಾರೆ. ಆದಾಗ್ಯೂ, ಅಮಿತ್ ಶಾ ಅವರು ತಮ್ಮ ಸಚಿವರಿಗೆ ಒಕ್ಕಲಿಗರ ಮನವೊಲಿಸುವ ಗುರಿಯ ಸಂದೇಶ ನೀಡಿದ್ದು ರಾಜ್ಯದಲ್ಲಿ ಹೆಚ್ ಡಿ ದೇವೇಗೌಡರಿಗೆ ಪರ್ಯಾಯವಾಗಿ ಬಿಜೆಪಿಯಲ್ಲಿ ಪ್ರಬಲ ಒಕ್ಕಲಿಗ ನಾಯಕ ಬೆಳೆಯಬೇಕೆಂಬುದು ಅವರ ಮಹದಾಸೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com