ಬಿಜೆಪಿಯಲ್ಲಿ ಶಿಸ್ತಿನ ಪಾಠ ಕೇವಲ ಬಿಎಸ್'ವೈ ಬ್ರಿಗೇಡ್ ಗೆ ಮಾತ್ರವೇ?... ಬೊಮ್ಮಾಯಿ ವಿರುದ್ಧ ಮಾತನಾಡಿದ ಪ್ರತಾಪ್ ಸಿಂಹಗೇಕಿಲ್ಲ?

ಬಿಜೆಪಿಯಲ್ಲಿ ಶಿಸ್ತಿನ ಪಾಠ ಕೇವಲ ಬಿಎಸ್'ವೈ ಬ್ರಿಗೇಡ್ ಗೆ ಮಾತ್ರವೇ? ಬೊಮ್ಮಾಯಿಯವರ ವಿರುದ್ಧ ಮಾತನಾಡಿದ ಸಂಸದ ಪ್ರತಾಪ್ ಸಿಂಹ ಅವರ ವಿರುದ್ಧ ಶಿಸ್ತುಕ್ರಮದ ನೋಟಿಸ್ ನೀಡಿಲ್ಲವೇಕೆಂದು ಬಿಜೆಪಿಯನ್ನು ಕಾಂಗ್ರೆಸ್ ಪ್ರಶ್ನಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಬಿಜೆಪಿಯಲ್ಲಿ ಶಿಸ್ತಿನ ಪಾಠ ಕೇವಲ ಬಿಎಸ್'ವೈ ಬ್ರಿಗೇಡ್ ಗೆ ಮಾತ್ರವೇ? ಬೊಮ್ಮಾಯಿಯವರ ವಿರುದ್ಧ ಮಾತನಾಡಿದ ಸಂಸದ ಪ್ರತಾಪ್ ಸಿಂಹ ಅವರ ವಿರುದ್ಧ ಶಿಸ್ತುಕ್ರಮದ ನೋಟಿಸ್ ನೀಡಿಲ್ಲವೇಕೆಂದು ಬಿಜೆಪಿಯನ್ನು ಕಾಂಗ್ರೆಸ್ ಪ್ರಶ್ನಿಸಿದೆ.

ಈ ಕುರಿತು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಸರಣಿ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್, ಇಡೀ ಬಿಜೆಪಿ ಒಂದು ಪಂಚೆಯೊಳಗೆ ಬಂಧಿಯಾಗಿ ವಿಲವಿಲ ಒದ್ದಾಡುತ್ತಿದೆ! ಬಂಧನದಿಂದ ಹೊರಬರಬೇಕು ಎಂದರೆ ಆ "ಪಂಚೆ"ಯನ್ನು ಹರಿಯಲೇಬೇಕು! ದುಡಿಯದೆ, ಬೆವರು ಹರಿಸದೆ, ತಿರುಗದೆ, ನಾಲ್ಕು ಮತವನ್ನು ಗಳಿಸುವ ಶಕ್ತಿಯೂ ಇಲ್ಲದ ಆ 'ಸಂಘ'ಟನಾ ಕಾರ್ಯದರ್ಶಿಯ ವಿರುದ್ಧ ಮಾತನಾಡಿದ ಒಬ್ಬೇ ಒಬ್ಬ ವ್ಯಕ್ತಿ ಅಂದರೆ ರೇಣುಕಾಚಾರ್ಯ. ಬಿಜೆಪಿಯಲ್ಲಿ ಅವರು ಬದುಕುಳಿಯಲು ಸಾಧ್ಯವೇ ಎಂದು ಕಾದು  ನೋಡಬೇಕು ಎಂದು ಹೇಳಿದೆ.

ಯಡಿಯೂರಪ್ಪ ವಿರುದ್ಧ ಹಿನಾಯವಾಗಿ ಮಾತನಾಡುತ್ತಿದ್ದವರ ವಿರುದ್ಧ ಒಂದೇ ಒಂದು ನೋಟಿಸ್ ನೀಡದ ಬಿಜೆಪಿ ಪಕ್ಷ ಸಂತೋಷ ಕೂಟದ ವಿರುದ್ಧ ಮಾತನಾಡಿದ 24 ಗಂಟೆಯೊಳಗೆ ನೋಟಿಸ್ ನೀಡಲಾಗಿದೆ. ಯಡಿಯೂರಪ್ಪ ಅಂದರೆ ಅಷ್ಟೊಂದು ತಾತ್ಸಾರವೇ? ಪಂಚೆ ಸಂತೋಷರ ಮೇಲೆ ಅಷ್ಟೊಂದು ಪ್ರೀತಿಯೇ ಬಿಜೆಪಿ? ಎಂದು ಪ್ರಶ್ನಿಸಿದೆ.

ಬಿಜೆಪಿಯ ಅಂತರಂಗದ ಸತ್ಯಗಳನ್ನು ನಾವು ಮೊದಲೇ ಹೇಳಿದ್ದೆವು, ಈಗ ಅವರ ಬಾಯಲ್ಲೇ ಹೊರಬರುತ್ತಿದೆ. ಬೊಮ್ಮಾಯಿ ಅವರು PuppetCM ಆಗಿದ್ದರು ಎಂದಿದ್ದೆವು. ಬೊಮ್ಮಾಯಿಯವರ ಕೈ ಕಟ್ಟಿ ಹಾಕಿದ್ದರು ಎಂದು ರೇಣುಕಾಚಾರ್ಯ ಹೇಳಿದ್ದಾರೆ. ನಳಿನ್ ಕುಮಾರ್ ಕಟೀಲ್ ನಾಮಕಾವಸ್ಥೆಯ ಅಸಮರ್ಥ ಅಧ್ಯಕ್ಷರು ಎಂದಿದ್ದೆವು. ಕಟೀಲ್ ಸಂತೋಷ ಕೂಟದ ಕೈಗೊಂಬೆ ಎಂದಿದ್ದಾರೆ. ಯಡಿಯೂರಪ್ಪ ಅವರ ಪದಚ್ಯುತಿ ಹಿಂದೆ ಸಂತೋಷ ಕೂಟದ ಆಟವಿದೆ ಎಂದಿದ್ದೆವು. ಇದೇ ವಿಷಯವನ್ನು ಇಂದು ಬಿಜೆಪಿಗರು ಹೇಳುತ್ತಿದ್ದಾರೆ. ವಲಸಿಗರನ್ನು ಬಿಜೆಪಿ ಎಂದಿಗೂ ಒಪ್ಪಿಕೊಳ್ಳುವುದಿಲ್ಲ ಎಂದಿದ್ದೆವು. ಈಶ್ವರಪ್ಪ ಈಗ ಹಾಗೆಯೇ ಮಾತಾಡಿದ್ದಾರೆ. ಈಗ ಬಿಜೆಪಿ vs ಆರ್'ಎಸ್ಎಸ್ ಆಟ ಶುರುವಾಗಿದೆ. ಪಂಚೆ ಪಡೆ ಗೆಲ್ಲುವುದೋ, ಬಿಎಸ್'ವೈ ಬ್ರಿಗೇಡ್ ಗೆಲ್ಲುವುದೋ ಕಾಲವೇ ಉತ್ತರಿಸಲಿದೆ ಎಂದು ಹೇಳಿದೆ.

ಬಿಜೆಪಿಯ ‘ಫಟಿಂಗ ಪಂಚೆ‘ಯ ವಿರುದ್ಧ ಮಾತನಾಡಿದ್ದೇ ತಡ ರೇಣುಕಾಚಾರ್ಯರಿಗೆ 24 ಗಂಟೆಯೊಳಗೆ ನೋಟಿಸ್ ಜಾರಿಯಾಗಿದೆ. ಆದರೆ ಯತ್ನಾಳ್ ಅವರಿಗೆ ನೋಟಿಸ್ ನೀಡಿದ್ದು ಬಹಿರಂಗವಾಗಿಲ್ಲ, ನೋಟಿಸ್ ತೋರಿಸಿದರೆ 10 ಲಕ್ಷ ಬಹುಮಾನ ಘೋಷಿಸಿದ್ದಾರೆ ಯತ್ನಾಳ್. ಪಂಚೆ ಪಡೆಯ ಮಾತುಗಳು ಪಕ್ಷ ವಿರೋಧಿ ಎಸಿಕೊಳ್ಳುವುದಿಲ್ಲವೇ ಚುನಾವಣೆ ಮುಗಿದ ನಂತರವೂ ಬಿಎಸ್'ವೈ ಬ್ರಿಗೇಡ್ ನ್ನು ಟಾರ್ಗೆಟ್ ಮಾಡಲಾಗುತ್ತಿದೆಯೇ ನಳಿನ್ ಕುಮಾರ್? ಡಿಯರ್ ಬಿಜೆಪಿ ನೋಟಿಸ್ ಬಹಿರಂಗಪಡಿಸಿ 10 ಲಕ್ಷ ಬಹುಮಾನ ಪಡೆಯಿರಿ.

ಬಿಜೆಪಿಯಲ್ಲಿ ಶಿಸ್ತಿನ ಪಾಠ ಕೇವಲ ಬಿಎಸ್'ವೈ ಬ್ರಿಗೇಡ್ ಗೆ ಮಾತ್ರವೇ? ಬೊಮ್ಮಾಯಿಯವರ ವಿರುದ್ಧ ಮಾತನಾಡಿದ ಸಂಸದ ಪ್ರತಾಪ್ ಸಿಂಹ ಅವರಿಗೆ ಶಿಸ್ತುಕ್ರಮದ ನೋಟಿಸ್ ಇಲ್ಲ. ಯಡಿಯೂರಪ್ಪ ವಿರುದ್ಧ ಅಬ್ಭರಿಸಿದ್ದ ಯತ್ನಾಳರಿಗೆ ನೋಟಿಸ್ ಇಲ್ಲ. ನಿರಾಣಿ ವಿರುದ್ಧ ಮಾತನಾಡಿದವರಿಗೆ ನೋಟಿಸ್ ಇಲ್ಲ. ಬಿಜೆಪಿಯಲ್ಲಿ ಲಿಂಗಾಯತ ನಾಯಕತ್ವವನ್ನು ಹಾಗೂ ಯಡಿಯೂರಪ್ಪ ಬೆಂಬಲಿಗರನ್ನು ಸಂಪೂರ್ಣ ಮುಗಿಸಿಹಾಕಲು ಸಂತೋಷ ಕೂಟ ಪಣ ತೊಟ್ಟಿದೆ ಎಂದು ಆರೋಪಿಸಿದೆ.

ಬಿಜೆಪಿಗೆ ಲಿಂಗಾಯತರು ಹಾಗೂ ಯಡಿಯೂರಪ್ಪ ಬೆಂಬಲಿಗರು ಬಿಟ್ಟಿ ಸಿಕ್ಕಿದ್ದಾರಾ? ರೇಣುಕಾಚಾರ್ಯ ಅವರ  ಪ್ರಶ್ನೆಯಲ್ಲಿ ನ್ಯಾಯವಿದೆ ಅಲ್ಲವೇ ಬಿಎಲ್ ಸಂತೋಷ್ ಅವರೇ? ಪ್ರತಾಪ್ ಸಿಂಹ, ಯತ್ನಾಳ್, ಸಿ ಪಿ ಯೋಗಿಶ್ವರ್, ಸಿ ಟಿ ರವಿ, ಈಶ್ವರಪ್ಪನವರಿಗಿಲ್ಲದ ನೋಟಿಸ್ ಕೇವಲ ಪಂಚೆ ಕೊಡವಿದ ರೇಣುಕಾಚಾರ್ಯರಿಗೆ ಏಕೆ? ಎಂದು ಪ್ರಶ್ನಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com