'ಮೋದಿ ಹೆಸರು ಹೇಳಿಕೊಂಡು ವೋಟ್ ಹಾಕಿ ಅಂತಾ ಬರುವ ನಾಯಕರಿಗೆ ಚಪ್ಪಲಿಯಲ್ಲಿ ಹೊಡೆಯಿರಿ': ಪ್ರಮೋದ್ ಮುತಾಲಿಕ್
ಶಿರಸಿ: ಶ್ರೀರಾಮ ಸೇನೆ ನಾಯಕ ಪ್ರಮೋದ್ ಮುತಾಲಿಕ್ ಆಗಾಗ ಬಿಜೆಪಿ ವಿರುದ್ಧ ಹರಿಹಾಯುತ್ತಾರೆ. ಇತ್ತೀಚೆಗೆ ಶಿರಸಿಯಲ್ಲಿ ಸಾರ್ವಜನಿಕ ಭಾಷಣವೊಂದರಲ್ಲಿ ಮಾತನಾಡುವಾಗ ಪ್ರಧಾನಿ ನರೇಂದ್ರ ಮೋದಿ ಹೆಸರು ಹೇಳಿಕೊಂಡು ವೋಟ್ ಹಾಕಿ ಅಂತಾ ಬರುವ ನಾಯಕರಿಗೆ ಚಪ್ಪಲಿಯಲ್ಲಿ ಹೊಡೆಯಿರಿ ಆಕ್ರೋಶಭರಿತರಾಗಿ ಮಾತನಾಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಸೈದಾದ್ರಿ ರಂಗಮಂದಿರದಲ್ಲಿ ಆಯೋಜಿಸಿದ್ದ ಹಿಂದೂ ಸಮಾಜೋತ್ಸವದ ಕಾರ್ಯಕ್ರಮದಲ್ಲಿ ಮಾತನಾಡಿ, ನಾಲಾಯಕ್ ನಾಯಕರು ಇದ್ದಾರೆ. ಮೋದಿ ಹೆಸರು ಹೇಳಿಕೊಂಡು ವೋಟ್ ಹಾಕಿ ಎಂದು ಬರುತ್ತಾರೆ. ಅಂತವರಿಗೆ ಚಪ್ಪಲಿ ಏಟ ಕೊಡಿ ಎಂದು ಕರೆ ನೀಡಿದರು. ಆರೇಳು ಬಾರಿ ಗೆದ್ದವರಿದ್ದಾರೆ. ಕರ್ನಾಟಕವನ್ನ ಲೂಟಿ ಮಾಡಿದವರು ಇದ್ದಾರೆ. ಮೊದಲು ಇದ್ದಾಗ ಆಸ್ತಿ ಎಷ್ಟಿತ್ತು, ಈಗ ಎಷ್ಟಿದೆ ಅಂತಾ ಲೆಕ್ಕಾ ಹಾಕುವುದಕ್ಕೂ ಆಗುವುದಿಲ್ಲ ಅಷ್ಟು ಗಳಿಸಿದ್ದಾರೆ ಎಂದು ವಾಗ್ದಾಳಿ ಮಾಡಿದ್ದಾರೆ.
ಮೋದಿ ಹೆಸರು ಹೇಳಿ ಗೆದ್ದವರು: ನಾಚಿಕೆ, ಮಾನ, ಮರ್ಯಾದೆ ಇಲ್ಲದೆ ಮೋದಿ ಹೆಸರು ಹೇಳಿ ಗೆದ್ದವರು ನೀವು. ತಾಕತ್ ಇದ್ರೆ ಮೋದಿ ಹೆಸರು ಬಿಟ್ಟು ನಿಮ್ಮ ಅಭಿವೃದ್ಧಿ ಹೇಳಿ ಗೆದ್ದು ಬನ್ನಿ. ಪರೇಶ ಮೇಸ್ತಾ ಅನಾಥವಾಗಿ ಸತ್ತ. ರಕ್ತ ಬಲಿದಾನವಾದ್ರು ಏನು ಆಗಲಿಲ್ಲ. ಅವನ ಹೆಣದ ಮೇಲೆ ರಾಜಕೀಯ ಮಾಡಿದವರು ನೀವು. ಅವನ ಆತ್ಮ ಕೇಳುತ್ತಿದೆ ನ್ಯಾಯ ಕೊಡಿಸಿ ಅಂತಾ. ಅವನ ಆತ್ಮಕ್ಕೆ ಶಾಂತಿಯಿಲ್ಲದೆ ಇನ್ನು ಅಲೆಯುತ್ತಿದೆ, ನ್ಯಾಯ ಬೇಕು ಎಂದು.
ಸಿ.ಐ.ಡಿ, ಸಿ.ಬಿ.ಐ, ಎಲ್ಲಾ ಬಂತು ತನಿಖೆ ಮಾಡಿತು, ಏನು ಪ್ರಯೋಜನವಾಗಲಿಲ್ಲ. ಹಿಂದೂ ಆಕ್ರೋಶದ ಲಾಭ ಪಡೆದು ಅಧಿಕಾರಕ್ಕೆ ಬಂದ ನಾಲಾಯಕ, ನಿರ್ಲಜ್ಜರು ಇವರು. ಹಿಂದೂ ಸಮಾಜ ಉಳಿಸಿಕೊಳ್ಳಲು ಛತ್ರಪತಿ ಶಿವಾಜಿಯಂತೆ ಹೋರಾಡಬೇಕಾದ ಅನಿವಾರ್ಯತೆ ಇದೆ ಎಂದು ಮುತಾಲಿಕ್ ಹೇಳಿದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ