ಉಡುಪಿ: ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ಭಾರತದಲ್ಲಿ ಪ್ರತಿಭಟನೆಗೆ ವಿದೇಶಿ ಧನಸಹಾಯ ಕುರಿತು ನೀಡಿರುವ ಹೇಳಿಕೆ ಬಾಲಿಶವಾಗಿದ್ದು, ಇದು ಇತ್ತೀಚಿನ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಪಕ್ಷ ಸೋತ ನಂತರ ಅವರು ಹೇಗೆ ಹತಾಶರಾಗಿದ್ದಾರೆ ಎಂಬುದನ್ನು ತೋರಿಸುತ್ತದೆ ಎಂದು ಕಾಂಗ್ರೆಸ್ ಎಂಎಲ್ಸಿ ಮಂಜುನಾಥ್ ಭಂಡಾರಿ ಹೇಳಿದ್ದಾರೆ.
ದೆಹಲಿಯಲ್ಲಿ ನಡೆದ ಕುಸ್ತಿಪಟುಗಳ ಪ್ರತಿಭಟನೆಯನ್ನು ಉಲ್ಲೇಖಿಸಿದ ಶೋಭಾ ಅವರು ಶನಿವಾರದಂದು ಭಾರತದಲ್ಲಿನ ಪ್ರತಿಭಟನೆಗಳಿಗೆ ‘ವಿದೇಶಿ ಕೈ’ನಿಂದ ಹಣ ನೀಡಲಾಗುತ್ತದೆ ಎಂದು ಹೇಳಿದ್ದರು.
'ಎಲ್ಲಾ ತನಿಖಾ ಸಂಸ್ಥೆಗಳು ಕೇಂದ್ರದ ಬಳಿ ಇರುವುದರಿಂದ ಅವರ ಹೇಳಿಕೆ ನಿಜವಾಗಿದ್ದರೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ತನಿಖೆ ನಡೆಸಬಹುದು ಎಂದು ಭಂಡಾರಿ ಪ್ರತಿವಾದಿಸಿದರು.
ಕಾಂಗ್ರೆಸ್ನ ಐದು ಭರವಸೆಗಳಿಗೆ ಆರ್ಥಿಕ ಬೆಂಬಲದ ಬಗ್ಗೆ ಶಂಕೆ ವ್ಯಕ್ತಪಡಿಸಿದ ಶೋಭಾ ಅವರನ್ನು ಉಲ್ಲೇಖಿಸಿದ ಭಂಡಾರಿ, 'ಕೇಂದ್ರ ಸರ್ಕಾರವು ರಾಜ್ಯಕ್ಕೆ ಸಮಯಕ್ಕೆ ಸರಿಯಾಗಿ ಜಿಎಸ್ಟಿ ಪರಿಹಾರವನ್ನು ಬಿಡುಗಡೆ ಮಾಡಲಿ ಮತ್ತು ಐದು ಖಾತರಿ ಯೋಜನೆಗಳ ಅನುಷ್ಠಾನಕ್ಕೆ ಅಗತ್ಯವಿರುವ ಹಣದ ಬಗ್ಗೆ ಚಿಂತಿಸಬೇಡಿ. ನಾವು ಜನರಿಗೆ ಜವಾಬ್ದಾರರು ಮತ್ತು ನಾವು ಅವರಿಗೆ ಉತ್ತರಿಸುತ್ತೇವೆ, ಬಿಜೆಪಿ ನಾಯಕರಿಗೆ ಅಲ್ಲ' ಎಂದು ಕಿಡಿಕಾರಿದರು.
ಭಾನುವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಂಎಲ್ಸಿ, ಈ ಹಿಂದೆ ಬಿಜೆಪಿ ನಾಯಕರು ಐದು ಖಾತರಿ ಯೋಜನೆಗಳನ್ನು ಯಾವಾಗ ಜಾರಿಗೆ ತರುತ್ತೀರಿ ಎಂದು ಪ್ರಶ್ನಿಸುತ್ತಿದ್ದರು. ಈಗ, ಸರ್ಕಾರವು ಹಣವನ್ನು ಹೇಗೆ ಹೊಂದಿಸುತ್ತದೆ ಎಂದು ಪ್ರಶ್ನಿಸುತ್ತಿದ್ದಾರೆ. ಆದರೆ, ರಾಜ್ಯ ಸರ್ಕಾರ ತನ್ನ ಐದು ಖಾತರಿ ಯೋಜನೆಗಳನ್ನು ಪೂರೈಸಲು ಬದ್ಧವಾಗಿದೆ. ಡಕೋಟಾ ಬಸ್ಗಳಲ್ಲಿ ಜನ ಹೇಗೆ ಪ್ರಯಾಣಿಸುತ್ತಾರೆ ಎಂದು ಬಿಜೆಪಿ ನಾಯಕರೂ ವ್ಯಂಗ್ಯವಾಡುತ್ತಿದ್ದಾರೆ. ಈ ಹೇಳಿಕೆ ಮೂಲಕ ಬಿಜೆಪಿ ನಾಯಕರು ಸತ್ಯ ಮರೆಮಾಚಲು ಯತ್ನಿಸುತ್ತಿದ್ದಾರೆ. ಬಿಜೆಪಿ ಅಧಿಕಾರದಲ್ಲಿದ್ದಾಗ ಬೇರೆ ಬೇರೆ ಬಸ್ಗಳಿದ್ದವೇ, ಈಗಿರುವ ಅದೇ ಬಸ್ಗಳಲ್ಲಿ ಜನರು ಪ್ರಯಾಣಿಸುತ್ತಿರಲಿಲ್ಲವೇ? ಎಂದು ಪ್ರಶ್ನಿಸಿದರು.
Advertisement